ಜೂನ್‌ 3ರಿಂದ ಗ್ರಾಮದೇವತೆ ಟೋಪ ಜಾತ್ರಾ ಮಹೋತ್ಸವ

KannadaprabhaNewsNetwork | Published : May 30, 2025 12:29 AM
ಪ್ರತಿ 12 ವರ್ಷಕ್ಕೊಮ್ಮೆ ಜರುಗುವ ಪಟ್ಟಣದ ಶಕ್ತಿಪೀಠದಲ್ಲಿ ವಿರಾಜಮಾನಳಾದ ಗ್ರಾಮದೇವತೆಯ ಜಾತ್ರಾ ಮಹೋತ್ಸವ ಇದೇ ಜೂ. 3ರಿಂದ 6ರ ವರಗೆ ನಾಲ್ಕು ದಿನಗಳ ಕಾಲ ಇಲ್ಲಿನ ಎಸ್‌ಜೆಜೆಎಂ ಸಂಯುಕ್ತ ಪಪೂ ಮಹಾವಿದ್ಯಾಲಯದ ಆವರಣದಲ್ಲಿ ಜರುಗಲಿದೆ.

ಮುಳಗುಂದ: ಪ್ರತಿ 12 ವರ್ಷಕ್ಕೊಮ್ಮೆ ಜರುಗುವ ಪಟ್ಟಣದ ಶಕ್ತಿಪೀಠದಲ್ಲಿ ವಿರಾಜಮಾನಳಾದ ಗ್ರಾಮದೇವತೆಯ ಜಾತ್ರಾ ಮಹೋತ್ಸವ ಇದೇ ಜೂ. 3ರಿಂದ 6ರ ವರಗೆ ನಾಲ್ಕು ದಿನಗಳ ಕಾಲ ಇಲ್ಲಿನ ಎಸ್‌ಜೆಜೆಎಂ ಸಂಯುಕ್ತ ಪಪೂ ಮಹಾವಿದ್ಯಾಲಯದ ಆವರಣದಲ್ಲಿ ಜರುಗಲಿದೆ.

ಗ್ರಾಮ ದೇವತೆ ದೇವಸ್ಥಾನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಜಾತ್ರೆಯ ವಿವರ ನೀಡಿದ ಗ್ರಾಮದೇವತೆ ಜಾತ್ರಾ ಸಮಿತಿ ಗೌರವಾಧ್ಯಕ್ಷ ಶಿವಣ್ಣ ನೀಲಗುಂದ ಅವರು, ಮುಳಗುಂದ ಗವಿಮಠ, ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಗಳ ಸಾನಿದ್ಯದಲ್ಲಿ ಈ ಜಾತ್ರೆ ನಡೆಯಲಿದೆ ಎಂದು ಹೇಳಿದರು.

ಜೂ.3ರಂದು ಬೆಳಗ್ಗೆ 9 ಕ್ಕೆ ಗ್ರಾಮ ದೇವತೆಯ ಪುರಪ್ರವೇಶ ಕೌಲಪೇಟಿಯ ದುರ್ಗಾದೇವಿಯ ಮಂದಿರಕ್ಕೆ ಹೋಗುವುದು. ನಂತರ ಕಟ್ಟೆ ಮನೆಗಳಿಗೆ ದಯಮಾಡಿಸಿ ಭಕ್ತರಿಂದ ಉಡಿ ತುಂಬುವ ಕಾರ್ಯ ಜರುಗಿ ಚೌತ ಮನೆಯಲ್ಲಿ ವಿರಾಜಮಾನ ಆಗಲಿದ್ದಾಳೆ.

ಸಂಜೆ 6ಕ್ಕೆ ನಡೆಯುವ ಜಾತ್ರಾ ಮಹೋತ್ಸವವನ್ನು ಗದಗ ಅಡವೀಂದ್ರಮಠದ ಮಹೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಕೇರಿಯ ಪಂ.ಡಾ. ರಾಜಗುರು ಗುರುಸ್ವಾಮಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಟೋಪ ಜಾತ್ರಾ ಸಮಿತಿ ಗೌರವಾಧ್ಯಕ್ಷ ಶಿವಣ್ಣ ನೀಲಗುಂದ ವಹಿಸುವರು. ಜಿಲ್ಲಾ ಉಸ್ತವಾರಿ ಸಚಿವ ಎಚ್.ಕೆ. ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ, ವಿಪ ಸದಸ್ಯ ಎಸ್.ವಿ. ಸಂಕನೂರ, ಪಪಂ ಅಧ್ಯಕ್ಷೆ ಯಲ್ಲವ್ವ ಕವಲೂರ ಭಾಗವಹಿಸುವರು.

