ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಿರ್ಜಾನ್ ಶಾಖಾ ಮಠದ ಸ್ವಾಮೀಜಿ
ಕನ್ನಡಪ್ರಭ ವಾರ್ತೆ ಕಾರವಾರಗ್ರಾಮ ಸತ್ಸಂಗ ಕಾರ್ಯಕ್ರಮಗಳು ಧಾರ್ಮಿಕ ಪ್ರಜ್ಞೆ, ಒಗ್ಗಟ್ಟು, ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವ ಮೂಲಕ ಸಮುದಾಯವನ್ನು ಸದಾ ಜಾಗೃತವಾಗಿರಿಸಲು ಮತ್ತು ಉತ್ತಮ ಕಾರ್ಯಗಳಲ್ಲಿ ತೊಡಗಲು ಸಹಕಾರಿಯಾಗುತ್ತವೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ ಶ್ರೀಗಳು ತಿಳಿಸಿದರು.
ತಾಲೂಕಿನ ಮಲ್ಲಾಪುರ ಗ್ರಾಪಂ ಸಭಾಭವನದಲ್ಲಿ ಆಯೋಜಿಸಿದ್ದ ಗ್ರಾಮ ಸತ್ಸಂಗ ಹಾಗೂ ಗುರು ಪಾದುಕಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆ ನಮ್ಮನ್ನು ಸದಾ ಜಾಗೃತವಾಗಿ ಇರುವಂತೆ ಮಾಡುತ್ತವೆ. ಗ್ರಾಮದ ಕುಲಬಾಂಧವರು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಇಂತಹ ಶ್ರೇಷ್ಠ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಲು ಸಾಧ್ಯ ಎಂದರು.ಸತ್ಸಂಗದ ಮಹತ್ವದ ಜೊತೆಗೆ ಶ್ರೀಗಳು ಶಿಕ್ಷಣ ಮತ್ತು ಸಂಸ್ಕಾರದ ಕುರಿತು ಮಹತ್ವದ ಸಂದೇಶ ನೀಡಿದರು. ನಮ್ಮ ಮಕ್ಕಳಿಗೆ ಉತ್ತಮ ವಿದ್ಯೆಯ ಜೊತೆಗೆ ಸಂಸ್ಕಾರ ಸಹ ನೀಡಬೇಕು. ವಿದ್ಯಾಭ್ಯಾಸವು ಜ್ಞಾನ ನೀಡಿದರೆ, ಸಂಸ್ಕಾರವು ಜೀವನಕ್ಕೆ ಸರಿಯಾದ ದಿಕ್ಕನ್ನು ನೀಡುತ್ತದೆ ಎಂದು ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿದ್ದು, ಯಾರಾದರೂ ಪೋಷಕರಿಗೆ ತಮ್ಮ ಮಕ್ಕಳಿಗೆ ಓದಿಸಲು ಸಾಧ್ಯವಾಗದೆ ಇದ್ದಲ್ಲಿ, ಅಂತಹ ಮಕ್ಕಳನ್ನು ಮಠಕ್ಕೆ ಕಳುಹಿಸಿದ್ದಲ್ಲಿ ಮಠವು ಅವರಿಗೆ ಸಂಪೂರ್ಣ ಉಚಿತ ವಿದ್ಯಾಭ್ಯಾಸದ ವ್ಯವಸ್ಥೆ ಕಲ್ಪಿಸುತ್ತದೆ ಎಂದು ತಿಳಿಸಿದರು.ಹರ್ಟುಗಾ, ಕೊಡಾರ, ಕುಚೆಗಾರ್, ವಿರ್ಜೆ, ಕೈಗಾ ವಸತಿ ಸಂಕೀರ್ಣ, ಮತ್ತು ಕೈಗವಾಡದ ಒಕ್ಕಲಿಗ ಸಮುದಾಯದ ಹಿರಿಯ ನಾಗರಿಕರು ಹಾಗೂ ಕುಲಬಾಂಧವರು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು.
ಹಾಲಕ್ಕಿ ಒಕ್ಕಲಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿಂಗ ಗೌಡ, ಗಣಪತಿ ತಿಮ್ಮೇಗೌಡ ಮಿರಾಶೆ, ಮೋಹನ್ ದಾಸ್ ಗೌಡ ಅಂಕೋಲಾ, ಸಿದ್ದಾಪುರ ಕರೆ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಅಮ್ಮುಗೌಡ, ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ಉತ್ತರಕನ್ನಡ ನಿರ್ದೇಶಕಿ ತನುಜ ರಂಗಸ್ವಾಮಿ ಮಲ್ಲಾಪುರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಮುದಾಯದ ಮುಖಂಡರು ಸತ್ಸಂಗದ ಆಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.