ಚಿಕ್ಕಮಗಳೂರುದಸರಾ ನವರಾತ್ರಿ ನಾಡಹಬ್ಬದ ಅಂಗವಾಗಿ ತಾಲೂಕಿನ ಅಂಬಳೆ ಹೋಬಳಿ ಆರದವಳ್ಳಿ ಗ್ರಾಮದಲ್ಲಿ ನೂರಾರು ಗ್ರಾಮಸ್ಥರು ಹಾಗೂ ಗ್ರಾಮದ ಪಟೇಲ ವಂಶಸ್ಥ ಎ.ಎನ್.ಮಹೇಶ್ ಸಾರಥ್ಯದಲ್ಲಿ ಸಂಪ್ರದಾಯಿಕ ಪೂಜಾ ವಿಧಿ ವಿಧಾನಗಳ ಮೂಲಕ 28ನೇ ವರ್ಷದ ಅಂಬು ಒಡೆದು ವಿಜಯದಶಮಿ ಆಚರಿಸಿದರು.
ಗ್ರಾಮದೇವರನ್ನು ಹೊತ್ತು ಊರಿನ ಸುತ್ತ ಮೆರವಣಿಗೆ । ಗ್ರಾಮದ ಪಟೇಲ ವಂಶಸ್ಥ ಎ.ಎನ್.ಮಹೇಶ್ ಸಾರಥ್ಯ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದಸರಾ ನವರಾತ್ರಿ ನಾಡಹಬ್ಬದ ಅಂಗವಾಗಿ ತಾಲೂಕಿನ ಅಂಬಳೆ ಹೋಬಳಿ ಆರದವಳ್ಳಿ ಗ್ರಾಮದಲ್ಲಿ ನೂರಾರು ಗ್ರಾಮಸ್ಥರು ಹಾಗೂ ಗ್ರಾಮದ ಪಟೇಲ ವಂಶಸ್ಥ ಎ.ಎನ್.ಮಹೇಶ್ ಸಾರಥ್ಯದಲ್ಲಿ ಸಂಪ್ರದಾಯಿಕ ಪೂಜಾ ವಿಧಿ ವಿಧಾನಗಳ ಮೂಲಕ 28ನೇ ವರ್ಷದ ಅಂಬು ಒಡೆದು ವಿಜಯದಶಮಿ ಆಚರಿಸಿದರು.ಗ್ರಾಮಸ್ಥರು ಗ್ರಾಮದೇವರನ್ನು ಹೊತ್ತು ಊರಿನ ಸುತ್ತ ಮೆರವಣಿಗೆ ನಡೆಸಿ ಅಂಬು ಒಡೆಯುವ ಸ್ಥಳಕ್ಕೆ ಸಾಗಿದರು. ಸಾಂಪ್ರದಾಯಿಕ ಅಲಂಕೃತ ಉಡುಗೆಯೊಂದಿಗೆ ಸಿಂಗಾರಗೊಂಡಿದ್ದ ಪಟೇಲ ವಂಶಸ್ಥ ಎ.ಎನ್. ಮಹೇಶ್, ಕುಟುಂಬ ಸ್ಥರು, ಊರಿನ ಮುಖಂಡರು, ಗ್ರಾಮಸ್ಥರು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಅಂಬು ಒಡೆಯುವ ದೊಡ್ಡಕೆರೆ ಬಳಿಗೆ ಕರೆ ತರಲಾಯಿತು.ಗ್ರಾಮದೇವತೆಗಳಿಗೆ ಪೂಜೆ ಸಲ್ಲಿಸಿ ಬನ್ನಿ ಮರದ ಬಳಿ ಶಮಿಪೂಜೆ ನೆರವರಿಸಿದ ನಂತರ ಊರಿನ ದೊಡ್ಡ ಕೆರೆ ಬಳಿ ಅಂಬು ಒಡೆಯುವ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಬಾಳೆಗೊನೆಗೆ ಬಿಲ್ಲು ಹೊಡೆದು, ಬಂದೂಕಿನಿಂದ ಬಾಳೆ ದಿಂಡನ್ನು ತುಂಡರಿ ಸಿದರು. ಮಹಿಳೆಯರು, ಮಕ್ಕಳು ಕುಪ್ಪಳಿಸಿ ಸಂಭ್ರಮಾಚರಿಸಿದರು.ಶ್ರೀ ಆಂಜನೇಯ, ಮಲ್ಲೇಶ್ವರಸ್ವಾಮಿ, ಗ್ರಾಮದೇವತೆಗಳಾದ ಮಾರಮ್ಮ ಹಾಗೂ ಭೂತಪ್ಪದೇವರ ಉತ್ಸವ ದೊಂದಿಗೆ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಅಂಬಿನ ಉತ್ಸವ ಯಶಸ್ವಿಗೊಳಿಸಿದರು.ವಿಜಯದಶಮಿ ಅಂಬುಮಹೋತ್ಸವ ಉದ್ದೇಶಿಸಿ ಮಾತನಾಡಿದ ಎ.ಎನ್.ಮಹೇಶ್ ವಿಜಯದಶಮಿ ಒಂದು ಐತಿಹಾಸಿಕ ಕಾರ್ಯ ಕ್ರಮ. ವಿಜಯ ನಗರ ಅರಸರ ಕಾಲದಿಂದಲೂ ದಸರಾ ಅತ್ಯಂತ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ. ಮೈಸೂರು ಅರಸರ ಕಾಲದಲ್ಲಿ ನವರಾತ್ರಿ ದಸರಾಗೆ ಮತ್ತಷ್ಟು ಮಹತ್ವ ಬಂದಿದೆ ಎಂದರು.