ರಷ್ಯಾದ ಬ್ರಿಕ್ಸ್ ಪರಿಸರ ಸಮ್ಮೇಳನದಲ್ಲಿ ವಿವೇಕ್ ಆಳ್ವ ಉಪನ್ಯಾಸ

KannadaprabhaNewsNetwork |  
Published : Sep 13, 2026, 03:00 AM IST
ಗಣರಾಜ್ಯ | Kannada Prabha

ಸಾರಾಂಶ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ರಷ್ಯಾದ ಕರೇಲಿಯಾ ಗಣರಾಜ್ಯದ ಪೆಟ್ರೋಜಾವೊಡಕ್ಸ್ಕ್‌ದಲ್ಲಿ ಸೆ. 15ರಿಂದ 17 ನಡೆಯಲಿರುವ ‘ಬ್ರಿಕ್ಸ್ ರಾಷ್ಟ್ರಗಳ ಪ್ರಾದೇಶಿಕ ಸಹಕಾರದ ಮೂಲಕ ಪರಿಸರ ಮತ್ತು ಪ್ರಕೃತಿ ನಿರ್ವಹಣೆ’ಯ ಕುರಿತು ನಡೆಯಲಿರುವ ಮೂರನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ರಷ್ಯಾದ ಕರೇಲಿಯಾ ಗಣರಾಜ್ಯದ ಪೆಟ್ರೋಜಾವೊಡಕ್ಸ್ಕ್‌ದಲ್ಲಿ ಸೆ. 15ರಿಂದ 17 ನಡೆಯಲಿರುವ ‘ಬ್ರಿಕ್ಸ್ ರಾಷ್ಟ್ರಗಳ ಪ್ರಾದೇಶಿಕ ಸಹಕಾರದ ಮೂಲಕ ಪರಿಸರ ಮತ್ತು ಪ್ರಕೃತಿ ನಿರ್ವಹಣೆ’ಯ ಕುರಿತು ನಡೆಯಲಿರುವ ಮೂರನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಲಿದ್ದಾರೆ.

‘ಪಶ್ಚಿಮಘಟ್ಟಗಳ ಸಂರಕ್ಷಣೆ: ಜಾಗೃತಿಯಿಂದ ಸಮುದಾಯದ ಕಾರ್ಯದತ್ತ’ ಕುರಿತ ವಿಶೇಷ ಅಧಿವೇಶನದಲ್ಲಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಸಮುದಾಯಗಳು ಹಾಗೂ ಯುವಜನರ ಪಾತ್ರವನ್ನು ವಿವರಿಸಲಿದ್ದಾರೆ. ವಿಶೇಷವಾಗಿ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಆಳ್ವಾಸ್ ಶೈಕ್ಷಣಿಕ ಪ್ರತಿಷ್ಠಾನ ಕೈಗೊಂಡಿರುವ ವಿವಿಧ ಪರಿಸರ ಸಂರಕ್ಷಣಾ ಚಟುವಟಿಕೆಗಳನ್ನು ಅವರು ಸಮ್ಮೇಳನದಲ್ಲಿ ಪರಿಚಯಿಸಲಿದ್ದು, ಪರಿಸರ ಸಂರಕ್ಷಣೆ, ಕೇವಲ ಜಾಗೃತಿಗೆ ಮಾತ್ರ ಸೀಮಿತವಾಗದೆ, ಸಮುದಾಯದ ನೇತೃತ್ವದಲ್ಲಿ ಸಂರಕ್ಷಣಾ ಕಾರ್ಯಗಳು ನಡೆಯಬೇಕಾದ ಅಗತ್ಯವನ್ನು ಒತ್ತಿಹೇಳಲಿದ್ದಾರೆ.

ರಷ್ಯನ್ ವಿಜ್ಞಾನ ಅಕಾಡೆಮಿಯ ಕರೇಲಿಯನ್ ಸಂಶೋಧನಾ ಕೇಂದ್ರವು ರಷ್ಯನ್ ಬ್ರಿಕ್ಸ್ ಸಂಶೋಧನಾ ರಾಷ್ಟ್ರೀಯ ಸಮಿತಿಯ ಸಹಯೋಗದಲ್ಲಿ ಆಯೋಜಿಸಿರುವ ಈ ಸಮ್ಮೇಳನದಲ್ಲಿ ಹವಾಮಾನ ಬದಲಾವಣೆ, ಜೀವವೈವಿಧ್ಯ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಹಾಗೂ ಪ್ರಾದೇಶಿಕ ಪರಿಸರ ಸಹಕಾರದ ಕುರಿತು ಸಂಶೋಧಕರು ಮತ್ತು ತಜ್ಞರು ಚರ್ಚಿಸಲಿದ್ದಾರೆ.

ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಹಾಗೂ ಆಳ್ವಾಸ್ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ವಿನಯ್ ಶಿವಮೂರ್ತಿಯವರು ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ. ‘ಮಧ್ಯ ಪಶ್ಚಿಮಘಟ್ಟಗಳ ಜಲಪರಿಸರಗಳಲ್ಲಿ ಪರಿಸರ ಹರಿವಿನ ಮೌಲ್ಯಮಾಪನದ ಮೂಲಕ ನದೀ ಪರಿಸರ ವ್ಯವಸ್ಥೆಗಳ ಸಂರಕ್ಷಣೆ’ ಎಂಬ ವಿಷಯದ ಕುರಿತು ಮಾಡಲಿದ್ದಾರೆ.

ಸಮ್ಮೇಳನದಲ್ಲಿ ಕರ್ನಾಟಕದ ಹಲವು ಶಿಕ್ಷಣ ತಜ್ಞರು ಹಾಗೂ ಸಂಶೋಧಕರು ಭಾಗವಹಿಸಲಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಟಿ.ವಿ. ರಾಮಚಂದ್ರ, ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯ ಡಾ. ಶ್ವೇತಾ ರಂಗಸ್ವಾಮಿ ಹಾಸನ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ನಾಗರಾಜ್ ಎಸ್. ಪಾಟೀಲ್, ಚಾಣಕ್ಯ ವಿಶ್ವವಿದ್ಯಾಲಯದ ಡಾ. ಭರತ್ ಸೆಟ್ಟೂರು, ಹಳಿಯಾಳದ ವಿಡಿಐಟಿಯ ಡಾ. ವೆಂಕಟರಾಮಣ ಹೆಗ್ಡೆ ಹಾಗೂ ಬೆಳಗಾವಿಯ ಅಂಗಡಿ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆಯ ಡಾ. ಆನಂದ್ ದೇಶಪಾಂಡೆ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಾದೇಶಿಕ ಪರಿಸರ ಸಂರಕ್ಷಣೆಯ ಅನುಭವಗಳ ವಿನಿಮಯಕ್ಕೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗೆ ಸಹಯೋಗದ ಮಾರ್ಗಗಳನ್ನು ಬಲಪಡಿಸಲು ಸಮ್ಮೇಳನವು ಮಹತ್ವದ ವೇದಿಕೆಯಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜರ್ಮನಿಯ ಗಣೇಶನಿಗೆ ಪುತ್ತೂರಿನಲ್ಲಿ ತಯಾರಾದ ರಜತ ಕಿರೀಟ
ವಿತರಕರು ಪತ್ರಿಕೆ ಮತ್ತು ಸಮಾಜದ ನಡುವಿನ ಕೊಂಡಿ: ಜಿ.ಚಿದ್ವಿಲಾಸ್