ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮೈಸೂರು- ಬೆಂಗಳೂರು ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿನ ಚರಂಡಿ ಅವ್ಯವಸ್ಥೆ ಖಂಡಿಸಿ ಗಂಜಾಂ ಗ್ರಾಮಸ್ಥರು, ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ ಬಾಬು ನೇತೃತ್ವದಲ್ಲಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.ಗಂಜಾಂ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಮೈಸೂರು- ಬೆಂಗಳೂರು ಹೆದ್ದಾರಿ ಸರ್ವಿಸ್ ರಸ್ತೆ ತಡೆದು ಅವ್ಯವಸ್ಥೆ ಖಂಡಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ವೀಸ್ ರಸ್ತೆಯಲ್ಲಿ ಚರಂಡಿ ಅವ್ಯವಸ್ಥೆಯಿಂದಾಗಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಈ ಬಗ್ಗೆ ಹಲವು ಬಾರಿ ಈ ಬಗ್ಗೆ ಪುರಸಭೆ ಮತ್ತು ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರೂ ಸರಿಪಡಿಸಿಲ್ಲ ಎಂದು ಕಿಡಿಕಾರಿದರು.ಪ್ರತಿಭಟನಾ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಆಗಮಿಸಿ ಸರಿಪಡಿಸುವ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆದ ಗ್ರಾಮಸ್ಥರು ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆ ಹರಿಸಿದಿದ್ದರೆ ಪುರಸಭೆ ಕಚೇರಿ ಮುತ್ತಿಗೆ ಸೇರಿ ಹೆದ್ದಾರಿ ತಡೆಯುವ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗಂಜಾಂ ಅಭಿ, ಛಾಯಾದೇವಿ, ಜಗದೀಶ್, ಮದನ್ ಸೇರಿದಂತೆ ಗಂಜಾಂ ಗ್ರಾಮಸ್ಥರು ಭಾಗವಹಿಸಿದ್ದರು.ಜೂ.12ರಂದು ಚಂದ್ರವನ ಆಶ್ರಮದಲ್ಲಿ ಯೋಗೋತ್ಸವ
ಕನ್ನಡಪ್ರಭ ವಾರ್ತೆ ಮಂಡ್ಯಕರ್ನಾಟಕ ಸಂಸ್ಕೃತಿ ವಿಶ್ವವಿದ್ಯಾಲಯ, ತ್ರಿನೇತ್ರ ಇಂಟರ್ನ್ಯಾಷನಲ್ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗೋತ್ಸವ ಕಾರ್ಯಕ್ರಮ ಜೂ.12ರಂದು ಬೆಳಗ್ಗೆ 7 ಗಂಟೆಗೆ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿ ಆಯೋಜಿಸಲಾಗಿದೆ ಎಂದು ವಿವಿಯ ಕುಲಸಚಿವ ಪ್ರೊ.ವಿ.ಗಿರೀಶ್ ಚಂದ್ರ ತಿಳಿಸಿದರು.
ಈ ಬಾರಿಯ ಯೋಗ ದಿನವನ್ನು ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಶೀರ್ಷಿಕೆಯಡಿ ಯೋಗೋತ್ಸವವನ್ನು ಆಚರಿಸಲಾಗುವುದು. ಯೋಗೋತ್ಸವದ ದಿವ್ಯ ಸಾನಿಧ್ಯವನ್ನು ಬೇಬಿಮಠದ ಪೀಠಾಧಿಪತಿ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ವಹಿಸಲಿದ್ದು, ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸುವರು, ವಿವಿಯ ಕುಲಪತಿ ಡಾ.ಅಹಲ್ಯಾ.ಎಸ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ಮುಕ್ತ ವಿವಿಯ ಕುಲಪತಿ ಪ್ರೊ.ಶರಣಪ್ಪ ವಿ.ಹಲಸಿ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.ಯೋಗೋತ್ಸವದ ಅಂಗವಾಗಿ ಚಂದ್ರವನ ಆಶ್ರಮದಿಂದ ಪಶ್ಚಿಮವಾಹಿನಿ ವೃತ್ತದವರೆಗೆ ಜಾಥ ನಡೆಸಿ, ಮಾನವ ಸರಪಳಿ ನಿರ್ಮಿಸುವ ಮೂಲಕ ಯೋಗದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಚಂದ್ರವನ ಆಶ್ರಮದ ಕಾರ್ಯದರ್ಶಿ ಸತೀಶ್, ಖಜಾಂಚಿ ನಾಗೇಶ್, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣ್ಯೈ, ಶಿವಮೂರ್ತಿ, ಜಯರೇವಣ್ಣ ಇದ್ದರು.