ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ 3 ತಿಂಗಳಿನಿಂದ ಕೂಲಿ ಹಣ ಬಂದಿಲ್ಲ. ಕೂಡಲೇ ಹಣವನ್ನು ಬಡ್ಡಿಯೊಂದಿಗೆ ಬಿಡುಗಡೆ ಮಾಡಬೇಕು
ಕನ್ನಡಪ್ರಭ ವಾರ್ತೆ ಹುನಗುಂದ
ನರೇಗಾ ಯೋಜನೆಯಡಿ ಕೂಲಿ ಕೈಗೊಂಡ ಕಾರ್ಮಿಕರಿಗೆ ಕೂಲಿ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಪ್ರಧಾನಮಂತ್ರಿಗೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಶನಿವಾರ ಪತ್ರ ಚಳವಳಿ ನಡೆಯಿತು.
ತಾಲೂಕಿನ ಹಿರೇಬಾದವಾಡಗಿ ಗ್ರಾಮದ ಅಂಚೆ ಕಚೇರಿಯ ಎದುರು ಕೂಲಿ ಹಣ ಹೆಚ್ಚುವರಿ ಮಾನವ ದಿನ ನೀಡಬೇಕು ಎಂದು ಆಗ್ರಹಿಸಿ ಪ್ರಧಾನಮಂತ್ರಿಗೆ ಬರೆದ ಪತ್ರ ಪ್ರದರ್ಶಿಸಿದ ಕೂಲಿ ಕಾರ್ಮಿಕರು ಪತ್ರ ರವಾನಿಸಿದರು.
ಸಂಘಟನೆ ಮುಖಂಡರು ಮಾತನಾಡಿ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ 3 ತಿಂಗಳಿನಿಂದ ಕೂಲಿ ಹಣ ಬಂದಿಲ್ಲ. ಕೂಡಲೇ ಹಣವನ್ನು ಬಡ್ಡಿಯೊಂದಿಗೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಈ ವರ್ಷ ಬರಗಾಲ ಆವರಿಸಿದೆ. ಈಗಾಗಲೇ ರಾಜ್ಯವನ್ನು ಬರಗಾಲ ರಾಜ್ಯವೆಂದು ಸರ್ಕಾರ ಘೋಷಿಸಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಕೆಲಸ ನೀಡಲು ಕೇಂದ್ರ ಸರ್ಕಾರ ಮುಂದಾಗಬೇಕು. ಇರುವ ಮಾನವ ದಿನಗಳೊಂದಿಗೆ 50 ದಿನ ಹೆಚ್ಚುವರಿ ಕೂಲಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
ಕೂಲಿ ಕಾರ್ಮಿಕರಾದ ಸೈನಾಜ ಪಿಂಜಾರ, ಮಂಜುಳಾ ಕಮತಗಿ, ಅರುಣಾ ಕುಂಬಾರ, ಹಕ್ಕಮಹಾದೇವಿ ಹಡಪದ, ರತ್ನವ್ವ ತೋಟಗೇರಿ ಸೇರಿದಂತೆ ಬನ್ನಹಟ್ಟಿ, ಚಿಕ್ಕಬಾದವಾಡಗಿ, ಹಿರೇಬಾದವಾಡಗಿ, ಚಿತ್ತವಾಡಗಿ, ಗ್ರಾಮದ ಜನರು ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.