ವಿಬಿ ಜಿ ರಾಮ್ ಜಿ ಯೋಜನೆಯಡಿ ಕ್ರಿಯಾಯೋಜನೆ ತಯಾರಿಸುವಾಗ ರೈತರ ಹೊಲಗಳಿಗೆ ಆದ್ಯತೆಯ ಮೇಲೆ ಕಾಮಗಾರಿ ತೆಗೆದುಕೊಳ್ಳಬೇಕು. ವೈಯಕ್ತಿಕ ಕಾಮಗಾರಿಗಳ ಪೈಕಿ ಕೃಷಿಹೊಂಡ ಮಾಡುವುದಕ್ಕೆ ಒತ್ತು ನೀಡಿ, ಅದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ.
ಮುಂಡರಗಿ: ವಿಬಿ ಜಿ ರಾಮ್ ಜಿ ಯೋಜನೆಯಡಿ ಶಾಲೆ, ಗ್ರಂಥಾಲಯ, ಅಂಗನವಾಡಿ, ಸಮುದಾಯ ಭವನ ಮತ್ತು ರಂಗ ಮಂದಿರಗಳ ಕಟ್ಟಡ ನಿರ್ಮಾಣಕ್ಕೆ ಅವಕಾಶವಿದೆ. ಕೇಂದ್ರ ಸರ್ಕಾರ ಈ ಯೋಜನೆಯಡಿ ಒಟ್ಟು 318 ಕಾಮಗಾರಿ ತೆಗೆದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ವೈಯಕ್ತಿಕ ಕಾಮಗಾರಿಗಳ ಸಾಮಗ್ರಿಗಳ ಬಿಲ್ಗೆ ಅವಶ್ಯಕತೆಗೆ ಅನುಗುಣವಾಗಿ ನೀಡಬೇಕು. ಯಾವುದೇ ಕಾರಣಕ್ಕೂ ಪೇಮೆಂಟ್ ತಡೆಹಿಡಿಯಬಾರದು ಎಂದು ಶಾಸಕ ಡಾ. ಚಂದ್ರು ಲಮಾಣಿ ಸೂಚಿಸಿದರು.
ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಇತ್ತೀಚೆಗೆ ನಡೆದ ವಿಬಿ ಜಿ ರಾಮ್ ಜಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಬಿ ಜಿ ರಾಮ್ ಜಿ ಯೋಜನೆಯಡಿ ಕ್ರಿಯಾಯೋಜನೆ ತಯಾರಿಸುವಾಗ ರೈತರ ಹೊಲಗಳಿಗೆ ಆದ್ಯತೆಯ ಮೇಲೆ ಕಾಮಗಾರಿ ತೆಗೆದುಕೊಳ್ಳಬೇಕು. ವೈಯಕ್ತಿಕ ಕಾಮಗಾರಿಗಳ ಪೈಕಿ ಕೃಷಿಹೊಂಡ ಮಾಡುವುದಕ್ಕೆ ಒತ್ತು ನೀಡಿ, ಅದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ವಿಬಿ ಜಿರಾಮ್ಜಿ ಯೋಜನೆಯಿಂದ ರೈತರಿಗೆ ಒಳ್ಳೆಯ ಕೆಲಸ ಆಗುತ್ತಿವೆ ಎಂದರು.
ಬರದ ಪರಿಸ್ಥಿತಿ ಎದುರಾಗಿದ್ದು, ಕುಡಿಯುವ ನೀರಿಗೆ ಅಭಾವವಾಗದಂತೆ ನೋಡಿಕೊಳ್ಳಬೇಕು. ವಿಬಿ ಜಿ ರಾಮ್ ಜಿ ಯೋಜನೆಯಡಿ ಉದ್ಯೋಗ ನೀಡಬೇಕು. ಈ ಯೋಜನೆಯಲ್ಲಿ ಕಾಲುವೆಗಳ ಹೂಳು ತೆಗೆಸುವುದಕ್ಕೆ ಮುಂದಾಗಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ವಿಬಿ ಜಿ ರಾಮ್ ಜಿ ಯೋಜನೆ ಅಡಿಯಲ್ಲಿ ಈಗಾಗಲೇ 6ರಿಂದ 10 ಸಾವಿರ ಮಾನವ ದಿನಗಳ ಸೃಜನ ಮಾಡಿ ಹಮ್ಮಿಗಿ, ಬೀಡನಾಳ ಭಾಗದಲ್ಲಿ ಕಾಲುವೆ ಹೂಳು ತೆಗೆಸಲಾಗಿದೆ ಎಂದರು.
