ಹುಬ್ಬಳ್ಳಿ: ರಾಜ್ಯದಲ್ಲಿ ವಾಸವಿರುವ ಅನ್ಯ ರಾಜ್ಯದವರು ಎರಡೆರಡು ಕಡೆ ಮತದಾನದ ಹಕ್ಕು ಹೊಂದಿರುವ ಶಂಕೆ ಇದೆ. ಈ ಕುರಿತು ಮಾಹಿತಿ ನೀಡುವಂತೆ ಚುನಾವಣಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಹೀಗಾಗಿ ಶೀಘ್ರದಲ್ಲೇ ಚುನಾವಣಾಧಿಕಾರಿಗಳ ವಿರುದ್ಧ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಲಾಗುವುದು ಎಂದು ಕರ್ನಾಟಕ ಸಮತಾ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ರೈತಸೇನೆ ಕರ್ನಾಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
ಒಬ್ಬ ವ್ಯಕ್ತಿ ತನ್ನ ಮೂಲ ಸ್ಥಳ ತೊರೆದು ಬೇರೆ ಸ್ಥಳದಲ್ಲಿ ನೆಲೆಸಿದಾಗ ಅಫಿಡವಿಟ್ ಸಲ್ಲಿಸಿ ವಾಸವಿರುವ ಸ್ಥಳದಲ್ಲಿ ಮತದಾನ ಹಕ್ಕು ಹೊಂದಬೇಕು. ಆದರೆ, ಅನ್ಯ ರಾಜ್ಯದವರ ವಿಷಯದಲ್ಲಿ ಹೀಗೆ ಮಾಡಿರುವುದು ಕಂಡುಬರುತ್ತಿಲ್ಲ. ಹೀಗಾಗಿಯೇ ಕಾನೂನಾತ್ಮಕ ಹೋರಾಟಕ್ಕೆ ನಿರ್ಧರಿಸಲಾಗಿದೆ.
ರಾಹುಲ್ ಆರೋಪದಲ್ಲಿ ಸತ್ಯಾಂಶವಿದೆ: ಮತಚೋರಿ ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪದಲ್ಲಿ ಸತ್ಯಾಂಶವಿದೆ. ಹೀಗಾಗಿಯೇ ಚುನಾವಣಾಧಿಕಾರಿಗಳು ಸುಮ್ಮನಿದ್ದಾರೆ. ಅವರ ಆರೋಪ ಸುಳ್ಳಾಗಿದ್ದರೆ ಈಗಾಗಲೇ ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗುತ್ತಿತ್ತು. ಮತಚೋರಿ ವಿಷಯದಲ್ಲಿ ಚುನಾವಣಾಧಿಕಾರಿಗಳು ಮೌನವಹಿಸುವ ಮೂಲಕ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ. ಇನ್ನು ಸ್ಥಳೀಯವಾಗಿ ಚುನಾವಣಾ ಕಾರ್ಯದಲ್ಲಿ ತೊಡಗುವ ಸಿಬ್ಬಂದಿ ಸರ್ಕಾರಿ ನೌಕರರೇ ಆಗಿದ್ದು, ಅವರೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದೂ ಅವರು ಆರೋಪಿಸಿದರು.ಸಂವಿಧಾನ ಕೊಟ್ಟ ಮತದ ಹಕ್ಕಿನ ಪಾವಿತ್ರ್ಯ ಕಾಪಾಡಬೇಕಾದ ಚುನಾವಣಾ ಆಯೋಗ ಆರೋಪ ಬಂದಾಗ, ಆರೋಪಿಸಿದವರ ಮೇಲೆ ಕಠಿಣ ಶಿಕ್ಷೆಯ ಬೆದರಿಕೆ ಹಾಕುತ್ತಾರೆ. ನಾವು ಆಯೋಗದ ಅಧಿಕಾರಿಗಳನ್ನು ಅಪರಾಧಿಗಳೆಂದು ಹೇಳುತ್ತಿಲ್ಲ. ಮಾಹಿತಿ ನೀಡಿ ಎಂದು ಕೇಳಿದರೆ ನಮ್ಮನ್ನೇ ಅಪರಾಧಿಗಳ ತರಹ ನೋಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಆಲೇಕರ್ ಸೇರಿದಂತೆ ಹಲವರಿದ್ದರು.