ಸಿದ್ದು ರಾಜೀನಾಮೆ ಕೊಡ್ತಾರೆ ಅಂತಾ ಕಾಯ್ತಿದ್ದಾರೆ : ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ

KannadaprabhaNewsNetwork |  
Published : Dec 20, 2024, 12:48 AM ISTUpdated : Dec 20, 2024, 12:16 PM IST
(ಪೊಟೋ 19ಬಿಕೆಟಿ1, ಬಾಗಲಕೋಟೆಯಲ್ಲಿ  ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ) | Kannada Prabha

ಸಾರಾಂಶ

ಅಂಬೇಡ್ಕರ್‌ನ್ನ ಕಾಂಗ್ರೆಸ್‌ನವರು ಅಪಮಾನ ಮಾಡುತ್ತಿದ್ದಾರೆ. ಈಗ ಅಮಿತ್ ಶಾ ಹೇಳಿದ್ದನ್ನ ತಿರುಚಿ ಹೇಳುವಂತ ಕೆಲಸ ಮಾಡ್ತಿದೆ ಕಾಂಗ್ರೆಸ್ ಸರ್ಕಾರ ಎಂದು ಆಕ್ರೋಶ

 ಬಾಗಲಕೋಟೆ : ಕಾಂಗ್ರೆಸ್‌ನಲ್ಲಿ ಒಳ ಒಳಗೆ ಬಡಿದಾಟ, ಬಣ ರಾಜಕೀಯ ಇದೆ. ಹೀಗಾಗಿ ಯಾವಾಗ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ ಅಂತಾ ಕಾಯ್ತಿದ್ದಾರೆ. ಸುಮ್ನೆ ಹೇಳ್ತಾರೆ ಸಿದ್ದರಾಮಯ್ಯನ ಬೆನ್ನಿಗೆ ನಾವು ಇದ್ದೀವಿ ಅಂತಾ. ಸಿಎಂ ಬೆಂಬಲಕ್ಕೆ ಯಾರೆಲ್ಲ ನಿಂತಾರೋ, ಅವ್ರೆಲ್ಲಾ ಸಿಎಂ ಕುರ್ಚಿ ಮೇಲೆ ಸಿಎಂ ಆಗಲು ಟವೆಲ್ ಹಾಕಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿನ ಗುಂಪುಗಾರಿಕೆ ಸಂದರ್ಭದಲ್ಲಿ, ರಥಸಪ್ತಮಿ ದಿನದಿಂದ ರಾಜ್ಯದಲ್ಲಿ ಏನೇನು ರಾಜಕೀಯ ಬದಲಾವಣೆ ಆಗುತ್ತೆ ಕಾದು ನೋಡಬೇಕಿದೆ ಎಂದರು.

ಕಾಂಗ್ರೆಸ್‌ನಲ್ಲಿ ಮೂರು ಬಣ ಆಗುತ್ತೆ ಅಥವಾ ಮೂರು ಪಾರ್ಟಿ ಆಗುತ್ತೋ, ಅವಧಿಗೂ ಮುನ್ನ ಚುನಾವಣೆ ಬಂದೆ ಬಿಡುತ್ತೋ, ಇದೆಲ್ಲದರ ಜೊತೆ ಸಿದ್ದರಾಮಯ್ಯನ ಭವಿಷ್ಯದ ಜೊತೆ ಕಾಂಗ್ರೆಸ್‌ನ ಭವಿಷ್ಯ ನಿಂತಿದೆ ಎಂದ ಅವರು, ಕಾಂಗ್ರೆಸ್ ಪಕ್ಷವನ್ನು ತಪಲು ಮಾಡಿ ಕಟ್ಟಿದ್ದಿದ್ರೆ, ಇವತ್ತು ಹತ್ತಾರು ಕಾಂಗ್ರೆಸ್ ಈ ದೇಶದಲ್ಲಿ ಆಗ್ತಿರಲಿಲ್ಲ. ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹಳ ದಿನ ಇರಲ್ಲ. ಮುಂದೆ ಯಾವ ಸರ್ಕಾರ ಬರುತ್ತೋ ಗೊತ್ತಿಲ್ಲ ಎಂದರು.

ಅಂಬೇಡ್ಕರ್‌ಗೆ ಬಿಜೆಪಿ ಹೆಚ್ಚು ಗೌರವಿಸಿದೆ:

