ನರಸಿಂಹರಾಜಪುರ: ಪಟ್ಟಣದ ಸುಂಕದಕಟ್ಟೆ ವಿದ್ಯಾ ಗಣಪತಿ ಸಮಿತಿ ಹಾಗೂ ಜಾಮೀಯಾ ಮಸೀದಿಯ ಈದ್ ಮಿಲಾದ್ ಕಮಿಟಿಯವರು ಕಾನೂನನ್ನು ಗೌರವಿಸಿ ಇತರರಿಗೆ ಮಾದರಿಯಾಗಿರುವುದನ್ನು ಗುರುತಿಸಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅವರನ್ನು ಸನ್ಮಾನಿಸಿ, ಅಭಿನಂದನೆ ಪತ್ರ ನೀಡಿದ್ದಾರೆ ಎಂದು ಪೊಲೀಸ್ ಠಾಣಾಧಿಕಾರಿ ನಿರಂಜನಗೌಡ ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಸಮಯದಲ್ಲಿ ಪೊಲೀಸ್ ಇಲಾಖೆಯು ನೀಡಿದ ಸೂಚನೆಯನ್ನು ಸರಿಯಾಗಿ ಅನುಸರಿಸಿ ಯಾವುದೇ ಕಾನೂನು ಉಲ್ಲಂಘನೆಯಾಗದಂತೆ ಹಬ್ಬವನ್ನು ಸರಿಯಾದ ರೀತಿಯಲ್ಲಿ ಆಚರಿಸಿದ 9 ಸಮಿತಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಕಾರಿ ಡಾ. ವಿಕ್ರಂ ಅಮಟೆ ಪೊಲೀಸ್ ಇಲಾಖೆ ಹಾಗೂ ವೈಯ್ಯಕ್ತಿಕವಾಗಿಯೂ ಸನ್ಮಾನಿಸಿ ಅಭಿನಂದಿಸಿದ್ದಾರೆ.
ವಿಶೇಷವಾಗಿ ಜಿಲ್ಲೆಯ 9 ಸಮಿತಿಗಳ ಪೈಕಿ ನರಸಿಂಹರಾಜಪುರ ಪಟ್ಟಣದ ಗಣಪತಿ ಸಮಿತಿ ಹಾಗೂ ಈದ್ ಮಿಲಾದ್ ಸಮಿತಿಗೆ ಅಭಿನಂದನಾ ಪತ್ರ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಕಾನೂನು ಗೌರವಿಸಿ ಶಾಂತಿ ಕಾಪಾಡಬೇಕು ಎಂಬ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದೇ ಮೊದಲ ಬಾರಿಗೆ 9 ಸಮಿತಿಗಳನ್ನು ಗುರುತಿಸಿ ಸನ್ಮಾನ ಮಾಡಿ ಅಭಿನಂದನೆ ಪತ್ರ ನೀಡಿದ್ದಾರೆ ಎಂದು ಅವರು ತಿಳಿಸಿದರು.