ಚಲಿಸುತ್ತಿರುವ ಸರ್ಕಾರಿ ಬಸ್ ನಲ್ಲಿ ಕಂಡಕ್ಟರ್ ಹುಟ್ಟುಹಬ್ಬ ಆಚರಣೆ !

KannadaprabhaNewsNetwork | Published : Jun 28, 2025 12:18 AM

ಈ ವೇಳೆ ಫ್ಲವರ್ ಬ್ಲಾಸ್ಟ್ ನಿಂದಾಗಿ ಚಾಲಕನ ಚಿತ್ತ ಆಚರಣೆಯ ಕಡೆಗೆ ವಾಲಿದೆ ಇದರಿಂದಾಗಿ ಬಸ್ ಅಡ್ಡದಿಟ್ಟಿಯಾಗಿ ಚಲಿಸಿ ಪ್ರಯಾಣಿಕರು ಗಾಬರಿ

ಕನ್ನಡಪ್ರಭ ವಾರ್ತೆ ನಂಜನಗೂಡು ಚಲಿಸುತ್ತಿರುವ ಸಾರಿಗೆ ಬಸ್ಸಿನಲ್ಲಿ ನಿರ್ವಾಹಕರ ಹುಟ್ಟುಹಬ್ಬ ಆಚರಿಸಿದ ಪರಿಣಾಮ ಚಾಲಕ ಬಸ್ ಅಡ್ಡಾದಿಡ್ಡಿ ಚಲಿಸಿದ್ದರಿಂದಾಗಿ ಪ್ರಯಾಣಿಕರು ಗಾಬರಿಗೊಂಡ ಘಟನೆ ಜರಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ, ಕಣೇನೂರು ಮಾರ್ಗವಾಗಿ ಎಚ್.ಡಿ. ಕೋಟೆಯ ಕಾರಪುರಕ್ಕೆ ತೆರಳುತ್ತಿದ್ದ ಕೆಎಸ್ ಆರ್‌ಟಿಸಿ ಬಸ್ ನಲ್ಲಿ ಕಂಡಕ್ಟರ್ ಮಧುಸೂದನ್‌ ಎಂಬವರ ಹುಟ್ಟುಹಬ್ಬವನ್ನು ಮಹಿಳಾ ಪ್ರಯಾಣಿಕರು ಬಸ್ ನ ಎಂಜಿನ್ ಮೇಲೆ ಕೇಕ್ ಇಟ್ಟು ಕತ್ತರಿಸಿ, ಆಚರಿಸಿದ್ದಾರೆ.ಈ ವೇಳೆ ಫ್ಲವರ್ ಬ್ಲಾಸ್ಟ್ ನಿಂದಾಗಿ ಚಾಲಕನ ಚಿತ್ತ ಆಚರಣೆಯ ಕಡೆಗೆ ವಾಲಿದೆ ಇದರಿಂದಾಗಿ ಬಸ್ ಅಡ್ಡದಿಟ್ಟಿಯಾಗಿ ಚಲಿಸಿ ಪ್ರಯಾಣಿಕರು ಗಾಬರಿಗೊಂಡಿದ್ದಾರೆ, ನಿರ್ವಾಹಕ ಮತ್ತು ಚಾಲಕನ ಹುಚ್ಚಾಟಕ್ಕೆ ಪ್ರಯಾಣಿಕರು ಬೆಚ್ಚಿಬಿದ್ದು ಸರಿಯಾಗಿ ಓಡಿಸಪ್ಪ ಎಂದು ಕೂಗಾಡಿದ್ದಾರೆ. ಪ್ರಯಾಣಿಕರೊಬ್ಬರು ಈ ವಿಡಿಯೋವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಬಸ್ ನ ನಿರ್ವಾಹಕ ಮತ್ತು ಚಾಲಕನ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.------------ಚಲಿಸುತ್ತಿರುವ ಸರ್ಕಾರಿ ಬಸ್ಸಿನಲ್ಲಿ ನಿರ್ವಾಹಕ ಮಧುಸೂದನ್ ಎಂಬಾತ ಬಸ್ಸಿನ ಎಂಜಿನ್ ಮೇಲೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಆತನ ಉಡಾಫೆ ಮತ್ತು ದುರಾಡಳಿತವನ್ನು ಎತ್ತಿ ತೋರಿಸುತ್ತಿದೆ. ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಕರು ಕುಳಿತಿರುವುದನ್ನು ಮೈ ಮರೆತು, ಪ್ರಯಾಣಿಕರ ಅವರ ಜೀವವನ್ನು ಲೆಕ್ಕಿಸದೆ ಚಲಿಸುತ್ತಿರುವ ಬಸ್ನಲ್ಲಿ ಬರ್ತಡೆ ಪಾರ್ಟಿ ಆಚರಿಸಿರುವುದು ಆಕ್ಷಮ್ಯ ಅಪರಾಧ ಇದು ಸಾರಿಗೆ ಇಲಾಖೆಯನ್ನೇ ತಲೆತಗ್ಗಿಸುವಂತಹ ವಿಚಾರವಾಗಿದೆ ಜಿಲ್ಲಾ ಸಾರಿಗೆ ಅಧಿಕಾರಿ ಮತ್ತು ಎಚ್.ಡಿ. ಕೋಟೆಯ ಡಿಪೋ ವ್ಯವಸ್ಥಾಪಕ ಜೊತೆ ಚರ್ಚಿಸಿ ನಿರ್ವಾಹಕ ಮತ್ತು ಚಾಲಕ ಇಬ್ಬರ ವಿರುದ್ಧವು ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ.- ಕೆ. ಮಾರುತಿ, ಗ್ಯಾರಂಟಿ ಯೋಚನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ.