ಧರ್ಮದ ಹಾದಿಯಲ್ಲಿ ನಡೆಯಿರಿ: ಡಾ.ಗುರುಮಹಾಂತ ಶ್ರೀ

KannadaprabhaNewsNetwork |  
Published : Apr 19, 2026, 02:30 AM IST
ಪೋಟೊ18ಕೆಎಸಟಿ3: ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದ ಶ್ರೀ ವಿಜಯ ಮಹಾಂತೇಶ್ವರ ಮಠದಲ್ಲಿ ನಡೆದ ಶರಣರ ಆಧ್ಯಾತ್ಮ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಡಾ.ಗುರುಮಹಾಂತ ಸ್ವಾಮಿಗಳು ಮಾತನಾಡಿದರು. | Kannada Prabha

ಸಾರಾಂಶ

ಬಸವಾದಿ ಶರಣರು ವಚನಗಳ ರಚನೆಯ ಮೂಲಕ ಜಾತಿಯತೆ,ಮೂಢ ನಂಬಿಕೆ ತೊರೆದು ಯುಕ್ತಿ ಮತ್ತು ಸತ್ಯದ ಮಾರ್ಗದಲ್ಲಿ ಬದುಕುವಂತೆ ಜನರಿಗೆ ಬೋಧಿಸಿದರು

ಕುಷ್ಟಗಿ: 12ನೇ ಶತಮಾನ ಸಮಾಜ ಪರಿವರ್ತನೆಯ ಸುವರ್ಣಯುಗವಾಗಿದ್ದು, ಬಸವಾದಿ ಶರಣರು ಸಮಾಜದಲ್ಲಿ ಸಮಾನತೆ,ಸತ್ಯ ಮತ್ತು ಮಾನವೀಯ ಮೌಲ್ಯ ಪ್ರತಿಪಾದಿಸಿದ್ದಾರೆ ಎಂದು ಇಲಕಲ್ ಶ್ರೀವಿಜಯ ಮಹಾಂತೇಶ್ವರ ಮಠದ ಪೀಠಾಧಿಪತಿ ಡಾ. ಗುರುಮಹಾಂತ ಸ್ವಾಮಿಗಳು ಹೇಳಿದರು.

ತಾಲೂಕಿನ ಕೇಸೂರು ಗ್ರಾಮದ ಶ್ರೀವಿಜಯ ಮಹಾಂತೇಶ್ವರ ಮಠದಲ್ಲಿ ಬಸವ ಜಯಂತಿಯ ಅಂಗವಾಗಿ ನಡೆದ ಶರಣರ ಆಧ್ಯಾತ್ಮ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬಸವಾದಿ ಶರಣರು ವಚನಗಳ ರಚನೆಯ ಮೂಲಕ ಜಾತಿಯತೆ,ಮೂಢ ನಂಬಿಕೆ ತೊರೆದು ಯುಕ್ತಿ ಮತ್ತು ಸತ್ಯದ ಮಾರ್ಗದಲ್ಲಿ ಬದುಕುವಂತೆ ಜನರಿಗೆ ಬೋಧಿಸಿದರು. ಶರಣರ ವಚನಗಳು ಕೇವಲ ಧಾರ್ಮಿಕ ಉಪದೇಶಗಳಲ್ಲ, ಸಮಾಜ ಸುಧಾರಣೆಯ ಸಂದೇಶಗಳಾಗಿವೆ ಎಂದರು.

ಜನರು ಮೂಢನಂಬಿಕೆ ನಂಬದೆ ಉತ್ತಮ ಕಾರ್ಯ ಮಾಡಬೇಕು. ಧರ್ಮದ ಹಾದಿಯಲ್ಲಿ ನಡೆಯಬೇಕು ಎಂಬ ಸಂದೇಶ ನೀಡಿದ ಅವರು ಜಾತೀಯತೆ, ಅಸಮಾನತೆ ಹಾಗೂ ಭೇದಭಾವ ತೊಡೆದು ಹಾಕಿ ಸಮಾನತೆ ಮತ್ತು ಸಹೋದರತ್ವದ ಸಮಾಜ ನಿರ್ಮಾಣವೇ ಶರಣರ ಆಶಯವಾಗಿತ್ತು. ಎಲ್ಲರೂ ಒಂದೇ ಮಾನವಕುಲಕ್ಕೆ ಸೇರಿದವರು ಎಂಬ ಭಾವನೆ ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು.

