ವಿಸಿ ನಾಲೆ ಆಧುನೀಕರಣ ಕಾಮಗಾರಿ ಆರಂಭ

KannadaprabhaNewsNetwork | Published : Feb 27, 2024 1:34 AM

ಸಾರಾಂಶ

ಕೆಆರ್ ಎಸ್ ಅಣೆಕಟ್ಟೆ ವ್ಯಾಪ್ತಿಯ ಅತಿದೊಡ್ಡ ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿ ಆರಂಭಗೊಂಡಿದ್ದು, ರೈತರಿಗೆ ಒಂದೆಡೆ ಖುಷಿಕೊಟ್ಟರೆ, ಮತ್ತೊಂದೆಡೆ ಬೆಳೆಗಳಿಗೆ ನೀರಿಲ್ಲದ ಆತಂಕ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ ಕೆಆರ್ ಎಸ್ ಅಣೆಕಟ್ಟೆ ವ್ಯಾಪ್ತಿಯ ಅತಿದೊಡ್ಡ ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿ ಆರಂಭಗೊಂಡಿದ್ದು, ರೈತರಿಗೆ ಒಂದೆಡೆ ಖುಷಿಕೊಟ್ಟರೆ, ಮತ್ತೊಂದೆಡೆ ಬೆಳೆಗಳಿಗೆ ನೀರಿಲ್ಲದ ಆತಂಕ ಎದುರಾಗಿದೆ.ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ವೇಳೆ, ಸಿ.ಎಸ್.ಪುಟ್ಟರಾಜು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ 2018-19ನೇ ಸಾಲಿನಲ್ಲಿ ಸರ್ಕಾರ ವಿಸಿ ನಾಲೆಯ ಆಧುನೀಕರಣಕ್ಕಾಗಿ 300 ಕೋಟಿ ರು. ಅನುದಾನ ಬಿಡುಗಡೆ ಮಾಡಿ ಬಜೆಟ್ ನಲ್ಲಿ ಘೋಷಿಸಿದ್ದರು. ಜಿಲ್ಲೆಯ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣವಾಗಿ ಇಲ್ಲಿಯವರೆಗೆ ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ನಡೆದಿರಲಿಲ್ಲ. ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಸೇರಿದಂತೆ ಅಂದಿನ ಜಿಲ್ಲಾ ಜೆಡಿಎಸ್ ಶಾಸಕರ ಮನವಿಯಿಂದಾಗಿ ಅನುದಾನ ಬಿಡುಗೆಯಾಗಿತ್ತು.

ಕೆಆರ್‌ಎಸ್ ಅಣೆಕಟ್ಟೆಯಿಂದ 46.05 ಕಿಮೀ ದೂರದ ವರೆಗೆ ವಿಶ್ವೇಶ್ವರಯ್ಯ ನಾಲೆಯ ಆಧುನೀಕರಣಕ್ಕಾಗಿ 30 ಕೋಟಿ ಅನುದಾನ ಬಿಡುಗಡೆ ಆಗಿತ್ತು. ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವರಾದ ಸಿ.ಎಸ್‌ಪುಟ್ಟರಾಜು ಗುದ್ದಲಿ ಪೂಜೆಯನ್ನು ಸಹ ನೆರವೇರಿಸಿದ್ದರು.ಆದರೆ, ನಾಲೆ ಆಧುನೀಕರಣದ ಕೆಲಸ ಆರಂಭವಾಗುವಷ್ಟರಲ್ಲಿ ಉತ್ತಮ ಮಳೆಯಾಗಿ ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಿ ನಾಲೆಗೆ ನೀರು ಹರಿಸಲಾಯಿತು. ನಂತರ ವರ್ಷಗಳಲ್ಲಿಯೂ ಕಾಮಗಾರಿಯನ್ನು ಮಾಡಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ನಿರೀಕ್ಷಿತ ಮಳೆಯಾಗದೆ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಬಹುಬೇಗ ನೀರು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನಾಲೆಗೆ ನೀರು ಹರಿಸಲು ಸಾಧ್ಯವಾಗಲಿಲ್ಲ. ಅಣೆಕಟ್ಟೆ ನೀರನ್ನು ಕುಡಿಯುವುಕ್ಕೆ ಮಾತ್ರ ಬಳಕೆ ಎಂದು ತೀರ್ಮಾನಿಸಿ ನಾಲೆ ಆಧುನೀಕರಣ ಆರಂಭಿಸಲಾಗಿದೆ. ಸ್ಟಾರ್ ಬಿಲ್ಡರ್ ಕಂಪನಿ ಗುತ್ತಿಗೆ ಪಡೆದು ನಾಲೆ ಆಧುನೀಕರಣದ ಕೆಲಸವನ್ನು ಮತ್ತೆ ಆರಂಭಿಸಿದೆ. ನಾಲೆಯ ಆಧುನೀಕರಣವನ್ನು ಮುಂದಿನ 3 ರಿಂದ 4 ತಿಂಗಳ ಒಳಗಾಗಿ ಒಳಗಾಗಿ ಪೂರ್ಣಗೊಳಿಸಬೇಕೆಂಬ ಸೂಚನೆಯನ್ನು ಗುತ್ತಿಗೆದಾರರಿಗೆ ನೀಡಲಾಗಿದೆ.

