ವಿಟ್ಲ ಸಮೀಪದ ಕಂಬಳಬೆಟ್ಟು ನೂಜಿ ಎಂಬಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸಿಡಿದು ಭಾರಿ ಸ್ಫೋಟ ಉಂಟಾದ ಘಟನೆ ನಡೆದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.
ಬಂಟ್ವಾಳ : ವಿಟ್ಲ ಸಮೀಪದ ಕಂಬಳಬೆಟ್ಟು ನೂಜಿ ಎಂಬಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸಿಡಿದು ಭಾರಿ ಸ್ಫೋಟ ಉಂಟಾದ ಘಟನೆ ನಡೆದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.ಪರಿಸರದಲ್ಲಿ ಬಾನೆತ್ತರದಲ್ಲಿ ಹೊಗೆ ಆವರಿಸಿದೆ. ಕಂಬಳಬೆಟ್ಟು ನಿವಾಸಿ ಗಫೂರ್ ಎಂಬವರು ದೇವಸ್ಥಾನದ ಜಾತ್ರೋತ್ಸವಕ್ಕೆ ಪಟಾಕಿ ತಯಾರಿಸಿ ಶೇಖರಿಸಿಟ್ಟಿದ್ದರು.
ಮಧ್ಯಾಹ್ನ ವೇಳೆ ಬಿಸಿಲಿಗೆ ಇದ್ದಕ್ಕಿಂದಂತೆ ಪಟಾಕಿ ಸ್ಫೋಟಗೊಂಡಿದೆ. ಸ್ಥಳದಲ್ಲಿ ಕಾರ್ಮಿಕರು ಹಾಗೂ ಜನರು ಇಲ್ಲದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. 2017ರಲ್ಲಿ ಗಫೂರ್ ಎಂಬವರ ಮನೆ ಸಮೀಪ ಪಟಾಕಿ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಇನ್ನೂ ಪ್ರಕರಣ ಇತ್ಯರ್ಥಗೊಂಡಿಲ್ಲ. ಇದೀಗ ಅದರ ಸಮೀಪವೇ ಮತ್ತೊಂದು ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ರವಿ , ವಿಟ್ಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ , ವಿಟ್ಲ ಎಸ್ಐ ರಾಮಕೃಷ್ಣ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಲ್ಲಿ ಪಟಾಕಿ ತಯಾರಿಸಲು ಯಾವುದೇ ಅನುಮತಿ ಪಡೆದಿಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆಬಂದಿದೆ.
ಕಳೆದ ವರ್ಷ ವಿಟ್ಲ ಮೂಡ್ನೂರು ಗ್ರಾಮದ ಮಾಡತ್ತಡ್ಕ ಪರಿಸರದ ಕೋರೆಯಲ್ಲಿ ಭಾರಿ ಪ್ರಮಾಣದಲ್ಲಿ ಸ್ಫೋಟಗೊಂಡ ಘಟನೆ ನಡೆದಿತ್ತು. ಈ ಘಟನೆಯಿಂದ ಆಸುಪಾಸಿನ ಮನೆಗಳಿಗೆ, ಮರ ಗಿಡಗಳಿಗೆ ಹಾನಿಯಾಗಿತ್ತು. ಅಲ್ಲದೆ ಕಳೆದ ಸುಮಾರು ವರ್ಷಗಳ ಹಿಂದೆ ನೂಜಿ ಎಂಬಲ್ಲಿ ಸಿಡಿಮದ್ದು ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.