ಹೊಸಪೇಟೆ: ಯಾವುದೇ ಸಂಸ್ಥೆಗಳನ್ನು ಕಟ್ಟುವಾಗ ಸಮಾಜದ ಚಿಂತನೆ ಹಾಗೂ ದೃಷ್ಟಿಯೊಂದಿಗೆ ಬೆಳೆಸಬೇಕು. ಬೆಳೆದ ಸಂಸ್ಥೆ ಮುಂದಾಲೋಚನೆಯೊಂದಿಗೆ ಮುನ್ನಡೆಯಬೇಕು ಎಂದು ಸ್ಥಳೀಯ ಕೊಟ್ಟೂರು ಸ್ವಾಮಿ ಮಠದ ಜಗದ್ಗುರು ಕೊಟ್ಟೂರು ಬಸವಲಿಂಗ ಸ್ವಾಮೀಜಿ ಹೇಳಿದರು.
ಗೋದ್ರೇಜ್ ಕಂಪನಿಯ ಮುಖ್ಯಸ್ಥ ಪರ್ಶಿ ಮಾಸ್ಟರ್ ಬಹದ್ದೂರ ಮಾತನಾಡಿ, ವಿಕಾಸ ಅಭಿವೃದ್ಧಿಯ ಸಂಕೇತ. ಇಂತಹ ಹೆಸರಿನೊಂದಿಗೆ ಕಾರ್ಯಾರಂಭ ಮಾಡಿದ ವಿಕಾಸ ಬ್ಯಾಂಕ್ ಸದೃಢವಾಗಿ ಬೆಳೆದಿದೆ. ಹೊಸತನ ಕೊಡುವ ಜೊತೆಗೆ ಆರ್ಥಿಕ ಶಿಸ್ತಿನೊಂದಿಗೆ ಮುನ್ನಡೆಯಲು ಮುಂದಾಗಿದ್ದು, ಗೋದ್ರೆಜ್ ಸಂಸ್ಥೆ ಎಲ್ಲ ಹಂತದ ಸಹಕಾರ ನೀಡಲಿದೆ ಎಂದರು.
ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ಮಾತನಾಡಿ, ಭವ್ಯ ಕೇಂದ್ರ ಕಚೇರಿ ಸೇರಿದಂತೆ ದಕ್ಷಿಣ ಭಾರತದ ಪ್ರಥಮ ಡಿಜಿಟಲ್ ವಾಲ್ಟ್ ಲಾಕರ್, ಮಳೆ ನೀರು ಕೊಯ್ಲು, ಸೌರ ಶಕ್ತಿಯಿಂದ ವಿದ್ಯುತ್ ಉತ್ಪಾದನೆ, ಸಿಬ್ಬಂದಿಯ ವಿಶ್ರಾಂತಿ ಸೇರಿದಂತೆ ನಿರಂತರ ತರಬೇತಿಯ ದೃಷ್ಟಿಯಿಂದ ಕಟ್ಟಡ ವಿನ್ಯಾಸಗೊಳಿಸಿ ಇನ್ನಷ್ಟು ಉತ್ತಮ ಸೇವೆಯನ್ನು ನೀಡುವ ದೃಷ್ಟಿಕೊನದಿಂದ ಇಂದು ನೂತನ ಕಟ್ಟಡ ಲೋಕಾರ್ಪಣೆಗೊಂಡಿದೆ. ಇದು ನಮ್ಮ ಸೇವೆಯ ಸಾರ್ಥಕತೆಗೆ ಸಾಕ್ಷಿಯಾಗಿದೆ ಎಂದರು.ಮಾಜಿ ಸಚಿವ ಆನಂದ ಸಿಂಗ್, ಬ್ಯಾಂಕ್ ಆಡಳಿತ ಮಂಡಳಿಯ ಸಲಹೆಗಾರರಾದ ಬಿ.ಜೆ. ಕುಲಕರ್ಣಿ, ನಿರ್ದೇಶಕರಾದ ಛಾಯಾ ದಿವಾಕರ, ರಮೇಶ್ ಪುರೋಹಿತ್, ಎಂ.ವೆಂಕಪ್ಪ, ಸಿ.ಎಸ್. ಸೊಪ್ಪಮಠ, ರಾಜೇಶ್ ಹಿರೇಮಠ, ಅಕ್ಕಿ ಮಲ್ಲಿಕಾರ್ಜನ, ಗಂಗಾಧರ ಪತ್ತಾರ, ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ, ಬಿ.ಎಲ್. ರಾಣಿ ಸಂಯುಕ್ತ, ಅಯ್ಯಾಳಿ ತಿಮ್ಮಪ್ಪ, ಸಾಲಿ ಸಿದ್ದಯ್ಯಸ್ವಾಮಿ ಹಾಗೂ ಗಣ್ಯರು ಪಾಲ್ಗೊಂಡಿದ್ದರು.