ಕನ್ನಡಪ್ರಭ ವಾರ್ತೆ ಧಾರವಾಡ
ನಗರದ ಉದಯ ಹಾಸ್ಟೆಲ್ ಹತ್ತಿರ ಸಮಾಜ ಕಲ್ಯಾಣ ಇಲಾಖೆ ನಿರ್ಮಿಸಲಾಗುತ್ತಿರುವ ದೀನ್ ದಯಾಳ್ ಉಪಾಧ್ಯಾಯ ವಿದ್ಯಾರ್ಥಿ ವಸತಿ ನಿಲಯಗಳ ಕಟ್ಟಡ ಕಾಮಗಾರಿಯನ್ನು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ವೀಕ್ಷಿಸಿದರು.ನಂತರ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಗರದಲ್ಲಿ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಮಂಜೂರಾತಿ ಪಡೆಯಲಾಗಿತ್ತು. ಅಂತೆಯೇ, ನಗರದ ಹೃದಯ ಭಾಗದಲ್ಲಿ 500 ವಿದ್ಯಾರ್ಥಿಗಳು ಮತ್ತು 500 ವಿದ್ಯಾರ್ಥಿನಿಯರು ಸೇರಿ ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಅಂದಾಜು ₹82.56 ಕೋಟಿಗಳ ವೆಚ್ಚದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ವಸತಿ ನಿಲಯ ನಿರ್ಮಾಣ ನಡೆಯುತ್ತಿದೆ. ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಏಕೀಕೃತ ವಿದ್ಯಾರ್ಥಿ ನಿಲಯ ನಿರ್ಮಿಸುವ ಉದ್ದೇಶದಿಂದ ಕಾಮಗಾರಿ ಆರಂಭಿಸಲಾಗಿದೆ ಎಂದರು.
ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರಿನ ಈ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಸಕಲ ಸೌಕರ್ಯಗಳನ್ನು ಒದಗಿಸಲಾಗುವುದು. ಆದರೆ, ನಾಲ್ಕು ಇಲಾಖೆಗಳ ಪೈಕಿ ಎರಡು ಇಲಾಖೆಗಳಿಂದ ಮಾತ್ರ ಅನುದಾನ ಬಿಡುಗಡೆಯಾಗಿದೆ. ಬಾಕಿ ಉಳಿದ ಇಲಾಖೆಗಳಿಂದ ಅನುದಾನ ಪಡೆಯಲು ಪ್ರಯತ್ನ ಮಾಡುತ್ತಿರುವುದಾಗಿ ಬೆಲ್ಲದ ಹೇಳಿದರು.ಇದೇ ಕಟ್ಟಡದ ಪಕ್ಕದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಕರ್ನಾಟಕ ಗೃಹ ನಿರ್ಮಾಣ ಸಂಸ್ಥೆಯು ₹20 ಕೋಟಿ ವೆಚ್ಚದಲ್ಲಿ 500 ವಿದ್ಯಾರ್ಥಿಗಳಿಗೆ ಮತ್ತೊಂದು ಕಟ್ಟಡ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಗಳನ್ನು ಬೆಂಗಳೂರು ಮೂಲದ ಅರುಣಾ ಕನಸ್ಟ್ರಕ್ಶನ್ ಕಂಪನಿ ನಿರ್ವಹಿಸುತ್ತಿದೆ ಎಂದು ಶಾಸಕರು ತಿಳಿಸಿದರು.
ಮುಖಂಡರಾದ ಬಸವರಾಜ ಗರಗ, ರಾಜೇಶ ಕೊಟೇನ್ನವರ, ಪಾಲಿಕೆ ಸದಸ್ಯರಾದ ಜ್ಯೋತಿ ಪಾಟೀಲ, ಮಕ್ತುಂಹುಸೇನ ಲಷ್ಕರಿ, ಚಿದಾನಂದ ಪಾಟೀಲ ಇದ್ದರು.