ಮಲ್ಪೆ ಕಡಲತೀರದಲ್ಲಿ ಕೃಷ್ಣ ವಿಗ್ರಹ ಸಿಕ್ಕಿದ ವಿಡಿಯೋ ವೈರಲ್!

KannadaprabhaNewsNetwork |  
Published : Dec 25, 2025, 03:00 AM IST
ಮಲ್ಪೆ ಸಮುದ್ರ ತೀರದಲ್ಲಿ ಇಸ್ಕಾನ್ ಭಕ್ತರಿಗೆ ಸಿಕ್ಕಿರುವ ದ್ವಾರಪಾಲಕರ ವಿಗ್ರಹ ಇದು ! | Kannada Prabha

ಸಾರಾಂಶ

ಇಲ್ಲಿನ ಮಲ್ಪೆ ಕಡಲ ತೀರದಲ್ಲಿ ಇಸ್ಕಾನ್‌ನ ಕೃಷ್ಣ ಭಕ್ತರಿಗೆ ಕೃಷ್ಣನ ವಿಗ್ರಹ ಸಿಕ್ಕಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಉಡುಪಿ: ಮೂರು ದಿನಗಳ ಹಿಂದೆ ಇಲ್ಲಿನ ಮಲ್ಪೆ ಕಡಲ ತೀರದಲ್ಲಿ ಇಸ್ಕಾನ್‌ನ ಕೃಷ್ಣ ಭಕ್ತರಿಗೆ ಕೃಷ್ಣನ ವಿಗ್ರಹ ಸಿಕ್ಕಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.800 ವರ್ಷಗಳ ಹಿಂದೆ ಇದೇ ಮಲ್ಪೆ ತೀರದಲ್ಲಿ ಮಧ್ವಾಚಾರ್ಯರಿಗೆ ಕೃಷ್ಣನ ವಿಗ್ರಹ ಸಿಕ್ಕಿ ಅದನ್ನವರು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ ಪವಾಡದಂತೆ ಈ ಘಟನೆ ಕೂಡ ಇನ್ನೊಂದು ಪವಾಡ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ವರ್ಣನೆ ಮಾಡಲಾಗುತ್ತಿದೆ.ಆದರೆ ವಾಸ್ತವದಲ್ಲಿ ಇಸ್ಕಾನ್‌ನ ಕೃಷ್ಣ ಭಕ್ತರಿಗೆ ಕಡಲತೀರದಲ್ಲಿ ಸಿಕ್ಕಿದ್ದು ಕೃಷ್ಣನ ವಿಗ್ರಹವಲ್ಲ, ಅದು ಕರಾವಳಿ ಭಾಗದ ಯಾವುದೇ ದೇವಾಲಯಗಳ ಬಾಗಿಲಲ್ಲಿ ಇರುವ ಜಯ ವಿಜಯ ಎಂಬ ದ್ವಾರಪಾಲಕರಲ್ಲೊಬ್ಬರದ್ದು.ಉಡುಪಿ ಕೃಷ್ಣಮಠದಲ್ಲಿ ಇಸ್ಕಾನ್‌ ವತಿಯಿಂದ ಶ್ರೀಕೃಷ್ಣ ಸಮರ್ಪಣಾ ಎಂಬ ಕಾರ್ಯಕ್ರಮ ಎರಡು ದಿನಗಳ ಹಿಂದೆ ನಡೆದಿತ್ತು, ಇದರಲ್ಲಿ ಭಾಗವಹಿಸಲು ಇಸ್ಕಾನ್‌ನ ನೂರಾರು ಭಕ್ತರು ಬಂದಿದ್ದರು. ಈ ಸಂದರ್ಭ ಅವರು ಮಲ್ಪೆ ಕಡಲ ತೀರಕ್ಕೆ ಹೋಗಿದ್ದರು. ಅಲ್ಲಿ ವಿಹಾರ ನಡೆಸುತಿದ್ದಾಗ ಮರಳಿನ ದಂಡೆ ಮೇಲೆ ಕಪ್ಪುಕಲ್ಲಿನ ಸುಮಾರು 2 ಅಡಿ ಎತ್ತರದ ವಿಗ್ರಹ ಕಾಣಸಿಕ್ಕಿದೆ. ಅದನ್ನು ಕಂಡು ಭಕ್ತಿಯಿಂದ ಎತ್ತಿಕೊಂಡು ಕುಣಿದು ಸಂಭ್ರಮಿಸಿದ್ದಾರೆ, ಫೋಟೋ ವಿಡಿಯೋ ತೆಗೆಸಿಕೊಂಡಿದ್ದಾರೆ, ಚತುರ್ಭುಜ ಹೊಂದಿರುವ ಈ ವಿಗ್ರಹ ನೋಡುವುದಕ್ಕೆ ವಿಷ್ಣು ಅಥವಾ ಕೃಷ್ಣನ ವಿಗ್ರಹದಂತೆ ಕಾಣುತ್ತದೆ. ಅದನ್ನೇ ಇಸ್ಕಾನ್ ಭಕ್ತರು ತಮಗೆ ಮಲ್ಪೆ ತೀರದಲ್ಲಿ ಕೃಷ್ಣನ ವಿಗ್ರಹ ಸಿಕ್ಕಿದೆ ಎಂದು ಭಕ್ತಿಯಿಂದ ಎತ್ತಿಕೊಂಡು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ.ನಂತರ ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣವನ್ನು ಸೇರಿ ಸದ್ದು ಮಾಡುತ್ತಿದೆ. ಒಂದೆಡೆ ಅದೊಂದು ಕೃಷ್ಣನ ವಿಗ್ರಹ, ಪವಾಡ ಎಂದೆಲ್ಲ ಬಿಂಬಿಸಲಾಗುತ್ತಿದೆ.