ರಾಜ ಪ್ರಭುತ್ವದ ಕಾಲದಲ್ಲಿ ಸ್ಥಳೀಯ ಆಡಳಿತ ನಡೆಸುವ ಪಟೇಲರನ್ನು ನೇಮಿಸಿ ಅವರಿಂದ ದಸರಾ ಆಚರಣೆಗೆ ಚಾಲನೆ ನೀಡಲಾಗುತ್ತಿತ್ತು. ಅಂದಿನಿಂದ ನಿರಂತರ ನಡೆಯುತ್ತಿದೆ. ತಮ್ಮ ಕುಟುಂಬದ ಪೂರ್ವಜರು ಪಟೇಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಅದನ್ನು ಮುಂದುವರಿಸಲಾಗುತ್ತಿದೆ ಎಂದರು.ವಿಜಯ ದಶಮಿಯಂದು ಅಂಬುಹೊಡೆವ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಆಹ್ವಾನ ನೀಡಿ, ಸಂಪ್ರದಾಯಿಕ ಉಡುಗೆ, ವಾದ್ಯ ಗೋಷ್ಠಿಯೊಂದಿಗೆ ಕರೆತಂದು ವಿಶೇಷ ಗೌರವದಿಂದ ಕಾಣುತ್ತಾರೆ ಎಂದರು.ಮೈಸೂರು ಅರಸ್ ಆಳ್ವಿಕೆ ಸಂದರ್ಭದಲ್ಲಿ ಸಂಸ್ಥಾನದ ಆಡಳಿತ ಅಲ್ಲಲ್ಲಿ ಪಟೇಲರ ನೇತೃತ್ವದಲ್ಲಿ ನಡೆಯುತ್ತಿತ್ತು. ಪಟೇಲರ ವ್ಯಾಪ್ತಿ 20 ರಿಂದ 30 ಹಳ್ಳಿ ಗಳಿದ್ದವು. ಮೈಸೂರಿನಲ್ಲಿ ಆರಂಭವಾದ ಸಾಂಪ್ರದಾಯಿಕ ದಸರಾ ನಾಡಿನಾದ್ಯಂತ ನಡೆಯ ಬೇಕೆಂಬುದು ಅರಸರ ಅಭಿಲಾಷೆ. ಅಂತೆಯೇ ನಾಡಿನ ಎಲ್ಲಾ ಭಾಗದಲ್ಲಿಯೂ ಅಲ್ಲಿಯ ಸಂಸ್ಥಾನದ ಪಟೇಲರ ನೇತೃತ್ವ ದಲ್ಲಿ ನಡೆಸಲು ತೀರ್ಮಾನಿಸಿ ಆರದವಳ್ಳಿ ಸೇರಿದಂತೆ ಎಲ್ಲಾ ಸಂಸ್ಥಾನದಲ್ಲಿಯೂ ಆರಂಭಿಸಲಾಯಿತು.ಸುಮಾರು 100 ವರ್ಷಗಳ ಹಿಂದೆ ಆರದವಳ್ಳಿಯಲ್ಲಿ ಪಟೇಲ ದೊಡ್ಡಪುಟ್ಟೇಗೌಡರು ದಸರಾಕ್ಕೆ ಚಾಲನೆ ನೀಡಿದರು. ಅವರ ನೇತೃತ್ವದಲ್ಲಿ ನಿರಂತರ ನಡೆದು ಕಾಲಾನಂತರದಲ್ಲಿ ಕಾರ್ಯಕ್ರಮ ಸ್ಥಗಿತಗೊಂಡಿತು. ಬಳಿಕ ಚಾಲನೆಗೆ ಬಂದಿದ್ದು ಕಳೆದ 27 ವರ್ಷಗಳ ಹಿಂದೆ ಗಾಮಸ್ಥರು, ಹಿರಿಯರು ಸೇರಿದಂತೆ ಪಟೇಟರ ವಂಶಸ್ಥರಾದ ತಮ್ಮನ್ನು ಕೋರಿದ ಹಿನ್ನೆಲೆಯಲ್ಲಿ ನಿರಂತ ರವಾಗಿ ವಿಜೇಂಭಣೆಯಿಂದ ಗ್ರಾಮದಲ್ಲಿ ದಸರಾ ಕಾರ್ಯಕ್ರಮ ನಡೆಯುತ್ತಿದೆ.ಈ ಸಂದರ್ಭದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ಗ್ರಾಮಸ್ಥರಾದ ಸುರೇಂದ್ರ, ಜಗದೀಶ್, ಎಪಿ ಜಯಣ್ಣ, ಕುಮಾರ್, ಲಲಿತಾ ಶಿವಾನಂದ್ , ಎಂ ನಿಂಗೇಗೌಡ, ಪಾಪೇಗೌಡ, ಷಡಕ್ಣರಿ, ಚಂದ್ರೇಗೌಡ, ಯೋಗೀಶ್, ಸಣ್ಣೇಗೌಡ, ವೀರಭದ್ರಚಾರ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.