ಹರಪನಹಳ್ಳಿ: ಹಮಾಲರು ತಮ್ಮ ಬೆವರು, ಶಕ್ತಿಯನ್ನು ವಿನಿಯೋಗಿಸಿ ಶ್ರಮ ವಹಿಸಿ ದುಡಿಯುವವರು. ಹಮಾಲರ ಪರ ಶ್ರಮಿಸುವವರಿಗೆ ಮತ ಹಾಕಿ ಎಂದು ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಹೇಳಿದರು.
ಪಟ್ಟಣದ ಕೋಟೆ ಕಾಳಮ್ಮ ದೇವಸ್ಥಾನದ ಆವರಣದಲ್ಲಿ ಭಾನುವಾರ ಹರಪನಹಳ್ಳಿ ತಾಲೂಕು ಲಾರಿ ಹಮಾಲರ ಸಂಘ (ಸಿಐಟಿಯು) ಸದಸ್ಯರಿಗೆ ಸದಸ್ಯತ್ವ ಕಾರ್ಡ್ ವಿತರಣೆ ಹಾಗೂ ರಾಜಕೀಯ ಜಾಗೃತಿ ಕಾರ್ಯಕ್ರಮವನ್ನು ಅಕ್ಕಿ ಮೂಟೆ ಹೊರಿಸುವ ಮೂಲಕ ಉದ್ಟಾಟಿಸಿ ಮಾತನಾಡಿದರು.ದುಡಿಯುವ ವರ್ಗಕ್ಕೆ ಸರ್ಕಾರಗಳು, ಅನುದಾನ ಮೀಸಲೀಡಬೇಕು. ದುಡಿಯುವ ಜನರಿಗೆ ಆರೋಗ್ಯ ವಿಮೆ ಅಗತ್ಯವಾಗಿದೆ ಎಂದ ಅವರು, ಹಮಾಲರು ಕೂಡ ಆರ್ಥಿಕ ಸಬಲರಾಗಲು ಮುಂದೆ ಬರಬೇಕು. ತಮ್ಮ ಮಕ್ಕಳಿಗೆ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣವನ್ನು ಕೊಡಿಸುವ ಮುಖಾಂತರ ಉತ್ತಮ ಭವಿಷ್ಯ ರೂಪಿಸಬೇಕು ಎಂದರು.
ಕಾಂಗ್ರೆಸ್ ಪಕ್ಷ ಬಡವರ, ಕಾರ್ಮಿಕರ ಪರವಾಗಿದೆ. ಶಾಸಕರು ಸಹ ಜನಪರ ಕೆಲಸ ಮಾಡುತ್ತಿದ್ದಾರೆ. ನಾವು ಸಹ ಪುರಸಭೆಯಿಂದ ಜನರಿಗೆ ಅನುಕೂಲವಾಗುವಂತಹ ಕೆಲಸ ಮಾಡುತ್ತಿದ್ದು, ತಮ್ಮ ಸಂಘಟನೆಗೆ ಸಹಕಾರ ನೀಡುವುದಾಗಿ ಹೇಳಿದರು.ರಾಜ್ಯ ಸಿಐಟಿಯು ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿ, ಹಮಾಲರಿಗೆ ಅವರದೇ ಆದ ಸಮಸ್ಯೆಗಳಿವೆ. ದೈಹಿಕ ಅನಾರೋಗ್ಯ ಉಂಟಾದರೆ ಅವರಿಗೆ ಯಾರ ನೆರವು ಸಿಗುತ್ತಿಲ್ಲ. ಆರೋಗ್ಯ ವಿಮೆ ನೀಡಬೇಕು ಎನ್ನುವುದು ಸಿಐಟಿಯು ನಿಲುವು ಆಗಿದೆ. ಕನಿಷ್ಠ ವೇತನವನ್ನು ಸರ್ಕಾರವೇ ನಿಗದಿ ಮಾಡಿದೆ. ಎಲ್ಲ ರೀತಿಯ ಬೆಲೆ ಏರಿಕೆಯಾಗಿದೆ. ವೈಜ್ಞಾನಿಕವಾಗಿ ಇಂದಿನ ಮಾರುಕಟ್ಟೆಗೆ ಅನುಗುಣವಾಗಿ ಕೂಲಿ ನೀಡಬೇಕು ಎಂದರು.
ತಂತ್ರಜ್ಞಾನ ಮುಂದುವರೆದಿದೆ. ಹಮಾಲರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.ರಂಗಕರ್ಮಿ ಪರಶುರಾಮಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ದೇವದಾಸಿ ಮಹಿಳಾ ವಿಮೋಚನಾ ಸಂಘದ ಅಧ್ಯಕ್ಷೆ ಟಿ.ವಿ. ರೇಣುಕಮ್ಮ, ರಹಮತ್ತುಲ್ಲಾ, ಹಮಾಲರ ಸಂಘದ ಅದ್ಯಕ್ಷ ವೆಂಕಟೇಶ, ಕಾರ್ಯದರ್ಶಿ ಗೌಸ್ ಮೋಹಿದ್ದಿನಿ, ಕಸಾಪ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಬುಡೇನಸಾಬ್, ಎಚ್.ಫಕ್ಕಿರಪ್ಪ, ಊರಪ್ಪ, ಸಾಲಿಯಾ, ರಹಮತ್ ಸೇರಿದಂತೆ ಇತರರು ಇದ್ದರು.