ನರಗುಂದ: ವಿಕಸಿತ ಭಾರತ ವಿಬಿ ರಾಮ್ ಜಿ ಯೋಜನೆ ಮಧ್ಯವರ್ತಿಗಳ ಹಾವಳಿ ತಡೆಗಟ್ಟಿ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಮಾಡುವ ಗುರಿ ಹೊಂದಿದೆ. ಈ ಯೋಜನೆಯಿಂದ ವಿಕಸಿತ ಗ್ರಾಮದಿಂದ ವಿಕಸಿತ ಭಾರತ ನಿರ್ಮಾಣದ ಗುರಿ ಹೊಂದಲಾಗಿದೆ. ಭೃಷ್ಟಾಚಾರಕ್ಕೆ ಅವಕಾಶವೇ ಇಲ್ಲದಂತಾಗಿದೆ ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಲೋಕಸಭೆಯಲ್ಲಿ ವ್ಹಿಬಿ ಜಿ ರಾಮ್ ಜಿ ಯೋಜನೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದು, ಕಾನೂನು ಆಗಿ ರೂಪುಗೊಂಡಿದೆ. ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಈ ಯೋಜನೆ ವಿರೋಧ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ₹8 ಲಕ್ಷ ಕೋಟಿ ಸಾಲ ಮಾಡಿದೆ. ಇದರ ಬಡ್ಡಿ ತುಂಬುವುದೇ ಮುಂಬರುವ ಸರ್ಕಾರಗಳಿಗೆ ದೊಡ್ಡ ಸವಾಲಾಗಿದೆ ಎಂದರು.
ವಿಬಿ ಜಿ ರಾಮ್ ಜಿ ಯೋಜನೆಯು ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಗೆ ಬಲ ನೀಡುವ ಮಹತ್ವದ ಹೆಜ್ಜೆಯಾಗಿದೆ. ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಡಿಜಿಟಲ್ ಸೌಲಭ್ಯಗಳ ಮೂಲಕ ಗ್ರಾಮಗಳನ್ನು ಸ್ವಾವಲಂಬಿ ಮತ್ತು ಸಶಕ್ತವಾಗಿಸುವುದು ಇದರ ಮುಖ್ಯ ಉದ್ದೇಶ. ಈ ಯೋಜನೆಯ ಲಾಭಗಳನ್ನು ಪ್ರತಿಯೊಬ್ಬ ಗ್ರಾಮಸ್ಥನಿಗೂ ತಲುಪಿಸುವ ಮೂಲಕ ಗ್ರಾಮೀಣ-ನಗರ ಅಂತರವನ್ನು ಕಡಿಮೆ ಮಾಡಿ, ಸಮೃದ್ಧ ಮತ್ತು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಮಹತ್ವದ ಪಾತ್ರ ವಹಿಸುತ್ತದೆ ಎಂದರು.ಪಕ್ಷದ ಅಧ್ಯಕ್ಷ ನಾಗನಗೌಡ ತಿಮ್ಮನಗೌಡ್ರ ಮಾತನಾಡಿ, ಮಹಾತ್ಮಾ ಗಾಂಧಿಜಿ ಆತ್ಮದಲ್ಲಿನ ರಾಮನ ಹೆಸರನ್ನು ವಿಬಿ ಜಿ ರಾಮ್ ಜಿ ಯೋಜನೆಗೆ ಇಡಲಾಗಿದೆ. ವಿಕಸಿತ ಭಾರತದ ನಿರ್ಮಾಣವೇ ಈ ಯೋಜನೆಯ ಮುಖ್ಯ ಗುರಿ ಆಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಚಂದ್ರು ದಂಡಿನ, ಪ್ರಕಾಶಗೌಡ ತಿರಕನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ನಾಗನಗೌಡ ತಿಮ್ಮನಗೌಡ್ರ, ನಿಂಗಣ್ಣ ಗಾಡಿ, ಅಜ್ಜಪ್ಪ ಹುಡೇದ, ನಿಂಗಣ್ಣ ಗಾಡಿ, ಶೇಖರಗೌಡ ಸಾಲಿಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಉಮೇಶಗೌಡ ಪಾಟೀಲ, ಚಂದ್ರು ದಂಡಿನ, ನಿಂಗಪ್ಪ ಸೋಮಾಪೂರ, ಭೀಮಪ್ಪ ಹಾದಿಮನಿ, ತಮ್ಮಣ್ಣ ಮದುಗುಣಿಕಿ, ಹನುಮವ್ವ ಹಿರೇಮನಿ, ಶಿವಾನಂದ ಯಲಬಳ್ಳಿ, ಸೇರಿದಂತೆ ಮುಂತಾದವರು ಇದ್ದರು.