ಗ್ರಾಮಸ್ಥರು ಲೆಕ್ಕ ಪರಿಶೋಧಿಸಿ, ಪ್ರಶ್ನಿಸಬಹುದು

KannadaprabhaNewsNetwork | Published : Feb 25, 2024 1:46 AM

ಸಾರಾಂಶ

ಜಮಾಬಂಧಿ ಮೂಲಕ ಗ್ರಾಮ ಪಂಚಾಯಿತಿಗಳಲ್ಲಿ ಕಳೆದ ಸಾಲಿನ ಲೆಕ್ಕ ಹಾಗೂ ಕಾಮಗಾರಿ ಪರಿಶೀಲನೆಯನ್ನು ಗ್ರಾಮಸ್ಥರು ಪ್ರಾಮಾಣಿಕವಾಗಿ ಪ್ರಶ್ನಿಸಬಹುದು ಎಂದು ಕಡಹಿನಬೈಲು ಗ್ರಾಮ ಪಂಚಾಯಿತಿ ಜಮಾಬಂಧಿ ಹಾಗೂ ಗ್ರಾಮಸಭೆ ನೋಡಲ್ ಅಧಿಕಾರಿ ಪುನೀತ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಜಮಾಬಂಧಿ ಮೂಲಕ ಗ್ರಾಮ ಪಂಚಾಯಿತಿಗಳಲ್ಲಿ ಕಳೆದ ಸಾಲಿನ ಲೆಕ್ಕ ಹಾಗೂ ಕಾಮಗಾರಿ ಪರಿಶೀಲನೆಯನ್ನು ಗ್ರಾಮಸ್ಥರು ಪ್ರಾಮಾಣಿಕವಾಗಿ ಪ್ರಶ್ನಿಸಬಹುದು ಎಂದು ಕಡಹಿನಬೈಲು ಗ್ರಾಮ ಪಂಚಾಯಿತಿ ಜಮಾಬಂಧಿ ಹಾಗೂ ಗ್ರಾಮಸಭೆ ನೋಡಲ್ ಅಧಿಕಾರಿ ಪುನೀತ್ ತಿಳಿಸಿದರು.

ಶುಕ್ರವಾರ ಶೆಟ್ಟಿಕೊಪ್ಪದಲ್ಲಿ ನಡೆದ ಕಡಹಿನ ಬೈಲು ಗ್ರಾಪಂ ಜಮಾಬಂಧಿ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಆಡಳಿತದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಜಾರಿಗೆ ತರುವ ಉದ್ದೇಶದಿಂದ ಗ್ರಾಮಸ್ಥರ ಸಮ್ಮುಖದಲ್ಲಿ ಜಮಾಬಂಧಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಗ್ರಾಮದ ಜನತೆ ಈಕಾರ್ಯಕ್ರಮ ಯಶಸ್ಸಿಗೆ ಕಾರಣವಾಗಿದ್ದಾರೆ. ಗ್ರಾಪಂ ಕ್ರಿಯಾ ಯೋಜನೆಯಂತೆ ನಿಗದಿತ ಸ್ಥಳದಲ್ಲಿಯೇ ನಿಗದಿತ ಕಾಮಗಾರಿ ಮಾಡಬೇಕು. ಒಂದು ವೇಳೆ ಬದಲಾವಣೆ ಬಯಸಿದಲ್ಲಿ ಪಂಚಾಯಿತಿ ಸಭೆಯಲ್ಲಿಯೇ ಚರ್ಚಿಸಿ ಕಾಮಗಾರಿ ಬದಲಾಯಿಸಲು ಅವಕಾಶವಿದೆ ಎಂದರು. ಸಭೆ ಅಧ್ಯಕ್ಷತೆ ವಹಿಸಿದ್ದ ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್ ಮಾತನಾಡಿ, ಗ್ರಾಪಂ ಅಭಿವೃದ್ಧಿ ಕಾಮಗಾರಿ ಗಳಲ್ಲಿ ಎಲ್ಲರೂ ಒಮ್ಮತದಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ಕೊಂಚ ಅಭಿಪ್ರಾಯ ಬೇಧವಿದ್ದರೂ ಅದನ್ನು ಸರಿಪಡಿಸಿ ಕೊಂಡು ಕಾರ್ಯ ನಿರ್ವಹಿಸುತ್ತಿದ್ದೇವೆ. ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ನಡೆಸುವುದೇ ಮುಖ್ಯ ಉದ್ದೇಶ ಎಂದರು. ಸಭೆಯಲ್ಲಿ ಕಳೆದ ಸಾಲಿನಲ್ಲಿ ಕುಡಿಯುವ ನೀರಿಗೆ ಮಾಡಿದ ಖರ್ಚು ವೆಚ್ಚ, ಬೀದಿ ದೀಪದ ಖರೀದಿ, ಎಸ್.ಸಿ. ಹಾಗೂ ಎಸ್.ಟಿ. ಕಾಲೋನಿಗಳ ಅಭಿವೃದ್ಧಿಗೆ ನಿಗದಿ ಮಾಡಿದ ಕಾಮಗಾರಿ ಸ್ಥಳಾಂತರಿಸಿದ ಬಗ್ಗೆ ಗ್ರಾಮಸ್ಥರು ಆಕ್ಷೇಪ ಸಲ್ಲಿಸಿ ದರು. ಸಭೆಯಲ್ಲಿ ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್, ಸದಸ್ಯರಾದ ವಾಣಿ ನರೇಂದ್ರ,ಅಶ್ವಿನಿ,ಚಂದ್ರಶೇಖರ್, ಪೂರ್ಣಿಮ, ಎ.ಬಿ.ಮಂಜುನಾಥ್,ಲಿಲ್ಲಿ ಮಾತುಕುಟ್ಟಿ,ಪಿಡಿಒ ವಿಂದ್ಯಾ, ಬಾಳೆ ಪಂಚಾಯಿತಿ ಪಿಡಿಒ.ಪ್ರೇಮ, ಗ್ರಾಮದ ಮುಖಂಡರಾದ ಸುರೇಶ್, ಆಂಟೋನಿ.ಎಂ.ಮಹೇಶ್, ಎಲ್ದೋ, ಅಜೇಶ್,ಬಿನು ಮತ್ತಿತರರು ಇದ್ದರು. ಇದೇ ಸಭೆಯಲ್ಲಿ ನರಸಿಂಹರಾಜಪುರ ಅಗ್ನಿಶಾಮಕ ದಳದವರು ಅಗ್ನಿ ದುರಂತ, ತುರ್ತ ಸೇವೆ ಹಾಗೂ ಬೆಂಕಿ ಆಕಸ್ಮಿಕ ಬಗ್ಗೆ ಗ್ರಾಮಸ್ಥರಿಗೆ ತಿಳುವಳಿಕೆ ಮೂಡಿಸಿದರು.

ಚಿತ್ರ: ನರಸಿಂಹರಾಜಪುರ ತಾಲೂಕು ಕಡಹಿನ ಬೈಲು ಗ್ರಾಮ ಪಂಚಾಯಿತಿಯಲ್ಲಿ ಜಮಾಬಂಧಿ ಕಾರ್ಯಕ್ರಮ ನಡೆಯಿತು.

Share this article