ಈ ಸಂದರ್ಭದಲ್ಲಿ ನೂತನ ಮೂರ್ತಿ ದಾನಿ ನಾಗರಾಜ ದೇಶಪಾಂಡೆ ದಂಪತಿಗಳಿಗೆ ಹಾಗೂ ಮೂರ್ತಿ ಶಿಲ್ಪಿ ನಾಗಲಿಂಗ ಬಡಿಗೇರ ದಂಪತಿಗಳಿಗೆ ಸನ್ಮಾನಿಸಲಾಗುತ್ತದೆ. ರಾಯಚೂರಿನ ಪ್ರಖ್ಯಾತ ವಚನ ಗಾಯಕರು ಅಂಬಯ್ಯ ನೂಲ್ವಿ ಅವರು ಸಂಗೀತ ಸೇವೆ ನೀಡಲಿದ್ದಾರೆ. ಮನರಂಜನಾ ಕಾರ್ಯಕ್ರಮ ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಕಲಾವಿದರು, ಕಲರ್ಸ್‌ ಕನ್ನಡ ವಾಹಿನಿಯ ಗಿಚ್ಚ ಗಿಲಿಗಿಲಿ, ಕನ್ನಡ ಕೋಗಿಲೆ ಹಾಗೂ ಮಜಾ ಭಾರತ ಖ್ಯಾತ ಕಲಾವಿದರಿಂದ ನಡೆಯಲಿದೆ.ಜೂ.4ರಂದು ಬೆಳಗ್ಗೆ 9ಕ್ಕೆ ಗ್ರಾಮದೇವತೆ ರಥವು ಚೌತ ಮನೆಯಿಂದ ಹೊರಟು ದೇವಿಕಟ್ಟೆಗಳಿಗೆ ದಯಮಾಡಿಸಿ ಭಕ್ತರಿಂದ ಉಡಿ ತುಂಬುವ ಕಾರ್ಯ ನಡೆದು, ಆನಂತರ ಚೌತಮನೆಗೆ ಬಂದು ವಾಸ್ತವ್ಯ ಹೂಡುವಳು. ಸಂಜೆ 6ಕ್ಕೆ ಧರ್ಮಸಭೆ-1ರ ಸಾನಿಧ್ಯವನ್ನು ಬಳಗಾನೂರ ಚಿಕೇನಕೊಪ್ಪ ಚನ್ನವೀರ ಶರಣರಮಠದ ಶಿವಶಾಂತವೀರ ಶರಣರು ವಹಿಸಲಿದ್ದು, ಸಮ್ಮುಖವನ್ನು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು, ಅಧ್ಯಕ್ಷತೆಯನ್ನು ಟೋಪ ಜಾತ್ರಾ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ ವಹಿಸುವರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ, ಮಾಜಿ ಶಾಸಕ ಡಿ.ಆರ್. ಪಾಟೀಲ್, ಯುವ ಧುರೀಣ ಆನಂದ ಗಡ್ಡದೇವರಮಠ, ಪಪಂ ಉಪಾಧ್ಯಕ್ಷೆ ಅನಸೂಯಾ ಸೋಮಗೇರಿ ಭಾಗವಹಿಸುವರು. ರಾಯಭಾಗದ ಪ್ರೊ. ವಿ.ಎಸ್. ಮಾಳಿ ಉಪನ್ಯಾಸ ನೀಡುವರು. ಧಾರವಾಡದ ಖ್ಯಾತ ಗಾಯಕ ಪಂ.ಡಾ. ಎಂ. ವೆಂಕಟೇಶಕುಮಾರ ಅವರಿಂದ ಸಂಗೀತ ಸೇವೆ ನಡೆಯಲಿದೆ. ಜೀ ವಾಹಿನಿಯ ಸರಿಗಮಪ ಕಾರ್ಯಕ್ರಮದ ಖ್ಯಾತ ಕಲಾವಿದರು, ಕಲರ್ಸ್‌ ಕನ್ನಡ ವಾಹಿನಿಯ ಗಿಚ್ಚ ಗಿಲಿಗಿಲಿ, ಕನ್ನಡ ಕೋಗಿಲೆ, ಮಜಾಭಾರತ ಖ್ಯಾತ ಕಲಾವಿದರಿಂದ ಮನರಂಜನೆ ಕಾರ್ಯಕ್ರಮ ಜರಗುವವು.ಜೂ.5ರಂದು ಬೆಳಗ್ಗೆ 9ಕ್ಕೆ ಗ್ರಾಮದೇವತೆ ರಥವು ಚೌತ ಮನೆಯಿಂದ ಹೊರಟು ದೇವಿಕಟ್ಟೆಗಳಿಗೆ ದಯಮಾಡಿಸಿ ಭಕ್ತರಿಂದ ಉಡಿ ತುಂಬಿಕೊಳ್ಳುವುದು, ನಂತರ ಚೌತ ಮನೆಗೆ ಬಂದು ವಾಸ್ತವ್ಯ. ಸಂಜೆ 6ಕ್ಕೆ ಧರ್ಮಸಭೆ -2ರ ದಿವ್ಯ ಸಾನಿಧ್ಯವನ್ನು ಹೊಸಹಳ್ಳಿ ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಗೌರಮ್ಮ ಬಡ್ನಿ ವಹಿಸುವರು. ಶಾಸಕರಾದ ಜಿ.ಎಸ್. ಪಾಟೀಲ, ಡಾ. ಚಂದ್ರು ಲಮಾಣಿ, ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಇಮಾಮಸಾಬ ಶೇಖ ಆಗಮಿಸುವರು. ಗದಗ ಜಿಲ್ಲಾ ಖಜಾನಾಧಿಕಾರಿ ವಿ. ಹಿರಿನಾಥಬಾಬು ಉಪನ್ಯಾಸ ನೀಡಲಿದ್ದಾರೆ. ಹುಬ್ಬಳ್ಳಿಯ ಬಾಲಚಂದ್ರ ನಾಕೋಡ ಅವರಿಂದ ಸಂಗೀತ ಸೇವೆ ಜರುಗಲಿದೆ.

