ವಿರಾಜಪೇಟೆ: ಲಿಟಲ್ ಸ್ಕಾಲರ್ಸ್ ಅಕಾಡೆಮಿ ಮೌಲ್ಯಯುತ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು ಅದರ ಜೊತೆಯಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವುದು ಪ್ರಶಂಸನೀಯವಾಗಿದೆ ಎಂದು ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ಪರ್ಲ್ ಚೆವುರ್ ಅವರು ಅಭಿಪ್ರಾಯಪಟ್ಟರು.
ನಾಯಕತ್ವವು ಪ್ರತಿಯೊಬ್ಬ ವಿದ್ಯಾರ್ಥಿಗೂ ಅಗತ್ಯವಾಗಿದ್ದು ತಮಗೆ ವಹಿಸಿದ ಕಾರ್ಯವನ್ನು ಜವಾಬ್ದಾರಿಯಿಂದ ಮಾಡುವುದು ಮುಖ್ಯವಾಗಿರುತ್ತದೆ. ನಿಜವಾದ ನಾಯಕನು ದಯೆ, ಜವಾಬ್ದಾರಿ, ಪರಸ್ಪರ ಸಹಾಯ ಮಾಡುವ ಹಾಗೂ ಇತರರಿಗೆ ಉತ್ತಮ ಉದಾಹರಣೆ ಆಗಿರುತ್ತಾನೆ ಎಂದರು.
ಮುಖ್ಯೋಪಾಧ್ಯಾಯ ಮೀರಾ ಪೂಣಚ್ಚ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೆರಡರಲ್ಲಿಯೂ ಉತ್ತಮ ಸಾಧನೆ ಮಾಡುತ್ತಿದ್ದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ವಿದ್ಯಾಸಂಸ್ಥೆಯು ಸಾಮಾಜಿಕ ಕಾಳಜಿಯುಳ್ಳ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಗಮನಾರ್ಹ ವಿಚಾರವಾಗಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರು ಹಾಗೂ ಸಮಾಜ ಸೇವಕ ಪೂಜಾ ಸಜೇಶ್ ಮಾತನಾಡಿ, ನಮ್ಮ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಒತ್ತನ್ನು ನೀಡಿದೆ. ಸಂಸ್ಥೆಯಲ್ಲಿ ಅನುಭವಾತ್ಮಕ ಕಲಿಕೆಗೆ ಹೆಚ್ಚು ಮಹತ್ವವನ್ನು ನೀಡಲಾಗಿದ್ದು ಇನ್ನು ಮುಂದೆಯೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ನೂತನವಾಗಿ ಆಯ್ಕೆಗೊಂಡ ವಿದ್ಯಾರ್ಥಿ ನಾಯಕರಿಗೆ ಅತಿಥಿಗಳು ಬ್ಯಾಡ್ಜ್ ನ್ನು ವಿತರಿಸಿದರು. ವಿದ್ಯಾರ್ಥಿನಿ ಆದ್ಯ ಭರತನಾಟ್ಯ ಪ್ರದರ್ಶಿಸಿದರು. ಶಿಕ್ಷಕಿ ಕೃತ ಪೊನ್ನಮ್ಮ ಸ್ವಾಗತಿಸಿ ನಿರೂಪಿಸಿ, ಬ್ಯೂಲಾ ಅತಿಥಿಗಳನ್ನು ಪರಿಚಯಿಸಿ, ವಿದ್ಯಾ ವಂದಿಸಿದರು ಕ್ಯಾಂಪಸ್ ನಿರ್ವಹಣೆಗಾರರಾದ ರವಿನ್ ರಿಚರ್ಡ್, ಶಿಕ್ಷಕರು, ಪೋಷಕರು, ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.