ವಿಜಯೇಂದ್ರ ಆಯ್ಕೆ ತುಂಬಾ ಸಂತಸ ತಂದಿದೆ

KannadaprabhaNewsNetwork |  
Published : Nov 13, 2023, 01:15 AM ISTUpdated : Nov 13, 2023, 01:16 AM IST
ಃ12ಕೆಡಿವಿಜಿ39ಃದಾವಣಗೆರೆಯ ಶಿರಮಗೊಂಡನಹಳ್ಳಿಯಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್‌ರಿಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತು ಪತ್ನಿ ಸುಮಾ ರೇಣುಕಾಚಾರ್ಯ ದೀಪಾವಳಿ ಶುಭಾಷಯ ಕೋರಿದರು. ಕೆ.ಪಿ.ಕಲ್ಲಿಂಗಪ್ಪ, ಪ್ರವೀಣ್, ರಾಜು, ಬಸವರಾಜ ಇತರರು ಇದ್ದರು. | Kannada Prabha

ಸಾರಾಂಶ

ಶಿರಮಗೊಂಡನಹಳ್ಳಿಯಲ್ಲಿ ರವೀಂದ್ರನಾಥ್‌ಗೆ ದೀಪಾವಳಿ ಶುಭಹಾರೈಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯೆ

* ಶಿರಮಗೊಂಡನಹಳ್ಳಿಯಲ್ಲಿ ರವೀಂದ್ರನಾಥ್‌ಗೆ ದೀಪಾವಳಿ ಶುಭಹಾರೈಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಮರ್ಥ ಯುವ ನಾಯಕನ ಆಯ್ಕೆ ಮಾಡಿದ್ದು ನನಗೂ, ರಾಜ್ಯದ ಜನರಿಗೂ ತುಂಬಾ ಸಂತಸ ತಂದಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲರಿಗೂ ಧನ್ಯವಾದ ಸಲ್ಲಿಸುವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ನಗರದ ಹೊರ ವಲಯದ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಭಾನುವಾರ ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ, ಪತ್ನಿ ರತ್ನಮ್ಮ ರವೀಂದ್ರನಾಥ ದಂಪತಿಗೆ ದೀಪಾವಳಿ ಹಬ್ಬಕ್ಕೆ ಶುಭ ಹಾರೈಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದು ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿದೆ. ಇದರಿಂದ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಿದೆ. ಹಳೆ ಬೇರು, ಹೊಸ ಚಿಗುರು ಎಂಬಂತೆ ವಿಜಯೇಂದ್ರ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಪಕ್ಷ ಮುನ್ನಡೆಸುತ್ತಾರೆಂಬ ಸಂಪೂರ್ಣ ವಿಶ್ವಾಸವಿದೆ.

ದೀಪಾವಳಿಗೆ ಬಂಪರ್‌ ಕೊಡುಗೆ :

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಕ್ಷೇತ್ರ ಗೆದ್ದಿತ್ತು. ಈಗ ವಿಜಯೇಂದ್ರ ಸಾರಥ್ಯದಲ್ಲಿ 28 ಕ್ಷೇತ್ರಗಳ ಗೆಲ್ಲುವ ವಿಶ್ವಾಸವಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಕನಿಷ್ಟ 125-130 ಕ್ಷೇತ್ರ ಗೆದ್ದು, ಮತ್ತೆ ಬಿಜೆಪಿ ಅಧಿಕಾರಕ್ಕೂ ಬರಲಿದೆ. 2016ರಲ್ಲಿ ಯುಗಾದಿ ಹಬ್ಬದ ವೇಳೆ ಯಡಿಯೂರಪ್ಪನರಿಗೆ ರಾಜ್ಯಾಧ್ಯಕ್ಷರಾಗಿ ಮಾಡಿ, ಬಂಪರ್ ಕೊಡುಗೆ ನೀಡಿದ್ದ ಕೇಂದ್ರ ನಾಯಕರು ಈಗ ದೀಪಾವಳಿಗೆ ವಿಜಯೇಂದ್ರಗೆ ಸಾರಥ್ಯ ನೀಡಿ, ಬಂಪರ್ ಕೊಡುಗೆ ನೀಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷರಿಲ್ಲವೆಂದು ಟೀಕಿಸುತ್ತಿದ್ದ ಆಡಳಿತ ಪಕ್ಷ ಕಾಂಗ್ರೆಸ್ ನಾಯಕರಿಗೆ ವಿಜಯೇಂದ್ರ ಆಯ್ಕೆ ಮಾಡುವ ಮೂಲಕ ಬಿಜೆಪಿ ಮಾಸ್ಟರ್ ಸ್ಟ್ರೋಕ್ ನೀಡಿದೆ. ವಿಜಯೇಂದ್ರ ಸಂಘಟನಾ ಚತುರ. ಸಂಘ ಪರಿವಾರದ ಹಿನ್ನೆಲೆ ಇದೆ. ಬೆಂಗಳೂರು ಮಹಾ ನಗರ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಯುವ ಮೋರ್ಚಾ ಅಧ್ಯಕ್ಷ, ಕಳೆದ 3 ವರ್ಷದಿಂದ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಉಪ ಚುನಾವಣೆಯಲ್ಲಿ ಬಹುತೇಕರ ಗೆಲ್ಲಿಸಿದ್ದಾರೆ ಎಂದು ತಿಳಿಸಿದರು.

ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ರತ್ನಮ್ಮ ರವೀಂದ್ರನಾಥ, ಸುಮಾ ರೇಣುಕಾಚಾರ್ಯ, ಪಕ್ಷದ ಯುವ ಮುಖಂಡರಾದ ರಾಜು ವೀರಣ್ಣ, ಬಸವರಾಜ, ಪ್ರವೀಣ ಜಾಧವ್‌, ಕೂಲಂಬಿ ಬಸವರಾಜ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ ಇತರರಿದ್ದರು. ...................................................

ಬಿಜೆಪಿ ಟೀಕಿಸಲು ಪ್ರಿಯಾಂಕ ಖರ್ಗೆಗೆ ನೈತಿಕತೆ ಇಲ್ಲ

ದಾವಣಗೆರೆ: ಬಿಜೆಪಿ ಬಗ್ಗೆ ಕುಟುಂಬ ರಾಜಕಾರಣವೆಂದು ಟೀಕಿಸಲು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆಗೆ ಯಾವುದೇ ನೈತಿಕತೆ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಪಕ್ಷವೆಂದರೆ ಕುಟುಂಬ ರಾಜಕಾರಣ. ನೆಹರು, ಇಂದಿರಾ, ರಾಜೀವ್‌, ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಇಷ್ಟು ಜನ ಕುಟುಂಬ ರಾಜಕಾರಣವನ್ನೇ ಮಾಡಿದ್ದಾರೆ ಎಂದರು. ದಲಿತ ಸಮುದಾಯದಲ್ಲಿ ಜನಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿ ಅನೇಕ ಹುದ್ದೆ ಅಲಂಕರಿಸಿ, ಕೇಂದ್ರ ಸಚಿವರಾಗಿ, ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಅಂತಹ ಹಿರಿಯ ಖರ್ಗೆಯವರಿಗೆ ನಾನು ಗೌರವಿಸುತ್ತೇನೆ. ಆದರೆ, ಪ್ರಿಯಾಂಕ ಖರ್ಗೆಗೆ ಮಲ್ಲಿಕಾರ್ಜುನ ಖರ್ಗೆ ಮಗ ಎಂಬ ಕಾರಣಕ್ಕೆ ಸಚಿವ ಸ್ಥಾನ ನೀಡಲಾಗಿದೆ. ಇದನ್ನು ಪ್ರಿಯಾಂಕ ಖರ್ಗೆ ಮರೆಯದಿರಲಿ ಎಂದು ಎಚ್ಚರಿಸಿದರು.

ಕಾಂಗ್ರೆಸ್ಸಿನಲ್ಲಿ ಕುಟುಂಬ ರಾಜಕಾರಣ ರಾಜ್ಯದಲ್ಲೂ ಕಡಿಮೆಯೇನಿಲ್ಲ. ಬಂಗಾರಪ್ಪನವರ ಮಗನೆಂಬ ಕಾರಣಕ್ಕೆ ಮಧು ಬಂಗಾರಪ್ಪಗೆ, ಗುಂಡೂರಾವ್ ಮಗ ದಿನೇಶ ಗುಂಡೂರಾವ್‌ ಸಚಿವರಾಗಿದ್ದಾರೆ. ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಮಹಾನ್ ನಾಯಕ. ಅಂತಹ ನಾಯಕನ ಬಗ್ಗೆ ಟೀಕಿಸುವ ಯಾವ ನೈತಿಕತೆ ನಿಮಗಿದೆ ಎಂದು ಪ್ರಿಯಾಂಕ ಖರ್ಗೆಗೆ ಪ್ರಶ್ನಿಸಿದರು. ಒಗ್ಗಟ್ಟಿನಿಂದ ಬಿಜೆಪಿ ಗೆಲ್ಲಿಸುವುದೇ ಗುರಿ: ರೇಣುಕಾಚಾರ್ಯ

