ಕೊಪ್ಪಳ: ಮಾನವ ಕುಲದ ಏಳಿಗಾಗಿ ಶ್ರಮಿಸಿದ್ದವರು ಮಹಾಯೋಗಿ ವೇಮನವರು ಎಂದು ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಹೇಳಿದರು.
ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ ಮಾತನಾಡಿ, 15ನೇ ಶತಮಾನದಲ್ಲಿ ಆಂಧ್ರಪ್ರದೇಶದ ತೆಲುಗಿನ ಶ್ರೇಷ್ಠ ವಚನಕಾರ, ಕವಿ, ಸಮಾಜ ಚಿಂತಕ, ಮಾನವಕುಲದ ಏಳ್ಗೆಗಾಗಿ ಶ್ರಮಿಸಿದ ಮಹಾಯೋಗಿ ವೇಮನರ ತತ್ವ ಮತ್ತು ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು. ಕೊಪ್ಪಳದ ನಿವೃತ್ತ ಪ್ರಾಚಾರ್ಯ ಡಾ. ವಿ.ಬಿ. ರಡ್ಡೇರ್ ಅವರು ಮಹಾಯೋಗಿ ವೇಮನರ ಕುರಿತು ವಿಶೇಷ ಉಪನ್ಯಾಸ ನೀಡಿದರು. ವೇಮನರು ಸರಳ ಭಾಷೆಯಲ್ಲಿ ಚತುಷ್ಪದಿಗಳನ್ನು ರಚಿಸುವ ಮೂಲಕ ಜನರಲ್ಲಿನ ಜೀವನದ ಮೌಲ್ಯಗಳನ್ನು ಜಾಗ್ರತಗೊಳಿಸಿದರು. ವಿವಿಧ ಭಾಷೆಗಳಲ್ಲಿ ಪ್ರಕಟಗೊಂಡ ವೇಮನರ ಪದ್ಯಗಳಿಗೆ ವಿದೇಶಿಗರಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಜಗತ್ತಿಗೆ ದಾರ್ಶನಿಕರು ಸಿದ್ಧಾಂತಗಳನ್ನು ಬಿಟ್ಟು ಹೋಗಿದ್ದು, ಅವುಗಳ ಮೇಲೆ ನಾವೆಲ್ಲರೂ ನಡೆಯಬೇಕು. ಕಾಲಕಾಲಕ್ಕೆ ಶರಣರು, ಶರಣ ಪರಂಪರೆ, ದಾಸರು, ದಾಸ ಪರಂಪರೆ ಹೀಗೆ ಹಲವಾರು ಮಹನೀಯರು ತಮ್ಮ ತತ್ವಾದರ್ಶಗಳು, ವೈಜ್ಞಾನಿಕ ಚಿಂತನೆಗಳ ಮೂಲಕ ಸಮಾಜ ಸುಧಾರಣೆಗಾಗಿ ಶ್ರಮಿಸುವ ಜತೆಗೆ ಮಾನವ ಜೀವನ ವಾಸ್ತವ್ಯಗಳನ್ನು ತಿಳಿಸಿದ್ದಾರೆ. ಅಂತಹ ಮಹನೀಯರಲ್ಲಿ ವೇಮನರು ಒಬ್ಬರು ಎಂದರು.
ಕೃಷ್ಣಾರಡ್ಡಿ ಗಲಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಎಚ್.ಎಲ್. ಹಿರೇಗೌಡರ, ರಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಜಗದೀಶಪ್ಪ ಸಿಂಗ್ನಾಳ, ಮುಖಂಡರಾದ ಬಸವರಾಜ ಪುರದ, ಬಸವರಡ್ಡಿ ಹಳ್ಳಿಕೇರಿ, ಪ್ರಭು ಹೆಬ್ಬಾಳ, ನಿರ್ಮಲಾ ಕಾಶೀನಾಥ ರಡ್ಡಿ ಅವಾಜಿ, ಹನುಮರಡ್ಡಿ ಹಂಗನಕಟ್ಟಿ, ಶಂಕ್ರಗೌಡ ಹಿರೇಗೌಡ್ರ, ನಾಗನಗೌಡ ನಂದಿನಗೌಡ್ರ, ವಿರೂಪಾಕ್ಷಪ್ಪ ನವೋದಯ, ಚಂದ್ರಶೇಖರ ಪಾಟೀಲ ಉಪಸ್ಥಿತರಿದ್ದರು.