ಶಿಕಾರಿಪುರ ತಾಲೂಕು ಆಡಳಿತ, ಪುರಸಭೆ ಸಂಯುಕ್ತ ಆಶಯದಲ್ಲಿ ಮತದಾನ ಜಾಗೃತಿ ಅಭಿಯಾನ ಹಾಗೂ ಕಾರ್ಮಿಕ ದಿನಾಚರಣೆ ನಡೆಯಿತು. ಕಾರ್ಯಕ್ರಮಕ್ಕೆ ತಹಸೀಲ್ದಾರ್ ಮಲ್ಲೇಶ್ ಪೂಜಾರ್ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಮತದಾನ ನಮ್ಮೆಲ್ಲರ ಜವಾಬ್ದಾರಿ ಹಾಗೂ ಸಂವಿಧಾನಿಕ ಹಕ್ಕಾಗಿದೆ ಇದನ್ನು ಎಲ್ಲರೂ ಚಲಾಯಿಸುವ ಮೂಲಕ ಸದೃಢ ದೇಶ ನಿರ್ಮಾಣಕ್ಕೆ ಪಾತ್ರರಾಗಬೇಕಾಗಿದೆ ಎಂದು ತಾಲೂಕು ದಂಡಾಧಿಕಾರಿ ಮಲ್ಲೇಶಪ್ಪ ಪೂಜಾರ್ ತಿಳಿಸಿದರು.
ಅವರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಸಂಘಟಿತ ಕಟ್ಟಡ ಕಾರ್ಮಿಕರ ಸಂಘ, ತಾಲೂಕು ಆಡಳಿತ, ಪುರಸಭೆ ಸಂಯುಕ್ತ ಆಶ್ರಯದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನ ಹಾಗೂ ಕಾರ್ಮಿಕ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಮತದಾರರು ಯಾವುದೇ ಆಸೆ ಅಮಿಷಗಳಿಗೆ ಬಲಿಯಾಗದೆ ನಿರ್ಭಿತಿಯಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಲು ಕೋರಿದ ಅವರು ಶೇಕಡ ನೂರರಷ್ಟು ಮತದಾನ ಮಾಡೋಣ ಎಂದರು.
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಟಿ.ಮಹದೇವಾಚಾರ್ ಮಾತನಾಡಿ, ಕಾರ್ಮಿಕರು ಮತದಾನದ ದಿನದಂದು ಕಡ್ಡಾಯವಾಗಿ ಮತದಾನ ಮಾಡಿಯೇ ತಮ್ಮ ಕೆಲಸಗಳಿಗೆ ತೆರಳಬೇಕು. ಆ ಮೂಲಕ ಅತಿ ಹೆಚ್ಚು ಮತದಾನ ಆಗಲು ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳೋಣ ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಚುನಾವಣಾಧಿಕಾರಿ ರವಿ ಬಂಗಾರಪ್ಪ ಮೆರವಣಿಗೆಗೆ ಚಾಲನೆ ನೀಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಪ್ಪ, ಸಹಾಯಕ ಕೃಷಿ ನಿರ್ದೇಶಕ ಕಿರಣಕುಮಾರ್, ಪುರಸಭಾ ವ್ಯವಸ್ಥಾಪಕ ರಾಜಕುಮಾರ್, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಸಂಜಯ್ ಕುಮಾರ್, ಅಧಿಕಾರಿಗಳಾದ ವೀರಭದ್ರಯ್ಯ, ಕಂದಾಯಾಧಿಕಾರಿ ಪರಶುರಾಮ್ ಸಂಘದ ಜಿಲ್ಲಾ ಮುಖಂಡರಾದ ರಾಜೇಶ್ವರಿ, ಅಕ್ಕಮ್ಮ, ತಾಲೂಕು ಸಂಘದ ಅಧ್ಯಕ್ಷ ಅಣ್ಣಾಮಲೈ ಕಾರ್ಯದರ್ಶಿ ರವಿಕುಮಾರ್, ಆಂಜನೇಯ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಹಾಗೂ ಪುರಸಭೆ ಆಡಳಿತ ವರ್ಗದವರು ಹಾಜರಿದ್ದರು. ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆ ಬಸ್ ನಿಲ್ದಾಣ ಮೂಲಕ ತಾಲೂಕು ಕಚೇರಿ ಆವರಣದಲ್ಲಿರುವ ಕಟ್ಟಡ ಕಾರ್ಮಿಕರ ಸಂಘದ ಕಚೇರಿಗೆ ತಲುಪಿತು. ಈ ಸಂದರ್ಭದಲ್ಲಿ ಎಲ್ಲ ಕಾರ್ಮಿಕರು ಮತದಾನವನ್ನು ತಪ್ಪದೆ ಮಾಡೋಣ ಎಂಬ ಪ್ರತಿಜ್ಞೆಯನ್ನು ಕೈಗೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.