* ಯುವ ರಾಜಕಾರಣಿಗಳಲ್ಲೇ ವಿಜಯೇಂದ್ರ ಮುಂಚೂಣಿ ನಾಯಕ

ದಾವಣಗೆರೆ: ಬಿಜೆಪಿಯಲ್ಲಿ ರೇಣುಕಾಚಾರ್ಯ ಒಬ್ಬ ಸಾಮಾನ್ಯ ಕಾರ್ತಕರ್ತನಾಗಿದ್ದು, ಇಡೀ ರಾಜ್ಯದಲ್ಲಿ ಯುವಕರು, ಮುಖಂಡರ ಅಪೇಕ್ಷೆ ಇತ್ತು. ಅದಕ್ಕಾಗಿ ತಾವು ಮಾತನಾಡಿದ್ದಷ್ಟೇ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ನನ್ನಿಂದಾಗಿ ವಿಜಯೇಂದ್ರ ರಾಜ್ಯಾಧ್ಯಕ್ಷರಾದರು ಎಂಬುದು ಸುಳ್ಳು. ವಿಜಯೇಂದ್ರ ಸಮರ್ಥ ನಾಯಕ. ಚುನಾವಣಾ ರಣತಂತ್ರ ಹೆಣೆಯುವಲ್ಲಿ, ಸಂಘಟನೆಯಲ್ಲೂ ಯುವ ರಾಜಕಾರಣಿಗಳಲ್ಲಿಯೇ ವಿಜಯೇಂದ್ರ ಮುಂಚೂಣಿ ನಾಯಕ. ಇದನ್ನೆಲ್ಲಾ ಗುರುತಿಸಿ, ರಾಜ್ಯಾಧ್ಯಕ್ಷ ಸ್ಥಾನವನ್ನು ರಾಷ್ಟ್ರೀಯ ನಾಯಕರು ನೀಡಿದ್ದಾರೆ ಎಂದು ತಿಳಿಸಿದರು.

ನಾನು ಬಿಜೆಪಿ ಬಿಡುವುದಾಗಿ ಎಲ್ಲೂ ಹೇಳಿಲ್ಲ. ನಾನು ಸಿಎಂ, ಡಿಸಿಎಂ. ಸಚಿವರು, ಉಸ್ತುವಾರಿ ಸಚಿವರ ಭೇಟಿ ಮಾಡಿದ್ದು ತಮ್ಮ ಅವಳಿ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ, ಬರ ಪರಿಹಾರ ಕಾರ್ಯ ಕೈಗೊಳ್ಳುವಂತೆ ಒತ್ತಾಯಿಸಲು ಮಾತ್ರ. ನಮ್ಮಲ್ಲೇ ಕೆಲವರಿಗೆ ರೇಣುಕಾಚಾರ್ಯನಿಗೆ ಪಕ್ಷದಿಂದ ಹೊರಗೆ ಕಳಿಸಬೇಕೆಂಬ ಆಲೋಚನೆ ಇತ್ತು ಎಂದು ದೂರಿದರು.

ಕಾರ್ಯಕರ್ತರು, ಮುಖಂಡರ ಅಪೇಕ್ಷೆ ನನ್ನ ಮೇಲಿದೆಯೆಂಬುದನ್ನು ಗಟ್ಟಿಯಾಗಿ ಹೇಳುತ್ತೇನೆ. ಇದೇ ಎಲ್ಲರ ಒತ್ತಾಯಕ್ಕೆ ಮಣಿದು ನಾನು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷಿಯೆಂಬುದಾಗಿ ಹೇಳಿದ್ದೇನೆ. ಸೋಲು, ಗೆಲುವು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದೇನೆ. ಹಾಗಾಗಿ ಕಳೆದ 6 ತಿಂಗಳಿನಿಂದ ಒಂದು ದಿನವೂ ಮನೆಯಲ್ಲಿ ಕುಳಿತುಕೊಳ್ಳದೇ, ಅವಳಿ ತಾಲೂಕು ಪ್ರವಾಸ ಮಾಡಿದ್ದೇನೆ ಎಂದು ಹೇಳಿದರು.

28 ಕ್ಷೇತ್ರಗಳಲ್ಲೂ ಪ್ರವಾಸ

ಇನ್ನು ಮುಂದೆ ಸಂಘರ್ಷವೇ ನನಗೆ ಬೇಡ. ಇನ್ನೇನಿದ್ದರೂ ಸಾಮರಸ್ಯ ಬೇಕಾಗಿದೆ. ನಾವೆಲ್ಲರೂ ಒಟ್ಟಾಗಿ ಪಕ್ಷವನ್ನು ಕಟ್ಟಬೇಕಾಗಿದೆ. ಇನ್ನು ಮುಂದೆ ರೇಣುಕಾಚಾರ್ಯ ನಿದ್ದೆ ಮಾಡುವುದಿಲ್ಲ. ಎಲೆ ಮರೆ ಕಾಯಿಯಂತೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಸುತ್ತಾಡಿ, ಬಿಜೆಪಿ ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

............................

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು
ಸಮಸ್ಯೆ ಬಗೆ ಹರಿಸದಿದ್ದರೇ ತೀವ್ರ ಹೋರಾಟ