ವಸತಿ ನಿಲಯಗಳಿಗೆ ಮಾನವ ಹಕ್ಕುಗಳ ಆಯೋಗದ ಸದಸ್ಯರ ಭೇಟಿ

KannadaprabhaNewsNetwork |  
Published : Jul 17, 2024, 12:49 AM IST
ಮುಂಡರಗಿ ಬಿಸಿಎಂ ವಸತಿ ನಿಲಯದಲ್ಲಿ ಮಕ್ಕಳಿಗಾಗಿ ತಯಾರಿಸಿಟ್ಟಿದ್ದ ಅಡುಗೆಯನ್ನು ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ ವಂಟಿಗೋಡಿ ರುಚಿನೋಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ಗದಗ ರಸ್ತೆಯಲ್ಲಿ ಇರುವ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿ ವಸತಿ ಶಾಲೆಯ 10ನೇ ತರಗತಿ ಪಾಠ ನಡೆಯುತ್ತಿದ್ದ ಕ್ಲಾಸಿನ ಮಕ್ಕಳೊಡನೆ ಸೌಲಭ್ಯಗಳ ಮತ್ತು ಸಮಸ್ಯೆಗಳ ಕುರಿತು ಚರ್ಚಿಸಿದರು

ಮುಂಡರಗಿ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸದಸ್ಯರು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಕೆ. ವಂಟಿಗೋಡಿ ಗದಗ ಜಿಲ್ಲೆ ಪ್ರವಾಸದ ನಿಮಿತ್ತ ಆಗಮಿಸಿದ ಸಂದರ್ಭದಲ್ಲಿ ಮುಂಡರಗಿ ತಾಲೂಕಿಗೆ ಭೇಟಿ ನೀಡಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

ಹೆಸರೂರ ರಸ್ತೆಯ ಬೆಟಗೇರಿಯವರ ಪ್ಲಾಟ್ ನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕೀಯರ ವಸತಿ ನಿಲಯಕ್ಕೆ ಭೇಟಿ ನೀಡಿ ವಸತಿ ನಿಲಯದ ವಿದ್ಯಾರ್ಥಿನಿಯರೊಡನೆ ಮಾತನಾಡಿದರು. ಸದರಿ ಕಟ್ಟಡಕ್ಕೆ ರಕ್ಷಣಾ ಗೋಡೆ (ಕಂಪೌಂಡ್) ಅತೀ ಅವಶ್ಯ ಹಾಗೂ ನಿಲಯಕ್ಕೆ ತ್ವರಿತವಾಗಿ ಸಿಸಿ ಕ್ಯಾಮೇರಾ ಅಳವಡಿಸಲು ವಾರ್ಡನ್ ಗೆ ಸೂಚಿಸಿದರು. ನಂತರ ಹೆಸರೂರು ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕೀಯರ ವಸತಿ ನಿಲಯಕ್ಕೆ ಭೇಟಿ ನೀಡಿ ವಸತಿ ನಿಲಯದ ವಿದ್ಯಾರ್ಥಿನಿಯರ ವಾಸದ ಕೊಠಡಿ, ಅಡುಗೆ ಮನೆ ಪರಿಶೀಲಿಸಿ ವಿದ್ಯಾರ್ಥಿನಿಯರ ವಾಸದ ಕೊಠಡಿಯಲ್ಲಿರುವ ಬಾಕ್ಸ್ ಸೆಲ್ಪ್ ಗಳಿಗೆ ವಾಲ್ಡ್ರೊಬ್ ಮಾಡಿಸಿ ಬೀಗ ಹಾಕುವಂತೆ ಮಾಡಿ ಕೊಡಲು ಹಾಗೂ ವಸತಿ ನಿಲಯದ ಕಿಟಕಿಗಳಿಗೆ ಮೆಸ್ ಅಳವಡಿಸಲು ಸೂಚಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕೀಯರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೌಲಭ್ಯಗಳ ಕುರಿತು ವಿಚಾರಿಸಿದರು.

ವಿದ್ಯಾರ್ಥಿಗಳಿಗೆ ಶುಚಿರುಚಿ ಆಹಾರ ಒದಗಿಸಲು ಸೂಚಿಸಿದರು. ನಂತರ ಗದಗ ರಸ್ತೆಯಲ್ಲಿ ಇರುವ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿ ವಸತಿ ಶಾಲೆಯ 10ನೇ ತರಗತಿ ಪಾಠ ನಡೆಯುತ್ತಿದ್ದ ಕ್ಲಾಸಿನ ಮಕ್ಕಳೊಡನೆ ಸೌಲಭ್ಯಗಳ ಮತ್ತು ಸಮಸ್ಯೆಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ 10ನೇ ತರಗತಿಯ ಮಕ್ಕಳು ವಸತಿ ಶಾಲೆ ಮತ್ತು ವಸತಿ ನಿಲಯದ ಕಟ್ಟಡವಿಲ್ಲದೆ ನಮಗೆ ಸಮಸ್ಯೆಯಾಗಿದೆ. ಶಾಲೆ ಪ್ರಾರಂಭವಾಗಿ ಅನೇಕ ವರ್ಷಗಳಾದರು ನಮಗೆ ಸರಿಯಾದ ಕಟ್ಟಡದ ವ್ಯವಸ್ಥೆಯಾಗಿಲ್ಲ ಎಂದು ದೂರು ನೀಡಿದರು. ಊಟ, ಉಪಹಾರದ ಬಗ್ಗೆ ಮಕ್ಕಳಿಂದ ದೂರು ಬಂದ ಹಿನ್ನೆಲೆಯಲ್ಲಿ ಇಲಾಖೆಯ ನಿಯಮದ ಪ್ರಕಾರ ಊಟ, ಉಪಹಾರದ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ತಾಲೂಕಿನ ಎಲ್ಲ ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ಮಕ್ಕಳಿಗೆ ದೊರೆಯಬೇಕಾದ ಎಲ್ಲ ಸೌಲಭ್ಯ ಸರಿಯಾಗಿ ಸಿಗುವಂತೆ ನೋಡಿಕೊಳ್ಳಬೇಕು. ತಾವು ಮತ್ತೆ ಬಂದು ಪರಿಶೀಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಧನಂಜಯ ಮಾಲಗಿತ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಯೋಗಿ ಕಲ್ಮಠ, ಪಿಎಸ್ಐ ಸುಮಾ ಗೊರೆಬಾಳ, ವಸತಿ ನಿಲಯಗಳ ವಾರ್ಡನ್ ಗಳು ಹಾಗೂ ಅಂಬೇಡ್ಕರ್ ವಸತಿ ಶಾಲೆಯ ಪ್ರಾಚಾರ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