ಮಡಿಕೇರಿ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಬಿಜೆಪಿ ಪ್ರಭಾವವಿದೆ ಎಂಬ ಆರೋಪ ಬಾರದಂತೆ ಅತ್ಯಂತ ಪಾರದರ್ಶಕವಾಗಿ ಮತ್ತು ನಿಯಮಾನುಸಾರ ಚುನಾವಣಾ ಆಯೋಗ ಕಾರ್ಯ ನಿರ್ವಹಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ನ ಎಸ್ಐಆರ್ ಉಸ್ತುವಾರಿ ವಿ.ಆರ್. ಸುದರ್ಶನ್ ಹೇಳಿದ್ದಾರೆ.
ದೇಶಕ್ಕೆ ಎಸ್ಐಆರ್ ಹೊಸದಲ್ಲ. ಆದರೆ ಬಿಜೆಪಿಯವರು ಈಗ ಪ್ರಭಾವ ಬೀರಿ ವಿಶೇಷ ಎನ್ನುವುದನ್ನು ಸೇರಿಸಿದ್ದಾರೆ. ಈ ಹಿಂದೆ 10 ಎಸ್ಐಆರ್ ನಡೆದಿದೆ. ಎಸ್ಐಆರ್ ಪ್ರಕ್ರಿಯೆಯನ್ನು ಕಾಂಗ್ರೆಸ್ ನಿರಾಕರಿಸುತ್ತಿಲ್ಲ. ಎಸ್ಐಆರ್ ಆಗಬೇಕು ಎಂದು ಮೊದಲು ಧ್ವನಿ ಎತ್ತಿದ್ದೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ. ಆದರೆ ನೈಜ ಮತದಾರರು ಮತದಾರ ಪಟ್ಟಿಯಿಂದ ಹೊರಗೆ ಉಳಿಯಬಾರದು ಮತ್ತು ಕಾಂಗ್ರೆಸ್ ಬೆಂಬಲಿಗರು ಮತದಾರರ ಪಟ್ಟಿಯಿಂದ ವಂಚಿತರಾಗಬಾರದು ಎನ್ನುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಹಾಗಾಗಿ ಪ್ರತಿಯೊಬ್ಬ ಕಾಂಗ್ರೆಸಿಗರೂ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಎಸ್ಐಆರ್ ಸಂದರ್ಭ ಬೇರೆ ರಾಜ್ಯಗಳಲ್ಲಿ ನಡೆದಿರುವ ಪ್ರಕರಣಗಳ ಉದಾಹರಣೆ ಇರುವಾಗ ರಾಜ್ಯದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ ಎಂದರು. ಪ್ರತಿ ಬೂತ್ನಲ್ಲೂ ಕಾಂಗ್ರೆಸ್ನಿಂದ ಬಿಎಲ್ಎ ನೇಮಕ ಮಾಡಲಾಗಿದೆ. ನೈಜ ಮತದಾರನ ಹಕ್ಕು ಚುನಾವಣಾ ಆಯೋಗ ಕಸಿದುಕೊಳ್ಳಬಾರದು. ಇದೊಂದು ಸಂವಿಧಾನ ಗಟ್ಟಿಗೊಳಿಸುವ ಪ್ರಕ್ರಿಯೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗಕ್ಕೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹಕಾರ ಕೊಡುತ್ತಿದೆ. ಆದರೆ ಈ ವಿಷಯವನ್ನು ಬಿಜೆಪಿ ಮತ್ತು ಜೆಡಿಎಸ್ ರಾಜಕೀಯಗೊಳಿಸಿವೆ. ಪ್ರತಿ ಜಿಲ್ಲೆಗೂ ಭೇಟಿ ನೀಡಲಾಗುತ್ತಿದ್ದು ಎಸ್ಐಆರ್ ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗ ಯಾವ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿದೆ ಎನ್ನುವುದರ ಪರಿಶೀಲನೆ ನಡೆಸಲಾಗುತ್ತಿದೆ. ಕೊರತೆಗಳು ಕಂಡುಬಂದಾಗ ಚುನಾವಣಾ ಆಯೋಗದ ಗಮನ ಸೆಳೆಯಲಾಗುತ್ತದೆ. ಮತದಾರರ ನೆರವು ಕೇಂದ್ರ ಮತ್ತು ಬಿಎಲ್ಒಗಳ ನೆರವು ಕೇಂದ್ರಗಳ ಸಂಖ್ಯೆ ಕಡಿಮೆ ಇದೆ. ಇದು ಇನ್ನೂ ಹೆಚ್ಚಾಗಬೇಕು ಎಂದರು.
ಸರ್ಕಾರ ಶಾಶ್ವತ ವಾಸ ಸ್ಥಳ ಪ್ರಮಾಣ ಪತ್ರ ಕೊಡುವ ಬಗ್ಗೆ ತಹಸೀಲ್ದಾರ್ಗಳಿಗೆ ಆದೇಶ ಮಾಡಿರುವ ಬಗ್ಗೆ ಬಿಜೆಪಿ ಆರೋಪ ಮಾಡುತ್ತಿದೆ. ಆದರೆ ಸರ್ಕಾರಕ್ಕೂ ಜವಾಬ್ದಾರಿ ಇದೆ. ವಿವೇಚನೆಯಿಂದಲೇ ಪ್ರಮಾಣ ಪತ್ರ ನೀಡಲಾಗುತ್ತಿದೆ. ಬಿಎಲ್ಎ ಕೂಡ ಮತದಾರರಿಂದ ಎನ್ಯುಮರೇಷನ್ ಫಾರಂ ತೆಗೆದುಕೊಂಡು ಬಿಎಲ್ಒ ಮೂಲಕ ಸಲ್ಲಿಸಲು ಅವಕಾಶ ಇದೆ. ಆದರೆ ಬಿಜೆಪಿ ಈ ವಿಷಯದಲ್ಲೂ ತಕರಾರು ತೆಗೆದಿರುವುದು ರಾಜಕೀಯಪ್ರೇರಿತ ಎಂದರು.ಪಕ್ಷದ ವಕ್ತಾರ ಎಂ. ಲಕ್ಷ್ಮಣ್ ಮಾತನಾಡಿ, ಎನ್ಯುಮರೇಷನ್ ಫಾರಂ ವಿನ್ಯಾಸದ ಹಿಂದೆ ದುರುದ್ದೇಶ ಎದ್ದು ಕಾಣುತ್ತಿದೆ. ಇದಕ್ಕಾಗಿಯೇ ಗೊಂದಲದಿಂದ ಕೂಡಿದ ಅರ್ಜಿ ನಮೂನೆ ಸಿದ್ದಪಡಿಸಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಿದರೆ ಇವರು ಈಗ ಎಸ್ಐಆರ್ ಹೆಸರಿನಲ್ಲಿ ಮತದಾರರ ಹೆಸರು ತೆಗೆಯುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 1 ಕೋಟಿ ಮತದಾರರ ಹೆಸರು ಪಟ್ಟಿಯಿಂದ ತೆಗೆಸಲು ಬಿಜೆಪಿ ಹುನ್ನಾರ ನಡೆಸಿದೆ. ಈ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಹೇಳಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಮುಖಂಡರಾದ ಚಂದ್ರಮೌಳಿ, ಟಿ.ಪಿ. ರಮೇಶ, ಮಂಜುನಾಥ್ ಗುಂಡೂರಾವ್ ರಾವ್, ಹಂಸ, ನವೀನ್, ತೆನ್ನೀರಾ ಮೈನಾ ಸುದ್ದಿಗೋಷ್ಠಿಯಲ್ಲಿ ಇದ್ದರು.