ಹುಬ್ಬಳ್ಳಿ: ಬೆಂಗಳೂರಿನ ಬಸವ ಪರಿಷತ್ ಕೊಡಮಾಡುವ 2025ನೇ ಸಾಲಿನ ಪ್ರತಿಷ್ಠಿತ ''''ಬಸವ ಪುರಸ್ಕಾರ''''ಕ್ಕೆ ಹುಬ್ಬಳ್ಳಿಯ ಉದ್ಯಮಿ, ಸ್ವರ್ಣಾ ಗ್ರೂಪ್ನ ಚೇರಮನ್ ಡಾ. ವಿ.ಎಸ್.ವಿ. ಪ್ರಸಾದ ಭಾಜನರಾಗಿದ್ದಾರೆ.
ಕಳೆದ 10 ವರ್ಷಗಳ ಹಿಂದೆ ಎಂಪಿ ಉಮಾದೇವಿ ನೇತೃತ್ವದಲ್ಲಿ ಬಸವ ಪರಿಷತ್ ಸ್ಥಾಪನೆಗೊಂಡಿದೆ. ಸಮಾನತೆ, ವೈಚಾರಿಕತೆ, ಜಾತ್ಯಾತೀತ ಮನೋಭಾವದಿಂದ ಕೂಡಿದ ವಿವಿಧ ಕ್ಷೇತ್ರಗಳಲ್ಲಿನ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರನ್ನು ಗುರುತಿಸಿ ಕಳೆದ 4 ವರ್ಷದಿಂದ ಬಸವ ಪುರಸ್ಕಾರ ಪ್ರಶಸ್ತಿ ನೀಡುತ್ತಾ ಬಂದಿದೆ.ಪ್ರಸಕ್ತ ಸಾಲಿನ ಪ್ರಶಸ್ತಿಗೆ ಡಾ. ವಿ.ಎಸ್.ವಿ. ಪ್ರಸಾದ್ ಅವರನ್ನು ಉದ್ಯಮ ಮತ್ತು ಸಮಾಜ ಸೇವೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬಸವ ಪರಿಷತ್ ಅಧ್ಯಕ್ಷೆ ರೇಖಾ ಹಿರೇಮಠ, ಪ್ರಧಾನ ಕಾರ್ಯದರ್ಶಿ ಮಹಾತೇಶ ಹಿರೇಮಠ ತಿಳಿಸಿದ್ದಾರೆ.
ಆ. 9ರಂದು ಬೆಂಗಳೂರಿನ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದ ಕೊಂಡಜ್ಜಿ ಬಸವ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮೈಸೂರಿನ ಸುತ್ತೂರು ಕ್ಷೇತ್ರ ಜಗದ್ಗುರು ಡಾ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.ಡಾ. ಪ್ರಸಾದ ಅವರು ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್ ಸ್ಥಾಪಿಸಿ ಅದರ ಮೂಲಕ ನಿರ್ಮಾಣ ಕ್ಷೇತ್ರದಲ್ಲಿ ಅತ್ಯಂತ ಸವಾಲಿನ ನಿರ್ಮಾಣ ಕಾಮಗಾರಿಗಳನ್ನು ಗುಣಮಟ್ಟದಿಂದ ಕೈಗೊಂಡಿದ್ದಾರೆ. ವೃತ್ತಿಯ ಜತೆ ಜತೆಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲೂ ಕೊಡುಗೈ ದಾನಿಯೆನಿಸಿದ್ದಾರೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡಾ ಕ್ಷೇತ್ರದ ಸೇವಾ ಕಾರ್ಯದಲ್ಲಿ ಇವರದ್ದು ಯಾವಾಗಲೂ ಎತ್ತಿದ ಕೈ.
ಡಾ. ಪ್ರಸಾದ ಅವರಿಗೆ ಈಗಾಗಲೇ ಶ್ರೀಲಂಕಾದ ಕೊಲಂಬೊ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ವಾಣಿಜ್ಯ ರತ್ನ, ಟೈಕಾನ್ನಿಂದ ಬೆಸ್ಟ್ ಎಂಟರ್ಪ್ರಿನರ್ ಆಫ್ ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ಫಾಸ್ಟೆಸ್ಟ್ ಗ್ರೋವಿಂಗ್ ಲೀಡರ್ ಪ್ರಶಸ್ತಿ, ಲಯನ್ಸ್ ಕ್ಲಬ್ನಿಂದ ಕಮ್ಮಾ ಲೆಜೆಂಡರಿ ಪ್ರಶಸ್ತಿ, ಪಾಲಿಕೆಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಲಭಿಸಿವೆ.