ರಾಯಚೂರು ತಾಲೂಕಿನ ಸುಕ್ಷೇತ್ರ ಮಟಮಾರಿ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ರಥೋತ್ಸವಕ್ಕೆ ಬಿಚ್ಚಾಲಿ-ಮಟಮಾರಿ ಸಂಸ್ಥಾನ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ತಾಲೂಕಿನ ಸುಕ್ಷೇತ್ರ ಮಟಮಾರಿ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ರಥೋತ್ಸವವು ಗುರುವಾರ ಸಂಜೆ ಅದ್ಧೂರಿಯಾಗಿ ನಡೆಯಿತು.
ಬನದ ಹುಣ್ಣಿಮೆಯಂದು ಶ್ರೀ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಗ್ರಾಮದಲ್ಲಿ ಸಡಗರ ಸಂಭ್ರಮ ಮನೆ ಮಾಡಿತ್ತು. ಕಾಯಿ ಕರ್ಪೂರ, ನೈವೇದ್ಯ ಸಮರ್ಪಿಸಿ ಭಕ್ತಿ ಮೆರೆದರು.
ಬೆಳಗ್ಗೆಯಿಂದ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಸರದಿಯಲ್ಲಿ ನಿಂತು ದರ್ಶನ ಪಡೆದರು. ಸಂಜೆ ಕಿಕ್ಕಿರಿದು ಸೇರಿದ್ದ ಭಕ್ತ ಸಮೂಹದ ಮಧ್ಯೆ ಬಿಚ್ಚಾಲಿ-ಮಟಮಾರಿ ಸಂಸ್ಥಾನ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳ ಮಂಗಳಾರತಿ ಮಾಡುವುದರೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಿದರು.
ಸಂಜೆ ಬಾಜಿ ಭಜಂತ್ರಿಯೊಂದಿಗೆ ಪಲ್ಲಕ್ಕಿಯಲ್ಲಿ ಶ್ರೀ ವೀರಭದ್ರೇಶ್ವರರ ಉತ್ಸವ ಮೂರ್ತಿಯ ಮೆರವಣಿಗೆ, ಯುವಕರು ನಂದಿಕೋಲು ಕುಣಿಸಿದರು.
ಜಾತ್ರೋತ್ಸವದಲ್ಲಿ ರಾಯಚೂರಿನ ಸೋಮವಾರ ಪೇಟೆ ಮಠದ ಶ್ರೀ ಅಭಿನವ ವೀರರಾಚೋಟಿ ಸ್ವಾಮೀಜಿ, ನೀಲಗಲ್ ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯರು, ಕಿರಿಯ ಸ್ವಾಮೀಜಿ ಬಾಲಯೋಗಿ ರೇಣುಕಾ ಶಾಂತಮಲ್ಲ ಸ್ವಾಮೀಜಿ, ಉಡಮಗಲ್ ಖಾನಾಪೂರದ ಶ್ರೀ ವೀರಸಂಗಮೇಶ್ವರ ಸ್ವಾಮೀಜಿಗಳು, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಬಸನಗೌಡ ದದ್ದಲ್, ಡಾ.ಶಿವರಾಜ ಪಾಟೀಲ, ಮುಖಂಡರಾದ ಎನ್.ಶಂಕ್ರಪ್ಪ, ವೀರನಗೌಡ ಪಾಟೀಲ್, ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಉರುಕುಂದಪ್ಪ ನಾಯಕ ಸಾಹುಕಾರ, ಯುವ ಮುಖಂಡ ಶಿವಪ್ಪ ನಾಯಕ, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ ಸೇರಿದಂತೆ ಅನೇಕರು ತಮ್ಮ ಬೆಂಬಲಿಗರೊಂದಿಗೆ ಜಾತ್ರೋತ್ಸವದಲ್ಲಿ ಪಾಲ್ಗೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.