ವೀರಶೈವ ಲಿಂಗಾಯತಕ್ಕೆ ಒಂದೇ ಮೀಸಲು ಅಗತ್ಯ: ಶ್ರೀವಚನಾನಂದ ಸ್ವಾಮೀಜಿ

KannadaprabhaNewsNetwork | Published : Jan 16, 2024 1:51 AM

ಸಾರಾಂಶ

ವೀರಶೈವ ಲಿಂಗಾಯತರಲ್ಲಿ ಕೆಲವರು 2 ಎ, 3 ಎ, 2 ಬಿ ಹಾಗೂ ಕೆಲವರು ಎಸ್‌ಸಿ ಮೀಸಲಾತಿ ಪಡೆಯುತ್ತಿದ್ದಾರೆ ಎಂದರು. ಮೀಸಲಾತಿಯು ನಮ್ಮ ಸಮುದಾಯಕ್ಕೆ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವಂತಾಗಿದೆ. ನಾವು ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಒತ್ತಾಯಿಸುತ್ತಿದ್ದೇವೆ.

ಹರಿಹರ ಪಂಚಮಸಾಲಿ ಪೀಠದ ಹರಜಾತ್ರಾ ಮಹೋತ್ಸವ

ಕನ್ನಡಪ್ರಭ ವಾರ್ತೆ ದಾವಣಗೆರೆ/ ಹರಿಹರ

ಸಮಸ್ತ ವೀರಶೈವ ಲಿಂಗಾಯತ ಸಮಾಜಕ್ಕೆ ಒಂದೇ ಮೀಸಲಾತಿ ಇರಬೇಕು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದರು.

ಹರಿಹರ ತಾಲೂಕು ಹನಗವಾಡಿ ಸಮೀಪದ ಪಂಚಮಸಾಲಿ ಪೀಠದಲ್ಲಿ ಸೋಮವಾರ ಹರಜಾತ್ರಾ ಮಹೋತ್ಸವ ಹಾಗೂ ಪೀಠಾರೋಹಣದ ವರ್ಷಾಚರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ವೀರಶೈವ ಲಿಂಗಾಯತರಲ್ಲಿ ಕೆಲವರು 2 ಎ, 3 ಎ, 2 ಬಿ ಹಾಗೂ ಕೆಲವರು ಎಸ್‌ಸಿ ಮೀಸಲಾತಿ ಪಡೆಯುತ್ತಿದ್ದಾರೆ ಎಂದರು.

ಮೀಸಲಾತಿಯು ನಮ್ಮ ಸಮುದಾಯಕ್ಕೆ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವಂತಾಗಿದೆ. ನಾವು ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಒತ್ತಾಯಿಸುತ್ತಿದ್ದೇವೆ. ನಮ್ಮ ಸಮಾಜದ 2 ಎ ಮೀಸಲಾತಿಗಾಗಿ ಕಾನೂನು ಹೋರಾಟ ಮಾಡುತ್ತೇವೆ ಎಂದರು.

ಒಬಿಸಿ ಪಟ್ಟಿಗೆ ಸೇರ್ಪಡೆಗೆ ಶಿಫಾರಸ್ಸು ಮಾಡಲಿ: ಶಾಮನೂರು

ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ರಾಜ್ಯ ಸರ್ಕಾರವು ಯಾವುದೇ ರಾಜಕೀಯ ಮಾಡದೇ, ಸಕಲ ವೀರಶೈವ ಲಿಂಗಾಯತರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು, ಶಿಫಾರಸ್ಸು ಮಾಡಲಿ. ವೀರಶೈವ ಲಿಂಗಾಯತ ಬೇರೆ ಬೇರೆಯಲ್ಲ ಎಲ್ಲರೂ ಒಂದೇ. ವೀರಶೈವ ಲಿಂಗಾಯತರು ಒಳ ಪಂಗಡಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ಎಲ್ಲರೂ ಒಂದೇ ಎಂಬುದನ್ನು ಮೊದಲು ಅರಿಯಬೇಕು ಎಂದರು.

ವೀರಶೈವ ಲಿಂಗಾಯತ ಸಮಾಜದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ, ಉದ್ಯೋಗಕ್ಕೆ ಅನುಕೂಲವಾಗಲೆಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ದಾವಣಗೆರೆಯಲ್ಲಿ ನಡೆಸಿದ ಮಹಾ ಅಧಿವೇಶನ ಮೂಲಕ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಿಸಿದೆ. ಈಚೆಗೆ ಪಂಚಮಸಾಲಿ ಬಾಂಧ‍ರೂ ಬೆಳ‍ವಣಿಗೆ ಹೊಂದುತ್ತಿರುವುದು ಆಶಾದಾಯಕ ಸಂಗತಿ ಎಂದು ಶ್ಲಾಘಿಸಿದರು.

