ಎನ್.ಮುಬಾರಕ್ ಅಭಿಮತ। ಪುರಸಭೆ ಕಚೇರಿಯಲ್ಲಿ ನಡೆದ ವಿಶ್ವಕರ್ಮ ಜಯಂತಿ
ವಿಶ್ವಕರ್ಮರು ಸೃಜನಶೀಲತೆ, ಕೌಶಲ, ಪರಿಶ್ರಮ ಹಾಗೂ ನಿರ್ಮಾಣ ಕಲೆ ಪ್ರತೀಕವಾಗಿದ್ದಾರೆ. ವಿಶ್ವಕರ್ಮ ಜಯಂತಿ ಕಾಯಕ, ಕೌಶಲ ಹಾಗೂ ಸೃಜನಶೀಲತೆ ಗೌರವಿಸುವ ಮಹತ್ವದ ದಿನ. ಯುವಜನತೆ ವಿಶ್ವಕರ್ಮರ ಕಾಯಕ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಪುರಸಭೆ ಆಶ್ರಯ ಸಮಿತಿ ಸದಸ್ಯ ಎನ್. ಮುಬಾರಕ್ ಹೇಳಿದರು.
ಪುರಸಭೆ ಕಚೇರಿಯಲ್ಲಿ ಶುಕ್ರವಾರ ಪುರಸಭೆ ಮತ್ತು ವಿಶ್ವಕರ್ಮ ಸಮುದಾಯದಿಂದ ನಡೆದ ವಿಶ್ವಕರ್ಮ ಜಯಂತಿಯಲ್ಲಿ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ವಿಶ್ವಕರ್ಮರು ಕಲೆ, ಶಿಲ್ಪ ಹಾಗೂ ನಿರ್ಮಾಣ ಕೌಶಲಕ್ಕೆ ಹಾಕಿಕೊಟ್ಟ ಅಡಿಪಾಯ ಇಂದಿಗೂ ಪ್ರಸ್ತುತ.. ಅವರ ಕಾಯಕ ತತ್ವ, ಪರಿಶ್ರಮ, ಸೃಜನಶೀಲತೆ ಹಾಗೂ ವೃತ್ತಿಪರ ನೈಪುಣ್ಯ ಮೈಗೂಡಿಸಿಕೊಂಡು ಜೀವನದಲ್ಲಿ ಅಭ್ಯುದಯ ಸಾಧಿಸಬೇಕು. ಕೌಶಲಕ್ಕೆ ಗೌರವ ನೀಡುವ ಮೂಲಕ ಯುವಜನತೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು.ವಿಶ್ವಕರ್ಮ ಜಯಂತಿ ಆಚರಣೆ ಆ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಸಮಾಜದ ಎಲ್ಲರೂ ಭಾಗವಹಿಸಿ ಆಚರಣೆ ಮಾಡಿದಾಗ ಎಲ್ಲಾ ಸಮುದಾಯಗಳ ಬಾಂಧವ್ಯ ಗಟ್ಟಿಯಾಗುತ್ತದೆ ಎಂದು ಹೇಳಿದರು.
ಸಮಾಜದ ಮೂಲ ಕಸುಬುಗಳನ್ನು ಉಳಿಸಿಕೊಂಡು ಹೋಗುವ ಕೆಲಸ ಇಂದು ಆಗಬೇಕಿದೆ. ಹಿಂದಿನ ಕಾಲದ ವಸ್ತುಗಳ ಕಲಾತ್ಮಕತೆ ಉಳಿಸಿಕೊಂಡು ಹೋಗುವ ಜತೆಗೆ, ತಂತ್ರಜ್ಞಾನ ಬಳಕೆಯ ಸಂದರ್ಭದಲ್ಲೂ ಹಿಂದಿನ ವಿಶಿಷ್ಠತೆ ಗಳನ್ನು ಉಳಿಸಬೇಕು ಎಂದು ಹೇಳಿದರು.
ಪುರಸಭೆ ಆಶ್ರಯ ಕಮಿಟಿ ಸದಸ್ಯ ಬಿ.ಟಿ.ಚಂದ್ರಶೇಖರ್, ಮುಖ್ಯಾಧಿಕಾರಿ ಮಂಜುನಾಥ್, ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ವಿಶ್ವಕರ್ಮ ಮಹಿಳಾ ಸಮಾಜದ ಅಧ್ಯಕ್ಷೆ ಲತಾವಿಶೇಷ್, ಸೋಮಶೇಖರಾಚಾರ್, ಏಕುಮಾರ್, ಎಂ.ಪಿ. ನಾಗರಾಜ್, ಜಯಕುಮಾರ್, ಸೇರಿದಂತೆ ಪುರಸಭಾ ಸಿಬ್ಬಂದಿ ಇದ್ದರು.
ಬೀರೂರಿನ ಪುರಸಭೆಯಲ್ಲಿ ನಡೆದ ವಿಶ್ವಕರ್ಮ ಜಯಂತಿಯಲ್ಲಿ ಸಮಾಜದ ಅಧ್ಯಕ್ಷ ವಿಶ್ವೇಶ್ವರಾಚಾರ್ , ಪುರಸಭೆ ಮುಖ್ಯಾಧಿ ಕಾರಿ ಮಂಜುನಾಥ್, ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ಮುಬಾರಕ್ ಬಿ.ಟಿ.ಚಂದ್ರಶೇಖರ್ ಮತ್ತಿತರಿದ್ದರು.