ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟ ದರ್ಶನ್ ವಿರುದ್ಧ ಕೊಡಗಿನಲ್ಲಿಯೂ ಆಕ್ರೋಶ ವ್ಯಕ್ತವಾಗಿದ್ದು ವೀರಶೈವ ಲಿಂಗಾಯತ ಸಮಾಜ ಬುಧವಾರ ಸೋಮವಾರಪೇಟೆಯಲ್ಲಿ ಪ್ರತಿಭಟನೆ ನಡೆಸಿದೆ.ವಿವಿಧ ವೀರಶೈವ ಲಿಂಗಾಯತ ಸಂಘಟನೆಗಳು ಸ್ವಾಮೀಜಿಗಳ ಸಮ್ಮುಖದಲ್ಲಿ ಪಟ್ಟಣದ ತಾಲೂಕು ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಹಾಗೂ ಮೃತ ರೇಣುಕಾ ಸ್ವಾಮಿ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.
ಈ ಸಂದರ್ಭ ಕಲ್ಲುಮಠದ ಮಹಾಂತ ಸ್ವಾಮೀಜಿ ಮಾತನಾಡಿ ಇಂದು ಸಮಾಜದಲ್ಲಿ ಹಿಂಸೆ, ಕ್ರೌರ್ಯ ಹೆಚ್ಚುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲಾ, ರೇಣುಕಾ ಸ್ವಾಮಿಯನ್ನು ಹಿಂಸಿಸಿ ಕೊಲೆಮಾಡಿದ್ದಾರೆ ಅವರ ಕುಟುಂಬ ಅನಾಥವಾಗಿದೆ.ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದರು.ಇಂಥ ಕೃತ್ಯಗಳು ನೆಡೆದಿರುವುದು ಮಾನವ ಸಂಕುಲಕೆ ಕಳಂಕ ತಂದಿದ್ದೆ. ಇನ್ನು ಮುಂದೆ ಈ ರೀತಿ ಅಮಾನುಷವಾಗಿ ಕೊಲೆಯಾಗುತ್ತಿರುವ ವ್ಯಕ್ತಿ ಗಳಿಗೆ ಸರಿಯಾದ ನ್ಯಾಯ ದೊರಕಬೇಕಿದೆ ಎಂದರು.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಮಾತನಾಡಿ, ಆರೋಪಿ ಸ್ಥಾನದಲ್ಲಿರುವ ಚಿತ್ರ ನಟ ದರ್ಶನ್ ಮಾಡಿರುವ ಕಾರ್ಯ ನಾಗರೀಕ ಸಮಾಜ ತಲೆ ತಗ್ಗಿಸುವಂತಹದಾಗಿದೆ. ಸಮಾಜ ತಿದ್ದುವಂತಹ ಜವಾಬ್ದಾರಿ ಇರುವಂತಹ ಇವರು ಕಾನೂನು ಕೈಗೆ ತೆಗೆದುಕೊಂಡಿದ್ದು ಸರಿಯಲ್ಲ,ಇದೆ ರೀತಿ ಎಲ್ಲಾರೂ ಹೀಗೆ ಮಾಡಿದರೆ ಕಾನೂನು ಸುವ್ಯವಸ್ಥೆಯ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದರು.ದರ್ಶನ್ ಮಾಡಿರುವ ಕೃತ್ಯ ಇಡಿ ಸಮಾಜವೇ ಸಹಿಸಲಾರದಷ್ಟು ಘನ ಘೋರ ಕೃತ್ಯವಾಗಿದೆ. ಪೊಲೀಸ್ ಇಲಾಖೆ ಬಗೆದಷ್ಟೂ ಇವನ ಕೃತ್ಯಗಳು ಹೊರಬರುತ್ತಿವೆ. ಅಭಿಮಾನಿಗಳು ಅವರ ನಟನೆಗೆ ಸೀಮಿತವಾಗಿರಲಿ. ಸಮಾಜಕ್ಕೆ ಕಳಂಕ ತರುವ ವ್ಯಕ್ತಿಗಳ ಪರವಾಗಿ ನಿಲ್ಲುವ ಕೆಲಸ ಆಗಬಾರದು. ನಮ್ಮ ಕರ್ನಾಟಕ ಪೊಲೀಸ್ ಯಾವುದೇ ಆಮಿಷಕ್ಕೆ ಒಳಗಾಗದೆ ದಕ್ಷತೆಯಿಂದ ಕಾರ್ಯನಿರ್ವಹಿದ್ದಾರೆ. ಇವರ ಕಾರ್ಯ ಶ್ಲಾಘನೀಯ ಎಂದರು.
ಮುದ್ದಿನ ಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ, ಕಲ್ಲಳ್ಳಿ ಮಠದ ಶ್ರೀ.ರುದ್ರಮುನಿ ಸ್ವಾಮೀಜಿ, ಶಿಡಿಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ದಿವಾಕರ, ಮಹಿಳಾ ಘಟಕದ ಕಾರ್ಯದರ್ಶಿ ಗೀತರಾಜು, ತಾಲೂಕು ಘಟಕದ ಕಾರ್ಯದರ್ಶಿ ಪ್ರಕಾಶ್, ಜಿಲ್ಲಾ ವೀರಶೈವ ಲಿಂಗಾಯತ ಅರ್ಚಕರ ಸಂಘದ ಗೌರವಾಧ್ಯಕ್ಷ ಮೋಹನ ಮೂರ್ತಿ, ಕಾರ್ಯದರ್ಶಿ ಬಸವಕುಮಾರ ಶಾಸ್ತ್ರಿ, ಸೋಮವಾರಪೇಟೆ ವೀರಶೈವ ಸಮಾಜದ ಶೆಟ್ರು ಮೃತ್ಯುಂಜಯ, ಕಾರ್ಯದರ್ಶಿ ನಾಗರಾಜ್, ನಿರ್ದೇಶಕರಾದ ಗಿರೀಶ್, ಮಂಜುನಾಥ್, ಯೋಗೇಶ್, ಅಕ್ಕನ ಬಳಗದ ಉಪಾಧ್ಯಕ್ಷೆ ಗೀತಾ, ಪದಾಧಿಕಾರಿಗಳಾದ ರಜಿನಿ, ಅನುಪಮ, ಆಶಾ ಹೂವಯ್ಯ, ಪವಿತ್ರ ಸೇರಿದಂತೆ ವೀರಶೈವ ಲಿಂಗಾಯತ ಪ್ರಮುಖರು ಹಾಜರಿದ್ದರು.