ಜೂ.3ರಿಂದ 5ರ ವರೆಗೆ ಪ್ರತಿದಿನ ಸಂಜೆ 6ರಿಂದ 7ರ ವರೆಗೆ ರೇವಣಶಿದ್ದಯ್ಯ ಮರಿದೇವರಮಠ ಹಾಗೂ ವಿಜಯಲಕ್ಷ್ಮೀ ಹಿರೇಮಠ ಅವರಿಂದ ಸಂಗೀತ ಸೇವೆ ಜರಗುವುದು. ಜೂ. 6ರಂದು ಗ್ರಾಮದೇವತೆಯರ ಪ್ರತಿಷ್ಠಾಪನೆ, ಹೋಮ ಹವನಗಳು ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಜಾತ್ರಾ ಮಹೋತ್ಸವದ ನಿಮಿತ್ತ ನಿತ್ಯ ಮಧ್ಯಾಹ್ನ, ರಾತ್ರಿ ದಾಸೋಹ ಸೇವೆ ನಡೆಯಲಿದೆ ಎಂದು ಅವರು ವಿವರಿಸಿದರು.

ಗ್ರಾಮ ದೇವಾತಾ ಟ್ರಸ್ಟ್‌ ಅಧ್ಯಕ್ಷ ಷಣ್ಮುಖಪ್ಪ ಬಡ್ನಿ, ಉಪಾಧ್ಯಕ್ಷ ಅಶೋಕ ಸೋನಗೋಜಿ, ಚನ್ನಪ್ಪ ಕರಿಗೂಳಪ್ಪನವರ, ನಾಗರಾಜ ನೀಲಗುಂದ, ರಾಮಣ್ಣಾ ಕಮಾಜಿ, ಕೆ.ಎಲ್. ಕರಿಗೌಡರ, ಬಸವರಾಜ ಹಾರೋಗೇರಿ, ಪಿ.ಎ.ವಂಟಕರ ಪತ್ರಿಕಾ ಗೋಷ್ಠಿಯಲ್ಲಿ ಇದ್ದರು.