ನೆಮ್ಮಾರ್ ಅಬೂಬಕರ್
ಇಲ್ಲಿ ಸುಮಾರು 30ರಿಂದ 35 ಪರಿಶಿಷ್ಟ ಪಂಗಡಕ್ಕೆ ಸೇರಿದ ಗಿರಿಜನ ಕುಟುಂಬಗಳು ವಾಸಿಸುತ್ತಿವೆ. ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಇವರು ಮೂಲ ಸೌಲಭ್ಯಗಳಿಂದ ವಂಚಿತರಾಗುತ್ತಲೇ ಬಂದಿದ್ದಾರೆ. ಓಡಾಡಲು ರಸ್ತೆಯಿಲ್ಲ, ಹಳ್ಳ ದಾಟಲು ಸೇತುವೆಯಿಲ್ಲ. ವಿದ್ಯುತ್, ಸಮರ್ಪಕ ಕುಡಿಯುವ ನೀರು, ಸೌಕರ್ಯಗಳಿಂದ ಬಲು ದೂರ ಉಳಿದಿದ್ದಾರೆ.
ಇದು ತಾಲೂಕಿನ ಕೆರೆಪಂಚಾಯಿತಿ ಭಲೇಕಡಿ ಗ್ರಾಮಸ್ಥರ ಹಲವು ವರ್ಷಗಳ ಜ್ವಲಂತ ಸಮಸ್ಯೆ.ತಾಲೂಕಿನ ಕೇಂದ್ರ ಶೃಂಗೇರಿಯಿಂದ ಸುಮಾರು ಅಂದಾಜು 40-45 ಕಿ.ಮಿ ದೂರವಿರುವ ಭಲೆಕಡಿ ಗ್ರಾಮಕ್ಕೆ ಮೂಭೂತ ಸೌಕರ್ಯಗಳೇ ಇಲ್ಲವಾಗಿದೆ. ಇವರು ಅಗತ್ಯ ವಸ್ತುಗಳನ್ನು ಕೊಳ್ಳಲು ಬರಬೇಕಾದರೆ ಸುಮಾರು 7 ಕಿ.ಮಿ.ದೂರವಿರುವ ಕೆರೆಕಟ್ಟೆಗೆ ನಡೆದುಕೊಂಡೇ ಬರಬೇಕು. ಭಲೇಕಡಿ ಹುಲುಗಾರು ಬೈಲು ನಡುವೆ ಇರುವ ಹಳ್ಳಕ್ಕೆ ಒಂದು ಕಾಲು ಸಂಕವನ್ನು ನಿರ್ಮಿಸಿಕೊಂಡಿದ್ದರು.ಅದರ ಮೇಲೆಯೇ ನಡೆದು ಕೊಂಡು ಓಡಾಡುತ್ತಿದ್ದರು.ಕಳೆದ ವರ್ಷದ ಭಾರೀ ಮಳೆಯಲ್ಲಿ ಹಳ್ಳ ಉಕ್ಕಿ ಹರಿದು ಕಾಲು ಸಂಕ ಕೊಚ್ಚಿಕೊಂಡು ಹೋಗಿತ್ತು. ಮತ್ತೆ ಗ್ರಾಮಸ್ಥರೆ ಸೇರಿಕೊಂಡು ಪ್ರತಿ ವರ್ಷ ಕಾಲು ಸಂಕ ನಿರ್ಮಿಸಿಕೊಳ್ಳುತ್ತಾರೆ.ಶಾಲೆಗೆ ಹೋಗುವ ಮಕ್ಕಳು, ತುರ್ತು ಆಸ್ಪತ್ರೆಗೆ, ಬ್ಯಾಂಕ್ ಕಚೇರಿಗಳಿಗೆ ,ಕೃಷಿ ಚಟುವಟಿಕೆಗಳಿಗೆ ಈ ಕಾಲು ಸಂಕದಲ್ಲಿಯೇ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕು.ಅನಾರೋಗ್ಯ ಉಂಟಾದರೆ ತುರ್ತು ಆಸ್ಪತ್ರೆಗೆ ಕರೆದೊಯ್ಯಲು ಸರಿಯಾದ ರಸ್ತೆಯಿಲ್ಲ.ಮಹಿಳೆಯರು,ವೃದ್ದರು,ಮಕ್ಕಳು ಈ ಕಾಲುಸಂಕದಲ್ಲಿ ಓಡಾಡಲು ಹರಸಾಹಸ ಪಡಬೇಕಿದೆ.ಈ ಭಾಗದಲ್ಲಿ ವರ್ಷದಲ್ಲಿ ನಾಲ್ಕೈದು ತಿಂಗಳು ನಿರಂತರ ಮಳೆಗಾಲವಿರುದರಿಂದ ಹಳ್ಳ ಉಕ್ಕಿ ಹರಿಯುತ್ತಿರುವುದರಿಂದ ಸಂಕದ ಮೇಲೆ ಓಡಾಡಲು ಕಷ್ಟವಾಗುವುದರಿಂದ ಸಂಪರ್ಕ ಕಡಿತಗೊಳ್ಳುತ್ತದೆ.
ಮಳೆಗಾಲ ಆರಂಭವಾದರೆ ಇವರಿಗೆ ಒಡಾಡಲು ಇತ್ತ ಸೇತುವೆಯೂ ಇಲ್ಲ,ಅತ್ತ ಕಾಲು ಸಂಕವೂ ಇಲ್ಲ.ಸರ್ಕಾರ ಇನ್ನಾದರೂ ಇವರ ಸಮಸ್ಯೆಗೆ ಸ್ಪಂದಿಸಿ ಇವರಿಗೆ ಓಡಾಡಲು ಸೇತುವೆ,ರಸ್ತೆ ನಿರ್ಮಿಸಿಕೊಡಲು ಮುಂದಾಗಬೇಕಿದೆ.
ನಾವು ಕಳೆದ ಹಲವು ವರ್ಷಗಳಿಂದ ನಿರಂತರ ಮನವಿ,ಅಹವಾಲು ಹೇಳುತ್ತಲೇ ಹೋರಾಟ ಮಾಡುತ್ತಲೇ ಬಂದಿದ್ದೇವೆ.ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.ಚುನಾವಣೆ ವೇಳೇ ಕೇವಲ ಭರವಸೆ ಮಾತ್ರ ನೀಡುತ್ತಾರೆ.ಉಳಿದಂತೆ ನಮಗೆ ಕಾಲು ಸಂಕವೇ ಗತಿ.ಇನ್ನಾದರೂ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು ಎಂದು ಗ್ರಾಮದ ಹರೀಶ್ ಒತ್ತಾಯಿಸುತ್ತಾರೆ.
ಪ್ರಭಾಕರ್ ಗ್ರಾಮಸ್ಥ.