ಇದೀಗ ತಿರುಪತಿ ವಿವಿಯಲ್ಲಿ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಇದ್ದು, ಈಗಲಾದರೂ ಅಲ್ಲೊಂದು ವೀರಶೈವ ಅದ್ಯಯನ ಪೀಠ ಸ್ಥಾಪಿಸುವ ಮೂಲಕ ವೀರಶೈವ ಧರ್ಮ ಸಿದ್ದಾಂತ ಮತ್ತಿತರ ಸಮಗ್ರ ಅಧ್ಯಯನಕ್ಕೆ ಅವಕಾಶ ಮಾಡಿಕೊಡಬೇಕಿದೆ.
ಕನ್ನಡಪ್ರಭ ವಾರ್ತೆ ಕೊಟ್ಟೂರು
ವೀರಶೈವ ಅಧ್ಯಯನ ಕೇಂದ್ರವನ್ನು ತಿರುಪತಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸುವ ಪ್ರಯತ್ನವನ್ನು ಹತ್ತಾರು ವರ್ಷಗಳಿಂದ ಮಾಡಲಾಗಿತ್ತು. ಅಧ್ಯಯನಕಾರರ ಕೊರತೆಯಿಂದಾಗಿ ಅದು ಈಡೇರಿರಲಿಲ್ಲ. ಇದೀಗ ತಿರುಪತಿ ವಿವಿಯಲ್ಲಿ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಇದ್ದು, ಈಗಲಾದರೂ ಅಲ್ಲೊಂದು ವೀರಶೈವ ಅದ್ಯಯನ ಪೀಠ ಸ್ಥಾಪಿಸುವ ಮೂಲಕ ವೀರಶೈವ ಧರ್ಮ ಸಿದ್ದಾಂತ ಮತ್ತಿತರ ಸಮಗ್ರ ಅಧ್ಯಯನಕ್ಕೆ ಅವಕಾಶ ಮಾಡಿಕೊಡಬೇಕಿದೆ ಎಂದು ಕಾಶಿ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಇಲ್ಲಿನ ಚಾನುಕೋಟಿ ಸಭಾಂಗಣದಲ್ಲಿ ಶ್ರೀ ಆದಿ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಮತ್ತು ಚಾನುಕೋಟಿ ಮಠಾದ್ಯಕ್ಷ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿಯವರ ಷಷ್ಟಿ ಸಂಭ್ರಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಬಹಳಷ್ಟು ಪುರಾತನವಾಗಿರುವ ವೀರಶೈವ ಪರಂಪರೆ ಹಲವು ಬಗೆಯ ವೈಶಿಷ್ಟಗಳ ಹೂರಣವಾಗಿದೆ. ಈಗಾಗಲೇ ಹೊಸಬಗೆಯ ಅವಿಷ್ಕಾರಗಳು ನಾನಾ ರೀತಿಯಲ್ಲಿ ನಡೆದಿವೆ. ಇನ್ನೊಷ್ಟು ಆಳವಾಗಿ ನಡೆಯಬೇಕಿದೆ ಎಂದರು.
ಆರೋಗ್ಯ ಸಂಪತ್ತು ಉಳಿದೆಲ್ಲಾ ಸಂಪತ್ತುಗಳಿಗಿಂತ ಪ್ರಮುಖವಾದುದಾಗಿದ್ದು, ಆರೋಗ್ಯವನ್ನು ಚೆನ್ನಾಗಿ ಜೀವಂತ ಇರುವವರೆಗೂ ಕಾಪಾಡಿಕೊಂಡು ಬರಬೇಕೆಂದರೆ ಪ್ರತಿಯೊಬ್ಬರು ಯೋಗಿಯಾಗುವ ಪ್ರಯತ್ನ ಮಾಡಬೇಕು. ರೋಗ ಮುಕ್ತ ಸಮಾಜ ನಿರ್ಮಾಣ ವಾಗದೇ ಹೊರತು ನೈಜ ಬದುಕಿನ ನೆಮ್ಮದಿ ಜೀವನ ಯಾರಿಗೂ ಸಿಗದು ಎಂದರು.
ಡಿವೈಎಸ್ಪಿ ಸಂತೋಷ್ ಮಾತನಾಡಿ, ಒತ್ತಡದ ಬದುಕಿನಲ್ಲಿ ಆರೋಗ್ಯವನ್ನು ಮತ್ತು ನಮ್ಮನ್ನು ನಾವು ಕಾಪಾಡಿಕೊಳ್ಳಬೇಕೆಂದರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾನು ತೊಡಗಿಸಿಕೊಳ್ಳುತ್ತಿರುವ ಕಾರಣಕ್ಕಾಗಿ ನೆಮ್ಮದಿಯ ಬದುಕನ್ನು ಸಾಗಿಸುತ್ತಿರುವೆ ಎಂದು ಹೇಳಿದರು.
ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು ಚಾನುಕೋಟಿ ಮಠಾಧ್ಯಕ್ಷ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.