ಕನ್ನಡಪ್ರಭ ವಾರ್ತೆ ಉಡುಪಿ
ಕೆಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಕನ್ನಡ ಭಾಷೆಯಲ್ಲಿ ಕ್ರೈಸ್ತ ಸಾಹಿತಿಗಳು ಬರೆದಿರುವ ಪುಸ್ತಕಗಳಿಗೆ ಪ್ರತಿವರ್ಷ ನೀಡಲಾಗುವ ದಿ.ದಾಂತಿ ಪುರಸ್ಕಾರಕ್ಕೆ 2023ನೇ ಸಾಲಿಗೆ ವಿನಿಶಾ ರೊಡ್ರಿಗಸ್ ಅವರ ‘ಎತ್ತಿನಗಾಡಿ ಎಕ್ಸ್ ಪ್ರೆಸ್ - 2’ ಪುಸ್ತಕ ಆಯ್ಕೆಯಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ಅಂಬಾಗಿಲು ಸಮೀಪದ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ನಡೆಯಿತು.ಪ್ರಶಸ್ತಿ ಪುರಸ್ಕಾರವು 25 ಸಾವಿರ ರು. ನಗದಿನೊಂದಿಗೆ ಶಾಲು, ನೆನಪಿನ ಕಾಣಿಕೆಯನ್ನು ಹೊಂದಿದ್ದು, ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಪ್ರದಾನ ಮಾಡಿದರು.
ಇದೇ ವೇಳೆ ಧರ್ಮಪ್ರಾಂತ್ಯ ಮಟ್ಟದ ದಿ.ಡೆನಿಸ್ ಡಿಸಿಲ್ವಾ ಲೇಖನ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ಕೂಡ ಜರುಗಿತು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿನಿಶಾ ರೊಡ್ರಿಗಸ್, ಯುವಜನತೆ ಇಂದು ಸಾಮಾಜಿಕ ಜಾಲತಾಣಗಳತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ವಿರಳವಾಗುತ್ತಿದೆ. ಯುವಜನರು ಪುಸ್ತಕಗಳನ್ನು ಓದುವತ್ತ ಪ್ರೋತ್ಸಾಹ ನೀಡುವ ಕೆಲಸ ನಡೆಯಬೇಕು ಎಂದರು.
ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ದಿ.ದಾಂತಿ ಪುರಸ್ಕಾರ ಸಮಿತಿ ಸಂಚಾಲಕ ಆಲ್ಫೋನ್ಸ್ ಡಿಕೋಸ್ತಾ ನೆರವೇರಿಸಿದರು. ದಿ.ಡೆನಿಸ್ ಡಿಸಿಲ್ವಾ ಲೇಖನ ಸ್ಪರ್ಧೆಯ ವಿಜೇತರ ವಿವರವನ್ನು ಸಂಚಾಲಕ ಡಾ.ಜೆರಾಲ್ಡ್ ಪಿಂಟೊ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅರಣ್ಯ ಸಂರಕ್ಷಾಣಾಧಿಕಾರಿ ಕ್ಲಿಫರ್ಡ್ ಲೋಬೊ, ಉಡುಪಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ ಮಾಜಿ ಅಧ್ಯಕ್ಷ ಜಾನ್ ಡಿಸಿಲ್ವಾ, ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ನಿಕಟಪೂರ್ವ ಅಧ್ಯಕ್ಷ ಮೇರಿ ಡಿಸೋಜ, ನಿಯೋಜಿತ ಅಧ್ಯಕ್ಷ ರೊನಾಲ್ಡ್ ಆಲ್ಮೇಡಾ, ಉಪಾಧ್ಯಕ್ಷರಾದ ಸೊಲೊಮನ್ ಆಲ್ವಾರಿಸ್, ಸಹಕಾರ್ಯದರ್ಶಿ ಲೂಯಿಸ್ ಡಿಸೋಜಾ, ಲೆಸ್ಲಿ ಕರ್ನೆಲಿಯೋ, ವಲಯ ಅಧ್ಯಕ್ಷರಾದ ರೋಸಿ ಕ್ವಾಡ್ರಸ್, ಜುಲಿಯೆಟ್ ಡಿಸೋಜ, ವಿಲ್ಸನ್ ಡಿ ಆಲ್ಮೇಡಾ, ವಿಲ್ಸನ್ ಮಸ್ಕರೇನಸ್, ಶಾಂತಿ ಪಿರೇರಾ ಉಪಸ್ಥಿತರಿದ್ದರು.