ಕನ್ನಡಪ್ರಭ ವಾರ್ತೆ ಹನೂರು
ಇಂಡಿಗನತ್ತ ಗ್ರಾಮಸ್ಥರು ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಚುನಾವಣಾ ಬಹಿಷ್ಕಾರ ಮಾಡಿದ್ದರು. ಆದರೆ ಕೆಲವು ಸಂಗತಿಗಳು ಗ್ರಾಮಸ್ಥರನ್ನು ರೊಚ್ಚಿಗೇಳುವಂತೆ ಮಾಡಿ ಈ ಕಹಿ ಘಟನೆ ನಡೆಯುವಂತೆ ಮಾಡಿತು. ಘಟನಾ ಸಂದರ್ಭದಲ್ಲಿ ಕೆಲವರು ತನ್ನದಲ್ಲದ ತಪ್ಪಿಗೆ ಮಹಿಳೆಯರು, ಮಕ್ಕಳು, ವಯೋವೃದ್ಧರು ಶಿಕ್ಷೆ ಅನುಭವಿಸುವಂತಾಯಿತು. ಮತಗಟ್ಟೆ ದ್ವಂಸ ಪ್ರಕರಣದಲ್ಲಿ ಇಂಡಿಗನತ್ತ ಗ್ರಾಮದ 46 ಜನರನ್ನು ಬಂಧಿಸಲಾಗಿತ್ತು. ಬಿಜೆಪಿ ಹಿಂದುಳಿದ ಮಂಡಲದ ಜಿಲ್ಲಾಧ್ಯಕ್ಷ ಜನದ್ವನಿ ವೆಂಕಟೇಶ್, ಬೇಡಗಂಪಣ ಸಮುದಾಯದ ಅಧ್ಯಕ್ಷ ಪುಟ್ಟಣ್ಣ, ಹಿರಿಯ ಮುಖಂಡರಾದ ಕೆ.ವಿ. ಮಾದೇಶ್, ಮುರುಗೇಶ್ ಪುರಾಣಿ ,ಮಹೇಶ್, ಸಿದ್ದರಾಜು ಸಹಾಯದೊಂದಿಗೆ ಕೊಳ್ಳೇಗಾಲದ ಹಿರಿಯ ವಕೀಲ ಶಶಿಬಿಂಬ ನೇತೃತ್ವದಲ್ಲಿ ಮೈಸೂರು ಮತ್ತು ಚಾಮರಾಜನಗರ ಕಾರಾಗೃಹದಲ್ಲಿದ್ದ ಇಂಡಿಗನತ್ತ ಗ್ರಾಮಸ್ಥರನ್ನು ಬಿಡುಗಡೆ ಮಾಡಿಸಲು ಮೊದಲ ದಿನದಿಂದಲೇ ಶ್ರಮಿಸಿದ್ದರು.
ಕಾರಾಗೃಹದಲ್ಲಿದ್ದ ಮಹಿಳೆಯರು, ಪುರುಷರಿಗೆ ಹೊಸ ಬಟ್ಟೆ ಹಾಗೂ ಅವರಿಗೆ ಅವಶ್ಯಕತೆಯಿದ್ದ ಸಾಮಾಗ್ರಿಗಳನ್ನು ವಿತರಣೆ ಮಾಡಿ 46 ಜನರ ಬಿಡುಗಡೆಗೂ ಆರ್ಥಿಕವಾಗಿ ಸಹಾಯ ಮಾಡುವುದರ ಮೂಲಕ ಜನಧ್ವನಿ ವೆಂಕಟೇಶ್ ಮಾನವೀಯತೆ ಮೆರೆದಿದ್ದಾರೆ.ಸತತ ಪ್ರಯತ್ನ: ಗ್ರಾಮಸ್ಥರನ್ನು ಕಾರಾಗೃಹಕ್ಕೆ ಕರೆದುಕೊಂಡು ಹೋದ ದಿನದಿಂದ ಸತತವಾಗಿ 21 ದಿನಗಳ ಕಾಲವೂ ಅವರನ್ನು ಭೇಟಿಯಾಗಿ ಸಂತೈಸಿ ಧೈರ್ಯ ತುಂಬಿ ಜಾಮೀನಿನ ಮೇಲೆ ಬಿಡುಗಡೆ ಮಾಡಿಸಲು ಯಶಸ್ವಿಯಾಗಿದ್ದಾರೆ.
ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಗ್ರಾಮಸ್ಥರು ಮಾತನಾಡಿ, ನಮ್ಮನ್ನು ವೈದ್ಯಕೀಯ ಚಿಕಿತ್ಸೆ ಮಾಡಿಸುತ್ತೇನೆ ಎಂದು ಕರೆದುಕೊಂಡು ಹೋದರು. ನಾವು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ, ನಾವು ನಮ್ಮ ಹಕ್ಕಿಗಾಗಿ ಪ್ರತಿಭಟನೆ ಮಾಡಿದ್ದು ನಿಜ. ಆದರೆ ಈ ತರಹ ಘಟನೆ ಆಗುತ್ತದೆ ಎಂದು ನಮಗೆ ಕೂಡ ತಿಳಿದಿರಲಿಲ್ಲ, ನಮ್ಮವರಿಗೆ ತೊಂದರೆಯಾಗುತ್ತಿದೆ ಎಂದು ಹೋಗಿದ್ದೆವು, ಆದರೆ ಗಲಾಟೆ ಮಾಡುವ ಉದ್ದೇಶ ಇರಲಿಲ್ಲ ನಿರಪರಾಧಿಗಳಾದ ನಮ್ಮನ್ನು ಅಪರಾಧಿಗಳೆಂದು ಬಿಂಬಿಸಿದ್ದಾರೆ ಜೊತೆಗೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನಮ್ಮ ಮೇಲೆ ನಡೆಸಿದ ಹಲ್ಲೆ ಮರೆಮಾಚಿ ಅವರು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ನಮ್ಮನ್ನು ತಪ್ಪಿತಸ್ಧರನ್ನಾಗಿ ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಇದರಿಂದಾಗಿ ನಮ್ಮ ಕುಟುಂಬದ ಮಕ್ಕಳು ಮತ್ತು ಹಿರಿಯರು ಹೆಣ್ಣು ಮಕ್ಕಳನ್ನು ಬಿಟ್ಟು 21 ದಿನಗಳು ಜೈಲಿನಲ್ಲಿ ನಾವುಗಳು ದುಃಖದಿಂದ ಕಷ್ಟಕರವಾದ ದಿನಗಳನ್ನು ಕಳೆದಿದ್ದೇವೆ ಎಂದು ಅಳಲನ್ನು ತೋಡಿಕೊಂಡರು.
ಇಂಡಿಗನತ್ತ ಗ್ರಾಮದ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸಿಎಸ್ ನಿರಂಜನ್ ಕುಮಾರ್ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಚರ್ಚಿಸಿದ್ದರು. ಕಾರಾಗೃಹದಲ್ಲಿ ಬಂಧಿಯಾಗಿದ್ದ ಇಂಡಿಗನತ್ತ ಗ್ರಾಮಸ್ಥರು ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್ ಹಾಗೂ ಬಿಜೆಪಿ ಹಿರಿಯ ಮುಖಂಡ ಮಂಗಲ ಶಿವಕುಮಾರ್, ಮಂಡಲ ಅಧ್ಯಕ್ಷರಾದ ಚಂಗವಾಡಿ ರಾಜು ಭೇಟಿ ಮಾಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.