ಪರಿಶಿಷ್ಟ ಜಾತಿ ಗಣತಿಯಲ್ಲಿ ವೀರಶೈವ ಜಂಗಮ ದಾಖಲೀಕರಣ ಬೇಡ

KannadaprabhaNewsNetwork | Updated : May 11 2025, 06:31 AM IST
ನ್ಯಾ. ನಾಗಮೋಹನ್ ದಾಸ್ ಆಯೋಗ ನಡೆಸುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ತಮ್ಮನ್ನು ಸೇರ್ಪಡೆ ಮಾಡಲು ವೀರಶೈವ ಜಂಗಮ ಸಮುದಾಯದವರು ಒತ್ತಾಯಿಸಿದ್ದಾರೆ.
Follow Us

 ಹೊಸಪೇಟೆ : ನ್ಯಾ. ನಾಗಮೋಹನ್ ದಾಸ್ ಆಯೋಗ ನಡೆಸುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ತಮ್ಮನ್ನು ಸೇರ್ಪಡೆ ಮಾಡಲು ವೀರಶೈವ ಜಂಗಮ ಸಮುದಾಯದವರು ಒತ್ತಾಯಿಸುತ್ತಿದ್ದು, ಈ ಸಮುದಾಯವನ್ನು ಗಣತಿ ವೇಳೆ ದಾಖಲೀಕರಣ ಮಾಡಬಾರದು ಎಂದು ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟ ಹಾಗೂ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್ ಸಂಘ, ದಲಿತಪರ ಸಂಘಟನೆಗಳು ಗುರುವಾರ ಒತ್ತಾಯಿಸಿವೆ.

ಈ ಕುರಿತು ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು. ನ್ಯಾ. ನಾಗಮೋಹನ್ ದಾಸ್ ಆಯೋಗ ನಡೆಸುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ತನ್ನ ಜಾತಿಯನ್ನು ಸೇರ್ಪಡೆ ಮಾಡಲು ವೀರಶೈವ ಜಂಗಮ ಸಮುದಾಯದವರು ಒತ್ತಾಯಿಸುತ್ತಿದ್ದಾರೆ.

ಒಳಮೀಸಲಾತಿಯನ್ನು ಜಾರಿ ಮಾಡುವುದಕ್ಕಾಗಿ ಕರ್ನಾಟಕದಲ್ಲಿರುವ 101 ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ನಡೆಸಲು ಆಯೋಗ ಮತ್ತು ಸರ್ಕಾರ ಮುಂದಾಗಿದೆ. ಮೇ 5ರಿಂದ ಪ್ರಾರಂಭವಾದ ಈ ಸಮಗ್ರ ಸಮೀಕ್ಷೆಯ ಆರಂಭದ ಹಂತದಲ್ಲಿ ವೀರಶೈವ ಜಂಗಮರು ತಮ್ಮ ಸಮುದಾಯವನ್ನೂ ಸಮೀಕ್ಷೆಗೆ ಒಳಪಡಿಸಿ ಎಂದು ಗಣತಿದಾರರನ್ನು ಒತ್ತಾಯಿಸಲು ಮುಂದಾಗಿದ್ದಾರೆ ಎಂದು ದೂರಿದರು.

ಕರ್ನಾಟಕದಲ್ಲಿರುವ ಬುಡ್ಗ ಜಂಗಮ, ವೇಷ ಹಾಕಿಕೊಂಡು ಭಿಕ್ಷೆ ಬೇಡುವ ಸಮುದಾಯ ಆಗಿದೆ. ಈ ಸಮುದಾಯಕ್ಕೆ ಬುಡ್ಗ ಜಂಗಮ ಸಮುದಾಯಕ್ಕೆ ಎರಡು ಪರ್ಯಾಯ ಹೆಸರುಗಳಿರುವುದನ್ನು ಮಾನವಕುಲಶಾಸ್ತ್ರೀಯ ಅಧ್ಯಯನ ಮಾಡಿರುವ ಕೆ. ಎಸ್. ಸಿಂಗ್‌ರವರು ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ ೧೯ ಮತ್ತು 20 ನೇ ಶತಮಾನದಲ್ಲಿ ಮದ್ರಾಸ್ ಪ್ರಾಂತ್ಯದ ಜಾತಿ ಸಮುದಾಯಗಳನ್ನು ಅಧ್ಯಯನ ಮಾಡಿದ ಎಡ್ಗರ್ ಥರ್ಸಟನ್ ಸಹ ವೇಷ ಹಾಕಿಕೊಂಡು ಭಿಕ್ಷೆ ಬೇಡುವ ಸಮುದಾಯವಾದ ಬುಡ್ಗ ಜಂಗಮ ಸಮುದಾಯಕ್ಕೆ ಬೇಡ ಜಂಗಮ ಎಂಬ ಪರ್ಯಾಯ ಹೆಸರಿರುವುದನ್ನು ಗುರುತಿಸಿದ್ದಾರೆ ಎಂಬುದನ್ನು ಮನವಿಯಲ್ಲಿ ತಿಳಿಸಿದ್ದಾರೆ.

ವೀರಶೈವ ಜಂಗಮರು ಮಾತ್ರ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 19ರಲ್ಲಿರುವ ಬೇಡ ಜಂಗಮ ಸಮುದಾಯ ಎಂದರೆ ನಾವೇ ಎಂದು ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳುತ್ತಿದ್ದಾರೆ. ಈಗ ನ್ಯಾ. ನಾಗಮೋಹನ್ ದಾಸ್ ಆಯೋಗದಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ತಮ್ಮನ್ನೂ ಒಳಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಈ ವೀರಶೈವ ಜಂಗಮರು ಅಲೆಮಾರಿ ಬುಡ್ಗ ಜಂಗಮರಂತೆ ವೇಷ ಹಾಕಿಕೊಂಡು ಭಿಕ್ಷೆ ಬೇಡುವ ಸಮುದಾಯವಲ್ಲ. ಆದರೂ ಸಹ ಈ ವೀರಶೈವ ಜಂಗಮರು ತಾವು ಬೇಡ ಜಂಗಮರು ಎಂದು ಹೇಳಿಕೊಳ್ಳುತ್ತಾ ನೈಜ ಪರಿಶಿಷ್ಟ ಜಾತಿಗೆ ಸೇರಿದ ಬುಡ್ಗ ಜಂಗಮ ಸಮುದಾಯಕ್ಕೆ ಲಭ್ಯವಾಗಬೇಕಾದ ಸಾಂವಿಧಾನಿಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಹವಣಿಸುತ್ತಿದ್ದಾರೆ. ಹಾಗಾಗಿ ಗಣತಿ ವೇಳೆ ವೀರಶೈವ ಜಂಗಮ ಸಮುದಾಯವನ್ನು ಸೇರ್ಪಡೆ ಮಾಡಬಾರದು ಎಂದು ಆಗ್ರಹಿಸಿದರು.

ಅಲೆಮಾರಿ ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ರಾಜ್ಯಾಧ್ಯಕ್ಷ ಸಣ್ಣ ಮಾರೆಪ್ಪ, ಮುಖಂಡರಾದ ಬಣ್ಣದಮನೆ ಸೋಮಶೇಖರ, ಶಿವಕುಮಾರ, ಕಿನ್ನೂರು ಶೇಖಪ್ಪ, ಜೆ.ರಮೇಶ, ಸಿದ್ದು ಬೆಳಗಲ್, ಹಂಪಯ್ಯ ಮತ್ತಿತರರಿದ್ದರು.