ವಿಜಯೇಂದ್ರ ನೇಮಕ ಕಾಂಗ್ರೆಸ್‌ಗೆ ನಷ್ಟವಿಲ್ಲ-ತಂಗಡಗಿ

KannadaprabhaNewsNetwork | Published : Nov 12, 2023 1:03 AM

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕವಾಗಿರುವುದು ಕಾಂಗ್ರೆಸ್‌ಗೆ ಯಾವುದೇ ನಷ್ಟವಿಲ್ಲ. ಪ್ರತಿಪಕ್ಷ ನಾಯಕನಿಲ್ಲದೇ ಈಗಾಗಲೇ ಎರಡು ಅಧಿವೇಶನಗಳು ಕಳೆದಿವೆ. ಬೆಳಗಾವಿ ಅಧಿವೇಶನದಲ್ಲೂ ಬಿಜೆಪಿಗೆ ಪ್ರತಿಪಕ್ಷ ನಾಯಕರಿರುತ್ತಾರೆ ಎಂಬುದು ಗ್ಯಾರಂಟಿ ಇಲ್ಲ ಎಂದು ಸಚಿವ ಶಿವರಾಜ ತಂಗಡಗಿ ಟೀಕಿಸಿದರು.

ಕನ್ನಡಪ್ರಭ ವಾರ್ತೆ ಕಾರಟಗಿ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕವಾಗಿರುವುದು ಕಾಂಗ್ರೆಸ್‌ಗೆ ಯಾವುದೇ ನಷ್ಟವಿಲ್ಲ. ಪ್ರತಿಪಕ್ಷ ನಾಯಕನಿಲ್ಲದೇ ಈಗಾಗಲೇ ಎರಡು ಅಧಿವೇಶನಗಳು ಕಳೆದಿವೆ. ಬೆಳಗಾವಿ ಅಧಿವೇಶನದಲ್ಲೂ ಬಿಜೆಪಿಗೆ ಪ್ರತಿಪಕ್ಷ ನಾಯಕರಿರುತ್ತಾರೆ ಎಂಬುದು ಗ್ಯಾರಂಟಿ ಇಲ್ಲ ಎಂದು ಸಚಿವ ಶಿವರಾಜ ತಂಗಡಗಿ ಟೀಕಿಸಿದರು.

ಕಾರಟಗಿ ತಾಲೂಕಿನ ಉಳೇನೂರು ಗ್ರಾಮದಲ್ಲಿ ಅಕಾಲಿಕ ಮಳೆಗೆ ಹಾನಿಯಾದ ಭತ್ತದ ಬೆಳೆ ಶನಿವಾರ ವೀಕ್ಷಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವೈಯಕ್ತಿಕವಾಗಿ ನಾನೊಬ್ಬ ಸಚಿವನಾಗಿ ಬಿ.ವೈ. ವಿಜಯೇಂದ್ರಗೆ ಅಭಿನಂದನೆ ಸಲ್ಲಿಸುವೆ ಎಂದರು.ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಬಿಜೆಪಿ ಜೊತೆಗೆ ನಿಲ್ಲುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಲಿಂಗಾಯತ ಸಮುದಾಯದವರು ಬಹಳ ಬುದ್ಧಿವಂತರು. ಆಡಳಿತ ನೋಡಿ ಮತ ಚಲಾವಣೆ ಮಾಡುತ್ತಾರೆ. ನಮ್ಮ ಪಕ್ಷದ ಆಡಳಿತ ನೋಡಿ ಲೋಕಸಭಾ ಚುನಾವಣೆಯಲ್ಲೂ ನಮ್ಮ ಜತೆ ಇರಲಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ೨೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರದ ಅಧಿಕಾರಿಗಳ ತಂಡ ರಾಜ್ಯದಲ್ಲಿ ಬರ ಅಧ್ಯಯನ ಮಾಡಿ ವಾಸ್ತವ ಸ್ಥಿತಿ ವರದಿ ನೀಡಿದೆ. ಆದರೆ, ಬಿಜೆಪಿಯವರು ರಾಜ್ಯದಲ್ಲಿ ಬರ ವೀಕ್ಷಣೆ ನೆಪದಲ್ಲಿ ಒಣಗಿದ ಗಿಡ ಹಿಡಿದು ನಾಟಕ ಕಂಪನಿಯ ರೀತಿಯಲ್ಲಿ ತಿರುಗಾಡುವುದನ್ನು ನಿಲ್ಲಿಸಲಿ. ಕೇಂದ್ರದಲ್ಲಿ ತಮ್ಮದೇ ಸರ್ಕಾರ ಇದ್ದು, ಕೂಡಲೇ ರೈತರಿಗೆ ಪರಿಹಾರ ಕೊಡಿಸುವಂಥ ಕೆಲಸ ಮಾಡಲಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Share this article