ಕರಾವಳಿಯ ದೇವಾಲಯಗಳ ಬಾಗಿಲಲ್ಲಿ ಜಯ ವಿಜಯರೆಂಬ ಇಬ್ಬರು ದ್ವಾರಪಾಲಕರ ವಿಗ್ರಹಗಳಿರುತ್ತವೆ, ಅವುಗಳು ಭಿನ್ನಗೊಂಡಾಗ ಅಥವಾ ದೇವಾಲಯದ ಜೀರ್ಣೋದ್ಧಾರದ ಸಂದರ್ಭದಲ್ಲಿ ಅವುಗಳನ್ನು ತೆರವುಗೊಳಿಸಿ ನದಿಗಳಲ್ಲಿ ಸಮುದ್ರದಲ್ಲಿ ವಿಸರ್ಜಿಸುತ್ತಾರೆ. ಇದೇ ರೀತಿ ನಾಗ ಪ್ರತಿಮೆಗಳು, ದೈವಗಳ ಲೋಹದ ಮುಖವಾಡಗಳು, ಮರದ ಭಾರಿ ಪ್ರತಿಮೆಗಳ‍ನ್ನೂ ವಿಸರ್ಜಿಸುವುದೂ ಇದೆ. ಇಂತಹ ಸಾವಿರಾರು ವಿಗ್ರಹಗಳು ಈ ಸಮುದ್ರದ ಒಡಳೊಳಗಿರಬಹುದು.ಅವು ಆಗಾಗ್ಗೆ ಅಲೆಗಳ‍ ಹೊಡೆತಕ್ಕೆ ಸಮುದ್ರ ದಂಡೆಗೆ ಬಂದು ಬೀಳುತ್ತವೆ. ಅನೇಕ ಬಾರಿ ಜನರು ಹೆದರಿ ಅವುಗಳ ಗೋಜಿಗೆ ಹೋಗುವುದಿಲ್ಲ. ಇನ್ನು ಕೆಲವರು ಅವುಗ‍ಳನ್ನು ಸ್ಥಳೀಯ ವಸ್ತು ಸಂಗ್ರಹಾಲಯಕ್ಕೆ ನೀಡುತ್ತಾರೆ. ಕೆಲವರು ತಮ್ಮ ಮನೆಯಲ್ಲೇ ಇರಿಸಿಕೊಳ್ಳುತ್ತಾರೆ. ಆದರೆ ಇಸ್ಕಾನ್ ಭಕ್ತರು ಅಂತಹ ಒಂದು ವಿಗ್ರಹವನ್ನು ಕೃಷ್ಣನ ವಿಗ್ರಹ ಎಂದು ತಮ್ಮೊಂದಿಗೆ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯಕ್ಕೆ ಬರುವ ಕೇಂದ್ರ ಸಚಿವರಿಗೆ ಕಪ್ಪು ಬಾವುಟ: ಐವನ್‌
ಸಾಹಿತಿ, ರಂಗನಟ, ನಿರ್ದೇಶಕ, ಆಕಾಶವಾಣಿ ನಾಟಕ ಕಲಾವಿದ ಪ್ರೊ.ರಾಮದಾಸ್‌ ನಿಧನ