ಶ್ರೀಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ರಾಜ್ಯಾಧ್ಯಕ್ಷ ಬಸವರಾಜ ದಿಂಡೂರು, ಎಸ್ಸೆಸ್ ಟ್ರಸ್ಟ್‌ನ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ, ರಾಣೆಬೆನ್ನೂರು ಮಾಜಿ ಶಾಸಕ ಅರುಣಕುಮಾರ ಪೂಜಾರ, ಪಿ.ಡಿ.ಶಿರೂರು, ಜ್ಯೋತಿ ಪ್ರಕಾಶ, ಚಂದ್ರಶೇಖರ ಪೂಜಾರ, ರಾಜಕುಮಾರ ಹೊನ್ನಾಳಿ, ಹಿರಿಯ ವಕೀಲರಾದ ಪ್ರಕಾಶ ಪಾಟೀಲ, ಬಸವರಾಜ ಉಚ್ಚಂಗಿದುರ್ಗ, ವಸಂತ ಹುಲ್ಲತ್ತಿ, ರಶ್ಮಿ ಕುಂಕದ್‌, ಡಿ.ಜೆ. ಶಿವಾನಂದಪ್ಪ, ಗುತ್ತೂರು ಹಾಲೇಶಗೌಡ, ಕಕ್ಕರಗೊಳ್ಳ ಮಂಜುನಾಥ ಪುರವಂತರ, ಕರಿಬಸಪ್ಪ ಕಂಚಿಕೇರಿ ಹರಿಹರ, ಕರಿಬಸಪ್ಪ ಗುತ್ತೂರು, ಬಾದಾಮಿ ಜಯಣ್ಣ, ಲಿಂಗಾರಾಜ್ ಪಟೇಲ್ ಬೆಳಕೇರಿ, ಶಿವಪ್ಪ ಬಂಕಾಪುರ, ಮಲ್ಲಿಕಾರ್ಜುನ, ಆಶೋಕ ಬೆಂಡಿಗೇರಿ, ಸೋಮಶೇಖರ್, ಬಾತಿ ರವಿಕುಮಾರ್, ಶ್ರೀಶೈಲ ಇತರರಿದ್ದರು.ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಿ

ಸಕಲ ವೀರಶೈವ ಲಿಂಗಾಯತರನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು. ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಮೀಸಲಾತಿ ಪ್ರಕಟಿಸಿದ್ದನ್ನು ನಾವು ವಿರೋಧಿಸಲು ಇಲ್ಲ, ಸ್ವಾಗತಿಸಲೂ ಇಲ್ಲ. ಮೀಸಲಾತಿಗೆ ಬೇಕಾದ ಕಾನೂನು ಹೋರಾಟ ಮಾಡುತ್ತಿದ್ದೇವೆ. ಸುಮಾರು 900 ಪುಟದಷ್ಟು ದಾಖಲೆಗಳ ಸರ್ಕಾರಕ್ಕೆ ನೀಡಿದ್ದೇವೆ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ.

ಶ್ರೀ ವಚನಾನಂದ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠಾಧ್ಯಕ್ಷಹರಜಾತ್ರೆ ಜಾಗೃತಿಗೆ ಹೊರತು, ಸಮಾಜ ಒಡೆಯಲಲ್ಲ

* ಅಕ್ಕಮಹಾದೇವಿ ವಚನಗಳ ಪಲ್ಲಕ್ಕಿ ಮಹೋತ್ಸವದಲ್ಲಿ ವಚನಾನಂದ ಶ್ರೀ ಹೇಳಿಕೆ

ದಾವಣಗೆರೆ/ ಹರಿಹರ: ಪ್ರತಿ ಸಂಕ್ರಾಂತಿಯಂದು ಹರಿಹರದ ಪಂಚಮಸಾಲಿ ಪೀಠದಲ್ಲಿ ಹರ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಿರುವುದು ಸಮಾಜ ಜಾಗೃತಿಗಾಗಿಯೇ ಹೊರತು, ಸಮಾಜ ಒಡೆಯುವ ಕೆಲಸಕ್ಕೆ ಅಲ್ಲ ಎಂದು ಶ್ರೀಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಹರಿಹರದ ಪಂಚಮಸಾಲಿ ಪೀಠದಲ್ಲಿ ಮಹಾಶರಣೆ ಅಕ್ಕ ಮಹಾದೇವಿ ವಚನಗಳ ಪಲ್ಲಕ್ಕಿ ಮಹೋತ್ಸವ ಹಾಗೂ ಶ್ರೀಗಳ 6ನೇ ವರ್ಷದ ಪೀಠಾರೋಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ ವೀರಶೈವ ಲಿಂಗಾಯತ ಸಮಾಜದಲ್ಲಿ ಬಹುಸಂಖ್ಯಾತರು ಪಂಚಮಸಾಲಿಗಳು. ಶೈಕ್ಷಣಿಕ, ಆರ್ಥಿಕ, ಆಧ್ಯಾತ್ಮಿಕ, ಸಾಮಾಜಿಕ, ರಾಜಕೀಯವಾಗಿ ಸಮಾಜವನ್ನು ಮುಖ್ಯ ವಾಹಿನಿಗೆ ತರುವ ಸದುದ್ದೇಶದಿಂದ ಪ್ರತಿ ವರ್ಷ ಹರ ಜಾತ್ರೆ ಆಚರಿಸಲಾಗುತ್ತದೆ ಎಂದರು.

ಸಮಾಜ ಬಾಂಧ‍ವರು ಧ್ವನಿ ಎತ್ತಿ:

ಕೃಷಿಯನ್ನೇ ನಂಬಿರುವ ಸಮುದಾಯ ನಮ್ಮದು. ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಸಮಸ್ತ ರೈತರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅದ್ಧೂರಿಯಾಗಿ ಹರಜಾತ್ರೆ ಮಾಡದೇ, ಸರಳವಾಗಿ ಆಚರಿಸಲಾಗುತ್ತಿದೆ. ಸಮಾಜ ಬಾಂಧ‍ವರು ಸ್ವಯಂ ಪ್ರೇರಿತರಾಗಿ ಸೇರಿ ಸಮಾಜ ಸಂಘಟನೆ ಜೊತೆಗೆ ಸಮಾಜಕ್ಕೆ 2 ಎ ಮೀಸಲಾತಿ ಹಾಗೂ ವೀರಶೈವ ಲಿಂಗಾಯತ ಸಮಾಜವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡುವ ಧ್ವನಿಗೆ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಕರೆ ನೀಡಿದರು.ರಾಷ್ಟ್ರಧರ್ಮ ವಿಚಾರ ಬಂದಾಗ ನಾವು ಹಿಂದುಗಳು: ವಚನಾನಂದ ಸ್ವಾಮೀಜಿ

ರಾಷ್ಟ್ರ, ರಾಜ್ಯ ವಿಚಾರ ಬಂದಾಗ ನಾವೆಲ್ಲ ಭಾರತೀಯರು, ಕನ್ನಡಿಗರಾಗಿ ಪರಂಪರೆ, ಸಂಸ್ಕೃತಿ ವಿಚಾರ ಬಂದಾಗ ವೀರಶೈವರಾಗಿ, ಸಮುದಾಯದ ವಿಚಾರ ಬಂದಾಗ ನಾವೆಲ್ಲರೂ ಪಂಚಮಸಾಲಿಗಳಾಗಿ, ರಾಷ್ಟ್ರಧರ್ಮದ ವಿಚಾರ ಬಂದಾಗ ನಾವೆಲ್ಲಾ ಹಿಂದುಗಳಾಗಿ, ವೀರಶೈವ ಲಿಂಗಾಯತ ಎಂಬ ಬೇಧಭಾವ ಮರೆತು, ನಾವೆಲ್ಲಾ ಹಿಂದುಗಳು ಒಂದೆಂಬ ಭಾವನೆ ಬೆಳೆಸಿಕೊಳ್ಳೋಣ ಎಂದು ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದರು. ಹರಿಹರ ಪಂಚಮಸಾಲಿ ಪೀಠದಲ್ಲಿ ಹರ ಜಾತ್ರೆಯಲ್ಲಿ ಮಾತನಾಡಿ, ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಾಗೂ ಶ್ರೀರಾಮ ಮಂದಿರ ಉದ್ಘಾಟನಾ ಸಮಯದಲ್ಲಿ ಪ್ರತಿ ಮನೆಯಲ್ಲೂ ದೀಪ ಹಚ್ಚಿ, ಅದೇ ದಿನದಂದು ಶ್ರೀರಾಮ ನವಮಿ ಆಚರಣೆ ಎಂಬುದಾಗಿ ಭಾವಿಸಿ, ಪೂಜೆ ಮಾಡುವ ಮೂಲಕ ಶ್ರೀರಾಮನ ಆರಾಧಿಸಬೇಕು ಎಂದು ಕರೆ ನೀಡಿದರು. .............................ಪಂಚಮಸಾಲಿಗಳಿಗೆ ಪ್ರಾತಿನಿಧ್ಯ ಅನುಸಾರ ಟಿಕೆಟ್ ನೀಡಿಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಪಂಚಮಸಾಲಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚು ಪ್ರಾತಿನಿಧ್ಯ ನೀಡಬೇಕು. ಪಂಚಮಸಾಲಿ ಸಮಾಜವೂ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳೂ ವೀರಶೈವ ಲಿಂಗಾಯತ ಸಮುದಾಯದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮಾಜದ ಒತ್ತಾಯವೂ ಆಗಿದೆ ಎಂದು ವಚನಾನಂದ ಸ್ವಾಮೀಜಿ ಹೇಳಿದರು...........

Share this article