-ಕಾರ್ಮಿಕರಿಗೆ ಸಕಾಲಕ್ಕೆ ಕೂಲಿ ಹಣ ನೀಡುವಲ್ಲಿ ವಿಳಂಬ ಖಂಡಿಸಿ ಮಹಿಳೆಯರ ಆಕ್ರೋಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ವಿಬಿಜಿ ರಾಮ್ಜಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಸಕಾಲಕ್ಕೆ ಕೂಲಿ ಹಣ ಪಾವತಿಸದಿರುವುದನ್ನು ಖಂಡಿಸಿ ತಾಲೂಕಿನ ರಾಯಪುರ ಗ್ರಾಮದ ಮಹಿಳೆಯರು ತಾಲೂಕು ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕು ಪಂಚಾಯಿತಿ ಆವರಣದಲ್ಲಿ ನೂರಾರು ಮಹಿಳೆಯರು ಯೋಜನೆಯಡಿ ಕೆಲಸ ಮಾಡಿದ್ದರೂ ಸಕಾಲಕ್ಕೆ ಕಾರ್ಮಿಕರಿಗೂ ಕೂಲಿ ಹಣ ಪಾವತಿಸಲಾಗುತ್ತಿಲ್ಲ. ಕೆಲವರಿಗೆ ಮಾತ್ರ ಕೂಲಿ ಹಣ ಜಮೆಯಾಗಿದ್ದು, ಉಳಿದ ಕಾರ್ಮಿಕರಿಗೆ ಹಣ ಪಾವತಿಸಲಾಗಿಲ್ಲ. ಅಲ್ಲದೆ 15 ದಿನಗಳಲ್ಲಿ ಕೂಲಿ ಹಣ ವಿತರಿಸಬೇಕಿದ್ದರೂ ಅಧಿಕಾರಿಗಳು ಹಣ ಹಾಕುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಯೋಜನೆಯಡಿ ಕನಿಷ್ಠ 125 ದಿನಗಳ ಕೆಲಸ ನೀಡಬೇಕಿದ್ದರೂ ಸಮರ್ಪಕವಾಗಿ ಕೆಲಸ ನೀಡುತ್ತಿಲ್ಲ. ಎನ್ಎಂಎಂಎಸ್ ಮಾಡುವಾಗ ಕೆಲವರ ಹಾಜರಾತಿಯೂ ತಪ್ಪಾಗಿ ನಮೂದಾಗುತ್ತದೆ. ಹಾಗಾಗಿ, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕೂಲಿ ಕೆಲಸ ನೀಡುವ ಜತೆಗೆ ಸಕಾಲಕ್ಕೆ ಹಣ ಪಾವತಿಸಬೇಕು.
ಸ್ಥಳಕ್ಕೆ ಯೋಜನೆಯ ಸಹಾಯಕ ನಿರ್ದೇಶಕ ಗಣೇಶ್, ತಾಲೂಕು ಪಂಚಾಯಿತಿ ವ್ಯವಸ್ಥಾಪಕ ನಂದೀಶ್ ಆಗಮಿಸಿ ಸಮಸ್ಯೆಗಳ ಪರಿಹರಿಸುವ ಭರವಸೆ ನೀಡಿದಾಗ ಪ್ರತಿಭಟನೆ ಹಿಂಪಡೆದರು.