ನಾಲೆಗೆ ನೀರು ಹರಿಸುವುದು ಕಷ್ಟ: ನಾಲೆ ಆಧುನೀಕರಣ ಆರಂಭಗೊಂಡಿರುವ ಕಾರಣ ಮತ್ತೆ ನಾಲೆಗೆ ನೀರು ಹರಿಸುವುದು ಕನಸಿನ ಮಾತು. ಇದರಿಂದ ವಿಸಿ ನಾಲಾ ವ್ಯಾಪ್ತಿಯಲ್ಲಿ ನಾಲೆ ನೀರನ್ನೇ ನೆಚ್ಚಿಕೊಂಡು ಬೆಳೆದಿದ್ದ ಕಬ್ಬು ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲಾಗದೇ ರೈತರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಕೊರತೆ ಎದುರಾದ ಹಿನ್ನೆಲೆಯಲ್ಲಿ ವಿಧಿಇಲ್ಲದೆ ರೈತರು 5 ರಿಂದ 6 ತಿಂಗಳ ಬೆಳೆದಿದ್ದ ಕಬ್ಬನೇ ಕೊಟ್ಟಷ್ಟು ಹಣಕ್ಕೆ ಸಕ್ಕರೆ ಕಾರ್ಖಾನೆಗಳಿಗೆ ಕಟಾವು ಮಾಡಿಸುತ್ತಿದ್ದಾರೆ. ನಾಲಾ ವ್ಯಾಪ್ತಿಯಲ್ಲಿ ಲಕ್ಷಾಂತರ ಎಕರೆ ಕಬ್ಬು ನೀರಿಲ್ಲದೇ ಒಣಗುತ್ತಿರುವುದು ರೈತರ ಆತಂಕಕ್ಕೂ ಕಾರಣವಾಗಿದೆ.

ವಿಸಿ ನಾಲೆ ಆಧುನೀಕರಣದ ಜೊತೆಗೆ ಹೊಸದಾಗಿ 7 ಹೊಸ ಮೇಲ್ಸೇತುಗಳನ್ನು ಸಹ ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಹಿಂದಿನ ಸರಕಾರವೇ ಹೊಸ 7 ಸೇತುವೆಗಳನ್ನುನಿರ್ಮಿಸಲು ಮಂಜೂರು ಮಾಡಿಸಿದೆ. ಮಾಜಿ ಸಚಿವ ಸಿ..ಎಸ್.ಪುಟ್ಟರಾಜು ಅವರು ಪಟ್ಟಣದ ಗಾಂಧಿ ಬಡಾವಣೆಯ ನಿವಾಸಿಗಳ ಅನುಕೂಲಕ್ಕಾಗಿ ಅಲ್ಲಿಗೆ ಹೊಸ ಸೇತುವೆ ಮಂಜೂರು ಮಾಡಿಸಿದ್ದರು. ಇದೀಗ ಆ ಸೇತುವೆ ಕೆಲಸವು ಸಹ ಆರಂಭಗೊಂಡಿದೆ. ಉಳಿದಂತೆ ಅರಳಕುಪ್ಪೆಯಲ್ಲಿ 4, ಎಲೆಕೆರೆ ಹ್ಯಾಂಡ್ ಪೋಸ್ಟ್ ನಲ್ಲಿ ಒಂದು ಮೇಲ್ಸೇತುವೆ ನಿರ್ಮಾಣವಾಗುತ್ತಿದೆ.

ವಿತರಣಾ ನಾಲೆಗಳ ಅಭಿವೃದ್ಧಿಗೆ ಆಗ್ರಹ:ವಿಸಿ ನಾಲೆ ಆಧುನೀಕರಣ ಕಾಮಗಾರಿ ಆರಂಭಗೊಂಡಿದೆ. ಆದರೆ, ವಿಸಿ ಮುಖ್ಯ ನಾಲೆ ವಿತರಣಾ ನಾಲೆಗಳು ಸಹ ಸಂಪೂರ್ಣ ಅಧ್ವಾನಗೊಂಡಿವೆ. ನಾಲಾ ವ್ಯಾಪ್ತಿಯ ಎಲ್ಲಾ ವಿತರಣೆ ನಾಲೆಗಳಲ್ಲಿ ಗಿಡಗಂಟಿಗಳು ಬೆಳೆದು ಹೂಳು ತುಂಬಿಕೊಂಡಿವೆ. ತಡೆಗೋಡೆಗಳು, ಮೋರಿಗಳು ಕುಸಿದು ಹೋಗಿವೆ. ವಿತರಣಾ ನಾಲೆಗಳಿಂದ ರೈತರ ಜಮೀನುಗಳಿಗೆ ನೀರು ಸಂರ್ಪಕವಾಗಿ ತುಲುಪುತ್ತಿಲ್ಲ. ಅದಕ್ಕಾಗಿ ಈಗಿನ ಸರ್ಕಾರ ವಿಸಿ ನಾಲೆಯ ವಿತರಣಾ ನಾಲೆಗಳ ಆಧುನೀಕರಣಗೊಳಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

