ಶಿವಮೊಗ್ಗ: ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ, ಪೇಪರ್ ಮಿಲ್, ಅದಿರು, ವುಡ್ಚಾರ್ ಕೋಲ್, ಶ್ರೀಗಂಧದ ಎಣ್ಣೆ, ಸಾಬೂನು ಕಾರ್ಖಾನೆ ಹೀಗೆ ಹತ್ತು ಹಲವಾರು ಉದ್ದಿಮೆಗಳನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಸ್ಥಾಪಿಸಿ ಜಿಲ್ಲೆಯ ಹೆಸರು ಜಾಗತಿಕ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿದ ಹೆಗ್ಗಳಿಕೆ ಸರ್ ಎಂ.ವಿಶ್ವೇಶ್ವರಯ್ಯ ಅವರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಉದ್ಯಮಿ ಎಸ್.ರುದ್ರೇಗೌಡ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಎಂಜಿನಿಯರ್ಸ್ ದಿನ ಮತ್ತು ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಪಿತಾಮಹ ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹಿಂದಿನವರ ಕೊಡುಗೆಗಳನ್ನು ಸ್ಮರಿಸಿ ಮುಂದಿನ ಸವಾಲುಗಳನ್ನು ಎದುರಿಸಬೇಕು. ಸರ್ ಎಂ.ವಿ. ಕೊಡುಗೆಗಳ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆಯೇ. ಅವರು ಶಿವಮೊಗ್ಗ ಜಿಲ್ಲೆಗೆ ನೀಡಿದ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಜಾಗತಿಕ ಮನ್ನಣೆ ಗಳಿಸಿದ್ದ ವಿಐಎಸ್ಎಲ್ ಮತ್ತು ಎಂಪಿಎಂ ಉದ್ದಿಮೆಗಳು ಮುಚ್ಚಲು ಐಎಎಸ್ ಅಧಿಕಾರಿಗಳೇ ಕಾರಣ ಎಂದು ವಿಷಾದಿಸಿದ ಅವರು, ಐಎಎಸ್ ಅಧಿಕಾರಿಗಳೆಂದರೆ ಸರ್ವಜ್ಞ ಎಂದು ನಾವು ಭಾವಿಸಿದ್ದೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಟಿ.ವಿ.ನಾರಾಯಣ ಶಾಸ್ತ್ರೀ ದಕ್ಷ ಹಾಗೂ ಗಂಭೀರ ವ್ಯಕ್ತಿತ್ವದವರಾಗಿದ್ದರು. ಹೃದಯ ವೈಶಾಲ್ಯತೆಯ ಮೇರು ವ್ಯಕ್ತಿಯಾಗಿದ್ದರು. ಯುವ ಉದ್ದಿಮೆದಾರರಿಗೆ ಬೆನ್ನು ತಟ್ಟಿ ಹಲವಾರು ಉದ್ದಿಮೆಗಳ ಸ್ಥಾಪನೆಗೆ ಕಾರಣೀಕರ್ತರಾಗಿದ್ದರು. ಅವರು ಆರಂಭಿಸಿದ ಉದ್ದಿಮೆಗಳು ದೇಶಾದ್ಯಂತ ಗುಣ ಮಟ್ಟಕ್ಕೆ ಹೆಸರುವಾಸಿಯಾಗಿವೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮೆಸಸ್ 9 ಮೆಕ್ ವೈರ್ಸ್, ಶ್ರೀ ದುರ್ಗಾ ಅಲಾಯ್ಸ್, ಪ್ರಕಾಶ್ ಸೈನ್ ಸಿಸ್ಟಮ್ಸ್ ಗಳಿಗೆ 2025 ನೇ ಸಾಲಿನ ಕೈಗಾರಿಕಾ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.ಭಾರತೀಯ ಸಣ್ಣ ಕೈಗಾರಿಕೆಗಳ ಮಹಾಸಂಘದ ಉಪಾಧ್ಯಕ್ಷ ಎಂ.ರಾಜು ಅವರಿಗೆ ವಿಶೇಷ ಗೌರವಾರ್ಪಣೆ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಿ.ವಿಜಯಕುಮಾರ್, ಎ.ಎಂ.ಸುರೇಶ್, ಕೆ.ಎಸ್.ಕುಮಾರ್, ಆರ್.ಮನೋಹರ್ ಮೊದಲಾದ ಪದಾಧಿಕಾರಿಗಳಿದ್ದರು.