ಬೆಳ್ತಂಗಡಿ: ನಾವೂರು ಶ್ರೀ ಗೋಪಾಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ದೇವಸ್ಥಾನದಲ್ಲಿ ಕಳೆದ 10 ವರ್ಷಗಳಿಂದ ಧನುರ್ಮಾಸದಲ್ಲಿ ಭಕ್ತರಿಂದ ನಡೆಸಿಕೊಂಡು ಬರುತ್ತಿರುವ ಶ್ರೀ ವಿಷ್ಣುಸಹಸ್ರ ನಾಮ ಪಠಣದ ದಶಮಾನೋತ್ಸವ ಹಾಗು ಭೀಷ್ಮ ಏಕಾದಶಿ ಪ್ರಯುಕ್ತ ಜ. 29 ರಂದು ಸಂಜೆ ಶ್ರೀ ದೇವರ ಸನ್ನಿಧಿಯಲ್ಲಿ ತಾಲೂಕಿನ ಸಹಸ್ರಾರು ಭಕ್ತಾದಿಗಳಿಂದ ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಪಠಣ ನಡೆಯಿತು. ಡಾ| ಪ್ರದೀಪ್ ಆಟಿಕುಕ್ಕೆ ಅವರ ನಿರ್ದೇಶನ ಹಾಗು ಮಾರ್ಗದರ್ಶನದಲ್ಲಿ ದೇವಸ್ಥಾನದ ಹೊರಾಂಗಣದ ನಾಲ್ಕೂ ಸುತ್ತಿನಲ್ಲಿ ಮಕ್ಕಳು, ಹಿರಿಯರು , ಮಹಿಳೆಯರು ಸೇರಿದಂತೆ ತಾಲೂಕಿನ ಸಮಸ್ತ ಭಕ್ತಾದಿಗಳು ಏಕ ಕಂಠದಲ್ಲಿ ಐದು ಬಾರಿ ಶ್ರೀ ವಿಷ್ಣುಸಹಸ್ರ ನಾಮ ವನ್ನು ಭಕ್ತಿ, ಶ್ರದ್ಧೆಯಿಂದ ಪಠಿಸಿ ಶ್ರೀ ದೇವರಿಗೆ ಸಮರ್ಪಿಸಿದರು.
ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ಅಧ್ಯಕ್ಷ ರಾಜಪ್ರಸಾದ್ ಪೋಲ್ನಾಯ, ಕಾರ್ಯದರ್ಶಿ ಮುರಳಿಕೃಷ್ಣ ಆಚಾರ್, ಉಜಿರೆ ವಲಯಾಧ್ಯಕ್ಷ ಗಿರಿರಾಜ ಬಾರಿತ್ತಾಯ, ವಲಯ ಮಹಿಳಾ ಘಟಕ ಅಧ್ಯಕ್ಷೆ ಜ್ಯೋತಿ ಗುರುರಾಜ್, ವಲಯದ ಪುರುಷ ಹಾಗು ಮಹಿಳಾ ಸದಸ್ಯೆಯರು, ಗ್ರಾಮಸ್ಥರು ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಪಠಣ ದಲ್ಲಿ ಭಾಗಿಗಳಾಗಿದ್ದರು. ಅಂತ್ಯದಲ್ಲಿ ಕೃಷ್ಣಾರ್ಪಣ ನಡೆಸಿ ಪ್ರಸಾದ ವಿತರಿಸಲಾಯಿತು.
ಜ 23ರಿಂದ 30 ರವರೆಗೆ ಪ್ರತಿದಿನ ಡಾ. ವೀಣಾ ಬನ್ನಂಜೆ ಅವರಿಂದ " ಶ್ರೀ ಕೃಷ್ಣ ಕಥಾಮೃತ " ಧಾರ್ಮಿಕ ಪ್ರವಚನ ಮಾಲಿಕೆ ನಡೆಯಿತು. ಕಳೆದ 10ವರ್ಷಗಳಿಂದ ಸತತವಾಗಿ ಗ್ರಾಮದ ವಿದ್ಯಾರ್ಥಿಗಳು ಹಾಗು ಸಾರ್ವಜನಿಕರಿಗೆ ವಿಷ್ಣುಸಹಸ್ರನಾಮ ಹಾಗು ಭಗವದ್ಗೀತೆ ಪಠಣ ಹಾಗು ತರಬೇತಿ ನೀಡಿದ ಹಾಗು ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ ಡಾ. ಪ್ರದೀಪ್ ನಾವೂರು ಹಾಗು ಪತ್ನಿ ಡಾ. ಕವಿತಾ ನಾವೂರು ಅವರಿಗೆ ಜ. 31 ರಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣನ ಪ್ರತಿಮೆಯನ್ನು ಡಾ. ವೀಣಾ ಬನ್ನಂಜೆ ಅವರ ಮೂಲಕ ನೀಡಿ ಸನ್ಮಾನಿಸಲಾಯಿತು