ಸಭೆಯಲ್ಲಿ ತಾಪಂ ಇಒ ವಿಜಯಕುಮಾರ ಬೆಣ್ಣಿ, ತಾಪಂ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ವಿಶ್ವನಾಥ ಹೊಸಮನಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಪಿಡಿಒ ಇದ್ದರು.ಅಂಚೆ ಕಚೇರಿ ಫ್ರಾಂಚೈಸಿ ಮಳಿಗೆಗಳ ಆರಂಭಕ್ಕೆ ಅರ್ಜಿ
ಗದಗ: ಜಿಲ್ಲೆಯ ಗದಗ ವಿಭಾಗೀಯ ಅಂಚೆ ಕಚೇರಿ ವ್ಯಾಪ್ತಿಯಲ್ಲಿ ಅಂಚೆ ಕಚೇರಿ ಫ್ರಾಂಚೈಸಿ ಮಳಿಗೆಗಳ ಆರಂಭಕ್ಕೆ ಅರ್ಜಿಗಳ ಆಹ್ವಾನಿಸಲಾಗಿದೆ.ಭಾರತ ಸರ್ಕಾರದ ಅಂಚೆ ಇಲಾಖೆ ಗ್ರಾಹಕರಿಗೆ ಅಂಚೆ ಸೇವೆಗಳನ್ನು ಇನ್ನಷ್ಟು ಸುಲಭ, ವೇಗವಾಗಿ ಹಾಗೂ ಸಮೀಪದಲ್ಲೇ ಒದಗಿಸುವ ಉದ್ದೇಶದಿಂದ ಗದಗ ಅಂಚೆ ವಿಭಾಗದ ವ್ಯಾಪ್ತಿಯ ಆಯ್ದ ಸ್ಥಳಗಳಲ್ಲಿ ಅಂಚೆ ಕಚೇರಿ ಫ್ರಾಂಚೈಸಿ ಮಳಿಗೆಗಳನ್ನು ಆರಂಭಿಸಲು ಅರ್ಹ ವ್ಯಕ್ತಿಗಳು, ಸ್ವಯಂ ಉದ್ಯೋಗಿಗಳು, ಸ್ವ- ಸಹಾಯ ಸಂಘಗಳು, ಸಹಕಾರ ಸಂಘಗಳು, ಸಂಸ್ಥೆಗಳು ಹಾಗೂ ಆಸಕ್ತ ಉದ್ಯಮಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಅಂಚೆ ಕಚೇರಿ ಫ್ರಾಂಚೈಸಿ ಯೋಜನೆಯಡಿ ಆಯ್ಕೆಯಾಗುವ ಫ್ರಾಂಚೈಸಿದಾರರು ಅಂಚೆ ಇಲಾಖೆಯ ನಿಯಮಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿ ಸಾರ್ವಜನಿಕರಿಗೆ ವಿವಿಧ ಅಂಚೆ ಸೇವೆಗಳನ್ನು ಒದಗಿಸಲಿದ್ದು, ಒದಗಿಸಲಾದ ಸೇವೆಗಳ ಆಧಾರದ ಮೇಲೆ ಇಲಾಖೆಯಿಂದ ನಿಗದಿಪಡಿಸಿರುವ ಕಮಿಷನ್ ಪಡೆಯಲಿದ್ದಾರೆ.
ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಅಂಚೆ ಅಧೀಕ್ಷಕರು ಗದಗ ಅಂಚೆ ವಿಭಾಗ ಗದಗ 582101, ಮೊ. 7975636514, ಇ- ಮೇಲ್ dogadag.ka@indiapost.gov.in ಈ ವಿಳಾಸಕ್ಕೆ ಸಲ್ಲಿಸಬೇಕು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.