ಎನ್‌ವೈಜಿಗೆ ಅವಹೇಳನ ಖಂಡಿಸಿ ಕಾಂಗ್ರೆಸ್‌ ಆಕ್ರೋಶ

KannadaprabhaNewsNetwork |  
Published : Sep 04, 2026, 01:15 AM IST
ಫೋಟೋ ಶೀರ್ಷಿಕೆ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ  ಬೃಹತ್ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

Congress outraged, condemning insult to NYG

-ಮೊಳಕಾಲ್ಮುರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಪ್ರತಿಭಟನೆ । ಬಿಜೆಪಿ ಮುಖಂಡರ ವಿರುದ್ಧ ಮೊಳಗಿದ ಘೋಷಣೆಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹಿಸಿ ಬಿಜೆಪಿಯವರು ನಡೆಸಿದ ಪ್ರತಿಭಟನೆ ವೇಳೆ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರನ್ನು ಅವಹೇಳನವಾಗಿ ನಿಂದಿಸಿದ್ದಾರೆಂದು ಆರೋಪಿಸಿ, ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಆಡಳಿತ ಸೌಧದ ಆವರಣದಲ್ಲಿ ಸೇರಿದ್ದ ನೂರಾರು ಸಂಖ್ಯೆಯ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷದ ಬಾವುಟ ಹಿಡಿದು ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ, ಬಿಜೆಪಿ ಮುಖಂಡರ ವಿರುದ್ಧ ಘೋಷಣೆ ಕೂಗಿದರು.

ಕೆಇಬಿ ವೃತ್ತ, ಅಂಬೇಡ್ಕರ್ ವೃತ್ತದಿಂದ ಸಾಗಿದ ಮೆರವಣಿಗೆ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಈ ವೇಳೆ ಕಳೆದ ಬಾರಿಯ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ, ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಟಿ. ನಾಗರೆಡ್ಡಿ ಮಾತನಾಡಿ, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿರುವುದನ್ನು ಖಂಡಿಸಿ ಬಿಜೆಪಿಯವರು ನಡೆಸಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಶಾಸಕ ಎನ್.ವೈ. ಗೋಪಾಲಕೃಷ್ಣರನ್ನು ಅಸಮರ್ಥ ಎಂದು ಕರೆದಿರುವುದು ಅವರ ಹಿರಿತನಕ್ಕೆ ಮಾಡಿದ ಅವಮಾನವಾಗಿದೆ.

ಹಲವು ವರ್ಷಗಳ ರಾಜಕೀಯ ಅನುಭವ ಹೊಂದಿದ್ದು, ತಾಲೂಕಿನ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಅವರನ್ನು ಮಂಡಲ ಮಾಜಿ ಅಧ್ಯಕ್ಷ ಡಾ. ಮಂಜುನಾಥ್, ಪ್ರಭಾಕರ ಮ್ಯಾಸನಾಯಕ, ಅನಿಲ್ ಕುಮಾರ್ ಕೆಟ್ಟದಾಗಿ ಮಾತನಾಡಿ, ಅವಮಾನಿಸುವುದು ಸಲ್ಲದು.

ಕಳೆದ ಅವಧಿಯಲ್ಲಿ ಬಿಜೆಪಿಯವರು ತಾಲೂಕಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿ, ಸರ್ಕಾರದ ಅನುದಾನ ದುರುಪಯೋಗ ಮಾಡಿಕೊಂಡಾಗ ಮಾತನಾಡದ ಇಂತವರು ಶಾಸಕರ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದು ತರವಲ್ಲ ಎಂದು ಟೀಕಿಸಿದರು.

ಇದೇ ವೇಳೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಪ್ರಕಾಶ ಮಾತನಾಡಿ, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ತಾಲೂಕು ಬರ ಪಟ್ಟಿಗೆ ಸೇರ್ಪಡೆಯಾಗುವುದು ಶತಸಿದ್ಧ. ಈ ಕುರಿತು ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಈಗಾಗಲೇ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿದ್ದು ಇನ್ನೂ ಕೆಲವೇ ದಿನಗಳಲ್ಲಿ ತಾಲೂಕು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್ ಪೀರ್ ಮಾತನಾಡಿ, ರೈತರ ಹಿತದೃಷ್ಟಿಯಿಂದ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಈ ವಿಚಾರದಲ್ಲಿ ರಾಜಕೀಯ ಮಾಡದೆ ಜನರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಪಕ್ಷಾತೀತವಾಗಿ ಸಹಕರಿಸಿದೆ. ಶಾಸಕ ಎನ್.ವೈ. ಗೋಪಾಲಕೃಷ್ಣ ಅವರನ್ನು ಹೊಣೆಯಾಗಿಸುವುದು ಶೋಭೆ ತರುವುದಿಲ್ಲ. ಬರ ಘೋಷಣೆಯಲ್ಲಿ ಕೇಂದ್ರ ಸರ್ಕಾರವು ಭಾಗವಾಗಿರುತ್ತದೆ. ಅದನ್ನು ಅರಿತು ಮಾತನಾಡಬೇಕು ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಬಿ.ಟಿ. ನಾಗಭೂಷಣ, ಹಿರಿಯ ಮುಖಂಡ ಅಬ್ದುಲ್ ಸುಭಾನ್ ಸಾಬ್, ಸಿದ್ದಬಸಪ್ಪ, ಕುಮಾರಸ್ವಾಮಿ, ವಿಜಯ ಕುಮಾರ್, ಬಸವರಾಜಪ್ಪ, ಬಿ.ಪಿ. ವಿಜಯಕುಮಾರ್, ದಡಗೂರು ಮಂಜಣ್ಣ, ಭರತ್ ಕುಮಾರ್, ಹಿರೇಹಳ್ಳಿ ಮಲ್ಲೇಶ್, ನಾಯಕನಹಟ್ಟಿ ಮುದಿಯಪ್ಪ, ಹಿರೇಹಳ್ಳಿ ಮಂಜಮ್ಮ, ಬುಕ್ಕೂರಹಳ್ಳಿ ರಾಜಣ್ಣ, ಅಗಸಮುದ್ರ ಗೋವಿಂದಪ್ಪ, ಮಾರಣ್ಣ, ತಿಪ್ಪೇರುದ್ರಪ್ಪ, ಕೊಂಡಾಪುರ ಪರಮೇಶ್, ದೇವಸಮುದ್ರ ಪರಮೇಶಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರಿಗೆ ಸಂವೇದನಾಶೀಲತೆ ಗುಣ ಅಗತ್ಯ
ಸಿದ್ದೇಶ್ವರ ಸ್ವಾಮೀಜಿ ಶತಮಾನದ ಶ್ರೇಷ್ಠ ಸಂತ