ಅಂಬೇಡ್ಕರ್‌ ಅವರು ಜೀವಂತವಾಗಿದ್ದಾಗ ಪೂರ್ಣ ಅಪಮಾನ ಮಾಡಿದ್ದು ಕಾಂಗ್ರೆಸ್. ಅವರು ಚುನಾವಣೆ ನಿಂತಾಗ ಸೋಲಿಸಿದರು. ಅವರು ಮೃತಪಟ್ಟಾಗ ಸಮಾಧಿ ಮಾಡಲಿಕ್ಕೆ ದೆಹಲಿಯಲ್ಲಿ ಜಾಗ ಕೊಟ್ಟಿಲ್ಲ. ಕೇಂದ್ರ ಮಂತ್ರಿಮಂಡಲದಲ್ಲಿ ಅವರು ಮತ್ತು ರಾಜಾಜಿಯವರು ಇಬ್ಬರೂ ಕೂಡ ಈ ಮಂತ್ರಿಮಂಡಲದಲ್ಲಿ ಇರಲಿಲ್ಲ. ರಾಜೀನಾಮೆ ಕೊಟ್ರೆ ಜವಾಹರ್ ಲಾಲ್ ನೆಹರುನೆ ಹೇಳಿದ್ದಾರೆ ಹೋದರೆ ಹೋಗ್ಲಿ ಬಿಡಿ ಅಂತ. ಕಾಂಗ್ರೆಸ್‌ನವರು ಅಂಬೇಡ್ಕರ್‌ಗೆ ಮಾಡಿದ ಅವಮಾನ ಅಷ್ಟಿಷ್ಟಲ್ಲ ಎಂದು ದೂರಿದರು.

ಭಾರತೀಯ ಜನತಾ ಪಾರ್ಟಿ ಉಳಿದ ಎಲ್ಲಾ ಪಾರ್ಟಿಯವರಿಗಿಂತ ಹೆಚ್ಚು ಗೌರವವನ್ನು ಅಂಬೇಡ್ಕರ್ ಅವರಿಗೆ ಕೊಡುತ್ತಾ ಬಂದಿದ್ದೇವೆ. ಮಾತು ಎತ್ತಿದರೆ ಅಂಬೇಡ್ಕರ್ ಅಂತ ಹೇಳ್ತೀರಿ. ಆದರೆ ಹೃದಯದಿಂದ ಹೇಳಲ್ಲ. ಆದರೆ ಅಂಬೇಡ್ಕರ್ ಅಂಬೇಡ್ಕರ್ ಅಂತ ದೇವರಂತ ಹೇಳಿದ್ರೆ ನಿಮಗೆ ಸ್ವರ್ಗಾನೆ ಸಿಕ್ಕಿತ್ತು ಅಂತ ಶಾ ಹೇಳಿದ್ದಾರೆ. ಅಂಬೇಡ್ಕರ್ ಅವರಿಗೆ ಮುಂಚೆಯಿಂದ ಗೌರವ ಕೊಡೋದು ಭಾರತೀಯ ಜನತಾ ಪಾರ್ಟಿಯಾಗಿದೆ ಎಂದು ತಿಳಿಸಿದರು.

ದಲಿತರ ಹಿಂದುಳಿದವರ ಉದ್ದಾರವಾಗಬೇಕು ಅಂತ ಅಪೇಕ್ಷೆ ಅಂಬೇಡ್ಕರದ್ದು. ಅದಕ್ಕಾಗಿ ಮೀಸಲಾತಿ ಮಾಡಿದರು. ಆದರೆ ದಲಿತರು ಹಿಂದುಳಿದವರು ಪರಿಸ್ಥಿತಿ ಇನ್ನೂ ಅವರಿಗೆ ಮನೆ ಇಲ್ಲ. ಅವರು ಗುಡಿಸಲಲ್ಲಿ ವಾಸ ಮಾಡುತ್ತಿದ್ದಾರೆ. ಅವರು ವಾಸಿಸುತ್ತಿದ್ದ ಜಾಗದಲ್ಲಿ ಕುಡಿಯಲು ನೀರಿಲ್ಲ. ಶಿಕ್ಷಣ ಇಲ್ಲ, ಏನು ಇಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಇವತ್ತಿನವರೆವಿಗೂ ಕಾಂಗ್ರೆಸ್ ದಲಿತರನ್ನು ಯಾವ ರೂಪದಲ್ಲಿ ಇಟ್ಟಿದೆ. ಅಂಬೇಡ್ಕರ್‌ನ್ನ ಕಾಂಗ್ರೆಸ್‌ನವರು ಅಪಮಾನ ಮಾಡುತ್ತಿದ್ದಾರೆ. ಈಗ ಅಮಿತ್ ಶಾ ಹೇಳಿದ್ದನ್ನ ತಿರುಚಿ ಹೇಳುವಂತ ಕೆಲಸ ಮಾಡ್ತಿದೆ ಕಾಂಗ್ರೆಸ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿ ಗುಂಪುಗಾರಿಕೆ ನಡೆಯಲ್ಲ:

ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿ ಬಣ ಶಕ್ತಿ ಪ್ರದರ್ಶನದ ಸಮಾವೇಶ ಮಾಡುತ್ತಿದೆ ಎಂಬ ಪ್ರಶ್ನೆಗೆ ಬಿಜೆಪಿಯಲ್ಲಿ ಗುಂಪುಗಾರಿಕೆ ಇರಬೇಕಾದ್ರೇ ಮೊದಲು ಇದು ಸರಿ ಹೋಗಬೇಕು. ಮುಂದೆ ಸರಿ ಹೋಗುತ್ತೆ. ಯಾರ್‍ಯಾರು ಏನಬೇಕಾದ್ರೂ ಹಾರಾಡಬಹುದು. ಪಕ್ಷಕ್ಕಾಗಿ ತಪಸು ಮಾಡಿ ಕಟ್ಟಿದವರಿಗೆ ಬೆಲೆ ಇದೆ. ಬಿಜೆಪಿಯಲ್ಲಿ ಗುಂಪುಗಾರಿಕೆ ನಡೆಯಲ್ಲ ಎಂದ ಅವರು, ಬಿಜೆಪಿ ಸಂಘಟನೆ ಉಳಿಯುತ್ತೆ. ಬಿಜೆಪಿ ಮತ್ತಷ್ಟು ಗಟ್ಟಿಯಾಗುತ್ತೆ ಎಂದರು.

ಬಿಎಸ್‌ವೈ ಹೆಸರಲ್ಲಿ ನಡೆಯೋದು ಗುಂಪುಗಾರಿಕೆ ಪ್ರದರ್ಶನ. ಅದು ಶಕ್ತಿ ಪ್ರದರ್ಶನ ಅಲ್ಲ. ಯಾಕೆ ಪ್ರತಿ ವರ್ಷವೂ ಬಿಎಸ್‌ವೈ ಹುಟ್ಟು ಹಬ್ಬ ಆಚರಣೆ ಇರಲಿಲ್ವಾ. ಆವಾಗ ಯಾಕೆ ಸಮಾವೇಶ ಮಾಡಲಿಲ್ಲ? ಹೀಗೆ ಗುಂಪುಗಾರಿಕೆ ನಡೆಯುವಾಗ ಬಿಎಸ್‌ವೈ ನಿಲ್ಲಿಸುವ ಕೆಲಸ ಮಾಡಬೇಕು ಎಂದ ಅವರು, ರೇಣುಕಾಚಾರ್ಯ ಬಣದ ಗುಂಪು ಸಮಾವೇಶ ಮಾಡ್ತಿದೆ. ಅದಕ್ಕೆ ಬಿಎಸ್‌ವೈ ಒಪ್ಪಿಗೆ ಇದೆ ಇಲ್ವೋ ಗೊತ್ತಿಲ್ಲ. ಗುಂಪುಗಾರಿಕೆ ಆಗೋದಕ್ಕೆ ಬಿಎಸ್‌ವೈ ಒಪ್ಪಿಗೆ ಕೊಡ್ತಾರೆ ಅನ್ನೋದು ನನಗೇನು ಅನಿಸಲ್ಲ ಎಂದು ಹೇಳಿದರು.

ವಕ್ಫ್ ಹೋರಾಟ ನಿರಂತರ

ವಿಧಾನಸಭೆಯಲ್ಲಿ ವಕ್ಫ್‌ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ, ಜಮೀರ್ ಅಹ್ಮದ್ ಉತ್ತರ ನೀಡಿರುವ ವಿಚಾರದ ಬಗ್ಗೆ ಮಾತನಾಡಿದ ಈಶ್ವರಪ್ಪ, ಇದು ಹಿಂದೂ ಸಮಾಜದ ಕಣ್ಣಿಗೆ ಮಣ್ಣು ಹಾಕುವಂತ ಉತ್ತರವಾಗಿದೆ. ಮಠ, ಜಮೀನುಗಳು, ದೇವಸ್ಥಾನಗಳ ಪಹಣಿಯಲ್ಲಿರುವ ವಕ್ಫ್ ಹೆಸರನ್ನು ತೆಗಿತೀವಿ ಅಂತ ಎಲ್ಲಿಯೂ ಹೇಳಿಲ್ಲ. ಮಠ, ದೇವಸ್ಥಾನ, ಜಮೀನುಗಳಲ್ಲಿನ ಪಹಣಿಗಳಲ್ಲಿನ ವಕ್ಫ್ ಹೆಸರನ್ನು ಕಿತ್ತೆಸೆಯಬೇಕು. ಸಿಎಂ, ಜಮೀರ್ ಅಹ್ಮದ್ ಅವರ ಉತ್ತರ ನಮಗೆ ಯಾರಿಗೂ ತೃಪ್ತಿ ಇಲ್ಲ. ಹಾಗಾಗಿ ವಕ್ಫ್ ವಿಚಾರದಲ್ಲಿನ ಹೋರಾಟ ಮತ್ತೆ ಮುಂದುವರಿಯುತ್ತದೆ ಎಂದು ಈಶ್ವರಪ್ಪ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮತಗಿಯಲ್ಲಿ ನಿವೃತ್ತ ಯೋಧ ಲಕ್ಷ್ಮಣಗೆ ಭವ್ಯ ಸ್ವಾಗತ
ಉತ್ತರದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಅಗತ್ಯ: ಉ.ಕ.ಹೋರಾಟ ಸಮಿತಿ