ಕನ್ನಡಪ್ರಭ ವಾರ್ತೆ ರಾಯಚೂರು
ಮಂಗಳವಾರ ನಡೆದ ಮತದಾನವಾದ ನಂತರ ವಿವಿಧ ಮತಗಟ್ಟೆಗಳಿಂದ ಮತಯಂತ್ರಗಳನ್ನು ಆಯಾ ಮತದಾನ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಟ್ರಾಂಗ್ ರೂಮ್ಗಳಿಗೆ ತಂದು ಶೇಖರಿಸಿದ್ದಾರೆ. ಮತಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಿದ ನಂತರ ಕೊಠಡಿಯ ಬಾಗಿಲನ್ನು ಭದ್ರಪಡಿಸಲಾಗಿದೆ ಮತ್ತು ಭದ್ರತೆಗಾಗಿ ಸೇನಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಭದ್ರತಾ ಕೊಠಡಿಗಳ ಸುತ್ತಲೂ ಕಲಂ 144 ನಿಷೇದಾಜ್ಞೆ ಜಾರಿ: ಮಂಗಳವಾರ ಸಂಜೆ 6 ರಿಂದ ಮತದಾನ ಎಣಿಕೆ ಕಾರ್ಯ ಮುಕ್ತಾಯವಾಗುವವರೆಗೆ ಸುತ್ತಮುತ್ತಲು 200 ಮೀಟರ್ ಸುತ್ತುವರೆದ ಪ್ರದೇಶ ವ್ಯಾಪ್ತಿಯಲ್ಲಿ ಯಾವುದೇ ಅಹತಕರ ಘಟನೆಗಳಿಗೆ ಆಸ್ಪದವಾಗದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಮುಂಜಾಗೃತಾ ಕ್ರಮವಾಗಿ ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 144 ನಿಷೇದಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಆದೇಶ ಹೊರಡಿಸಿದ್ದಾರೆ.