ಕೊಪ್ಪಳ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಕೆ.ಟಿ. ತಿಪ್ಪೇಸ್ವಾಮಿ ಹಾಗೂ ಶೇಖರಗೌಡ ರಾಮತ್ನಾಳ ಅವರು ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳು, ಗ್ರಾಪಂ, ಪೊಲೀಸ್ ಠಾಣೆಗೆ ಭೇಟಿ ನೀಡಿ, ಪರೀವಿಕ್ಷಣೆ ಮಾಡಿದರು.
ಕೆಲವು ಸ್ನಾನಗೃಹ ಮತ್ತು ಶೌಚಾಲಯಗಳಿಗೆ ಬಾಗಿಲು ಇಲ್ಲದಿರುವುದನ್ನು ಗಮನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಶೀಘ್ರವೇ ಮಕ್ಕಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅದೇ ರೀತಿ ಪೊಲೀಸ್ ಅಧಿಕಾರಿಗಳಿಗೆ, ನಿಮ್ಮ ವ್ಯಾಪ್ತಿಯಲ್ಲಿನ ವಸತಿ ಶಾಲೆಗಳಿಗೆ ಬೀಟ್ ಹಾಕಿ ನಿಯಮಿತವಾಗಿ ಪರಿಶೀಲನೆ ಮಾಡಲು ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸುವುದರೊಂದಿಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಗ್ಗೆ ತಿಳಿಸಬೇಕು ಎಂದರು.
ಬಳಿಕ ಕಲ್ಲೂರು ಗ್ರಾಪಂಗೆ ಭೇಟಿ ನೀಡಿ, ದಾಖಲಾತಿಗಳನ್ನು ಪರಿಶೀಲಿಸಿ, ಗ್ರಾಪಂನಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸಭೆಗಳನ್ನು, ಮಕ್ಕಳ ಹಕ್ಕುಗಳ ಗ್ರಾಮಸಭೆಗಳನ್ನು ಆಯೋಜಿಸಿದ್ದು ಹಾಗೂ ಕೈಗೊಂಡ ಕ್ರಮದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಗ್ರಾಪಂ ಶಿಕ್ಷಣ ಕಾರ್ಯಪಡೆಯನ್ನು ರಚಿಸಿ, ಸಕ್ರಿಯವಾಗಿ ಕಾರ್ಯನಿರ್ವಹಿಸುಹಿಸುವಂತೆ ಪಿಡಿಒಗೆ ಸೂಚನೆ ನೀಡಿದರು.ಕುಕನೂರು ಪೊಲೀಸ್ ಠಾಣಿಗೆ ಭೇಟಿ ನೀಡಿ ಮಕ್ಕಳ ಪ್ರಕರಣಗಳ ವಹಿಯನ್ನು ಪರಿಶೀಲಿಸಿ, ಠಾಣೆಯಲ್ಲಿ ಮಕ್ಕಳ ಪರವಾದ ಜಾಗೃತಿ ಗೋಡೆ ಬರಹಗಳನ್ನು ಬರೆಯಿಸಿದ್ದು ಪರಿಶೀಲಿಸಿ ಹರ್ಷ ವ್ಯಕ್ತಪಡಿಸಿದರು. ಪೊಲೀಸ್ ಅಧಿಕಾರಿಗಳಿಗೆ ತೆರೆದ ಮನೆ ಕಾರ್ಯಕ್ರಮವನ್ನು ನಿಯಮಿತವಾಗಿ ಆಯೋಜಿಸಿ, ಮಕ್ಕಳಿಗೆ ಇಲಾಖೆ ಬಗ್ಗೆ ಇರುವ ಭಯ ನಿವಾರಿಸುವುದರೊಂದಿಗೆ ಮಕ್ಕಳ ಪರವಾದ ಕಾನೂನುಗಳ ಬಗ್ಗೆ ಮತ್ತು ತುರ್ತು ಸಹಾಯವಾಣಿ 1098/112ರ ಬಗ್ಗೆ ಜಾಗೃತಿ ಮೂಡಿಸುವಂತೆ ತಿಳಿಸಿದರು.
ಕೊಪ್ಪಳ ತಾಲೂಕಿನ ಹಲಗೇರಿಯ ಸರ್ಕಾರಿ ಶಾಲೆ, ಖಾಸಗಿ ಶಾಲೆಗೆ ಹಾಗೂ ಕೊಪ್ಪಳ ನಗರದ ಸ್ಕ್ಯಾನಿಂಗ್ ಸೆಂಟರ್, ಕ್ರೀಡಾ ವಸತಿ ಶಾಲೆ ಭೇಟಿ ನೀಡಿದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಯಲಬುರ್ಗಾ ತಹಸೀಲ್ದಾರರು ಉಪಸ್ಥಿತರಿದ್ದರು.