ಹುಬ್ಬಳ್ಳಿ:
ಇಲ್ಲಿನ ಮೂರುಸಾವಿರ ಮಠದ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು. ನಂತರ ಪಂಜಿನ ಮೆರವಣಿಗೆ ನಡೆಸಲಾಯಿತು. ದಾಜಿಬಾನ್ಪೇಟ, ಸಂಗೊಳ್ಳಿ ರಾಯಣ್ಣ ವೃತ್ತ ಸೇರಿದಂತೆ ಮತ್ತಿತರರ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಬಳಿಕ ತಹಸೀಲ್ದಾರ್ ಕಚೇರಿ ತೆರಳಿ ಮನವಿ ಸಲ್ಲಿಸಲಾಯಿತು.
ಸಭೆಯ ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಶ್ರೀ ಮಾತನಾಡಿ, 1971ರಲ್ಲಿ ಪಾಕಿಸ್ತಾನದ ಆಡಳಿತ ವಿರೋಧಿ ಖಂಡಿಸಿ ಬಾಂಗ್ಲಾ ಪ್ರತ್ಯೇಕ ದೇಶವಾಯಿತು. ಅವರು ತಮ್ಮ ದೇಶವನ್ನು ಕಟ್ಟಿಕೊಳ್ಳಲು ಆಗ ಸಹಕಾರ ಮಾಡಿದ್ದು ಭಾರತ. ಇದರ ಕೃತಜ್ಞತೆ ಸದಾಕಾಲ ಆ ದೇಶ ಹೊಂದಬೇಕು ಎಂದರು.ಒಂದು ಧರ್ಮ ಮತ್ತೊಂದು ಧರ್ಮವನ್ನು ಗೌರವಿಸಬೇಕು. ಯಾವ ಧರ್ಮವೂ ಅದನ್ನು ಮಾಡುವುದಿಲ್ಲವೋ ಅದು ಧರ್ಮವೇ ಅಲ್ಲ. ದಯವೇ ಧರ್ಮದ ಮೂಲ ಎಂದು ಬಸವಣ್ಣ ಹೇಳಿದ್ದಾರೆ. ಅಲ್ಲಿನ ಇಸ್ಲಾಮಿಯರು ತಮ್ಮ ಧರ್ಮ ಶ್ರೇಷ್ಠವೇ ಎಂಬುದನ್ನು ಯೋಚಿಸಬೇಕು. ಒಂದು ಧರ್ಮದ ಮೇಲೆ ಮತ್ತೊಂದು ಧರ್ಮ ಹಿಂಸೆ ಮಾಡುವುದು ಸರಿಯಲ್ಲ. ಇಸ್ಕಾನ್ ಸಂತನ ನಡೆಸಿಕೊಂಡ ರೀತಿ ಅಸಹನೀಯ ಹಾಗೂ ಹೇಯ ಕೃತ್ಯವಾಗಿದೆ. ಇದು ನೀಚತನದ ಪ್ರವೃತ್ತಿಯಾಗಿದೆ. ಬಾಂಗ್ಲಾದೇಶದ ನಡೆಯನ್ನು ಹಿಂದೂಗಳು ಖಂಡಿಸುತ್ತೇವೆ. ಅಲ್ಲಿ ಸರ್ಕಾರ ಸಮಸ್ಯೆ ತೊಡೆದು ಹಿಂದೂಗಳಿಗೆ ಗೌರವ ನೀಡಿ, ಹಿಂದೂ ಆಚರಣೆ ಆದ್ಯತೆ ನೀಡಬೇಕು ಎಂದರು.
ಮಾತಾ ಆಶ್ರಮದ ತೇಜೋಮಯಿ ಮಾತಾ, ಇಸ್ಕಾನ್ ಸಂತನ ಎದೆಯ ಮೇಲೆ ಕಾಲಿರಿಸಿದ್ದಾರೆ. ಅಲ್ಲಿರುವುದು ಶ್ರೀಕೃಷ್ಣ. ಅವರನ್ನು ಬಡಿದೆಬ್ಬಿಸಿದ್ದಾರೆ. ಹಿಂದೂಗಳು ಸಹನೆಯ ಮೂರ್ತಿಗಳು. ಎಲ್ಲವನ್ನೂ ತಡೆದುಕೊಳ್ಳುತ್ತಾರೆ. ಸಹನೆ ಮೀರಿದ ಮೇಲೆ ದುರ್ಗೆ ಆಗುತ್ತಾಳೆ. ಪ್ರಸಂಗ ಬಂದಾಗ ಶಸ್ತ್ರಾಸ್ತ್ರ ಹಿಡಿಯಬೇಕು. ಜತೆಗೆ ಪ್ರಾರ್ಥನೆ ಮಾಡಬೇಕು. ಪ್ರಾರ್ಥನೆಯಿಂದ ಎಲ್ಲದಕ್ಕೂ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಿದರು.
ವಿನಾಯಕ ತಲಗೇರಿ, 1.50 ಲಕ್ಷ ಜನ ಬಾಂಗ್ಲಾ ಬಿಟ್ಟು ಬರುತ್ತಿದ್ದಾರೆ. 80 ಸಾವಿರ ಜನರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದರು.
ಇಸ್ಕಾನ್ ರಾಜೀವಲೋಚನದಾಸ ಮಾತನಾಡಿದರು. ಈ ವೇಳೆ ರುದ್ರಾಕ್ಷಿಮಠದ ಬಸವಲಿಂಗಶ್ರೀ, ಕುಂದಗೋಳದ ಕಲ್ಯಾಣಪುರ ಮಠದ ಬಸವಣ್ಣಜ್ಜ, ಮಹಾಂತ ದೇವರು, ಹರೀಶ, ಬಾಲಕೃಷ್ಣ ಕಲಬುರ್ಗಿ, ಭಾಸ್ಕರ್ ಜಿತೂರಿ, ಉದ್ರಾಮ ಪ್ರಜಾಪತ್, ರಾಮಸಿಂಗ ರಜಪೂತ, ವಿಜಯ ವೇರ್ಣಕರ್, ಮಹಾದೇವ ಕರಮರಿ, ಸುಭಾಸಸಿಂಗ್ ಜಮಾದಾರ ಸೇರಿದಂತೆ ಹಲವರಿದ್ದರು.