17 ಕಿಮೀ ಉದ್ದ ತಡೆಗೋಡೆ ನಿರ್ಮಾಣ: ವಿಸಿ ನಾಲೆ ಆಧುನೀಕರಣದ ಜತೆಯಲ್ಲಿಯೇ ನಾಲಾ ವ್ಯಾಪ್ತಿಯಲ್ಲಿ ಬರುವ ಪ್ರಮುಖ ರಸ್ತೆಗಳ ಬದಿಯಲ್ಲಿ ಸುಮಾರು 17 ಕಿಮೀ ಉದ್ದದ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ನಾಲೆ ಏರಿಯ ಮೇಲಿನ ರಸ್ತೆಗಳಲ್ಲಿ ತಡೆಗೋಡೆಗಳು ಇಲ್ಲದ ಪರಿಣಾಮವಾಗಿ ಹಲವು ಅಪಘಾತಗಳು ಜರುಗಿ ಸಾವು-ನೋವುಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ನಾಲೆ ಬದಿಯಲ್ಲಿ ಇರುವಂತಹ ಎಲ್ಲಾ ರಸ್ತೆಗಳ ಪಕ್ಕದಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕು ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿಬಂದ ಹಿನ್ನೆಲೆಯಲ್ಲಿ ಅಪಘಾತ ಪ್ರಕರಣಗಳ ತಪಿಸುವ ಸಲುವಾಗಿ ಕಾವೇರಿ ನೀರಾವರಿ ಇಲಾಖೆಯ ಅಧಿಕಾರಿಗಳು ತಡೆಗೋಡೆಗಳನ್ನು ನಿರ್ಮಿಸಲು ಕ್ರಮ ವಹಿಸಿದ್ದಾರೆ.

2018-19ನೇ ಸಾಲಿನಲ್ಲಿ ಮಂಜೂರಾಗಿದ್ದ ವಿಸಿ ನಾಲೆ ಆಧುನೀಕರಣ ಕಾಮಗಾರಿ ಮತ್ತೆ ಆರಂಭಗೊಂಡಿದೆ. ಅಣೆಕಟ್ಟೆಯಲ್ಲಿ ನೀರು ಕಡಿಮೆ ಇವರ ಕಾರಣ ನಾಲೆಗೆ ನೀರು ಹರಿಸಲಾಗದು. ಆ ಹಿನ್ನೆಲೆಯಲ್ಲಿ ಆಧುನೀಕರಣ ಆರಂಭಗೊಂಡಿದೆ. ಕಾಮಗಾರಿ ಬರದಿಂದ ಸಾಗುತ್ತಿದೆ. ನಾಲೆ ಜತೆಗೆ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಮುಂದಿನ ಮೂರ್ನಾಲ್ಕು ತಿಂಗಳೊಳಗೆ ನಾಲೆ ಆಧುನೀಕರಣ ಪೂರ್ಣಗೊಳ್ಳಲಿದೆ.

-ಜಯಂತ್, ಇಇ, ಕಾವೇರಿ ನೀರಾವರಿ ನಿಗಮ.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ, ಸಿ.ಎಸ್.ಪುಟ್ಟರಾಜು ಸಣ್ಣ ನೀರಾವರಿ ಸಚಿವರಾಗಿದ್ದಾಗ ಸರ್ಕಾರ ಮಂಜೂರು ಮಾಡಿದ್ದ ವಿಸಿ ನಾಲೆಯ ಆಧುನೀಕರಣ ಕಾಮಗಾರಿ ತಡವಾಗಿಯಾದರೂ ನಡೆಯುತ್ತಿರುವುದು ಖುಷಿಯ ವಿಚಾರ. ವಿಸಿ ನಾಲೆ ಆಧುನೀಕರಣದ ಜತೆಗೆ ಈಗಿನ ಸರ್ಕಾರ ವಿತರಣಾ ನಾಲೆಗಳ ಆಧುನೀಕರಣವನ್ನು ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು.

ಮಹೇಶ್ ಸುಂಕಾತೊಣ್ಣೂರು ಗ್ರಾಪಂ ಸದಸ್ಯರು.

Share this article