ಬಸವಾದಿ ಶರಣರು ಸಾರಿದ ಕಾಯಕ ತತ್ವ,ದಾಸೋಹ ಭಾವನೆ ಹಾಗೂ ಜಾತಿ ಭೇದ ವಿರೋಧಿ ಸಂದೇಶ ಇಂದಿನ ಸಮಾಜಕ್ಕೂ ಮಾರ್ಗದರ್ಶಕವಾಗಿವೆ.ಕಾಯಕವೇ ಕೈಲಾಸ ಎಂಬ ಸಂದೇಶದ ಮೂಲಕ ಪ್ರಾಮಾಣಿಕ ಶ್ರಮದ ಮಹತ್ವ ಸಾರಿದರು. ಸಮಾಜದಲ್ಲಿ ಮೂಢನಂಬಿಕೆಗಳಿಗೆ ಅವಕಾಶ ನೀಡದೇ ಜ್ಞಾನ, ಸತ್ಯ ಹಾಗೂ ಮಾನವೀಯ ಮೌಲ್ಯ ಬೆಳೆಸಬೇಕು ಎಂದು ಹೇಳಿದರು.

ಪ್ರವಚನಕಾರ ಕಲ್ಲೂರಿನ ಪಂಡಿತ ರಾಚಯ್ಯ ಸ್ವಾಮಿಗಳು ಮಾತನಾಡಿ,ಶರಣರ ಸಂತರು ಸಮಾಜಕ್ಕೆ ನೀಡಿದ ವಚನ ಸಾಹಿತ್ಯ ಇಂದು ಕೂಡ ಮಾನವೀಯತೆ, ಸಮಾನತೆ ಮತ್ತು ವೈಚಾರಿಕ ಬದುಕಿನ ದಾರಿ ತೋರಿಸುತ್ತಿದೆ. ಅವರ ಸಂದೇಶಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದ್ದು, ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸುವ ಶಕ್ತಿಯಾಗಿದೆ ಎಂದರು.

ಪುರಾಣ ಪ್ರವಚನ ಆಲಿಸುವುದರಿಂದ ಒಳ್ಳೆಯ ವಿಚಾರ ಮೂಡುತ್ತವೆ. ಭಗವಂತನ, ಶರಣರ, ಮಹಾತ್ಮರ ಜೀವನ ಚರಿತ್ರೆ ಕೇಳುವುದರಿಂದ ವ್ಯಕ್ತಿತ್ವ ಉನ್ನತಿಗೊಳ್ಳುತ್ತದೆ. ಮನದ ಮೈಲಿಗೆ ತೊಳೆಯಲು ಸುಜ್ಞಾನ ಬೇಕು ಮಹಾತ್ಮರ ಶರಣರ ನುಡಿಗಳಿಂದ ಸುಜ್ಞಾನ ದೊರಕುತ್ತದೆ ಸುಜ್ಞಾನದಿಂದ ಬದುಕು ಶ್ರೇಷ್ಟವಾಗುತ್ತದೆ ಎಂದು ತಿಳಿಸಿದರು.

ಕೃಷ್ಣಪ್ಪ ಬೆಣ್ಣೂರು ಸಂಗೀತ ಪ್ರಸ್ತುಪಡಿಸಿದರು. ಜಗನ್ನಾಥ ಕೆಂಧೂಳಿ ತಬಲಾ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಆಯೋಜಕರು, ನೂರಾರು ಜನ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರವಚನ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಅನ್ನಸಂತರ್ಪಣೆಗೈದವರಿಗೆ ಶ್ರೀಗಳಿಂದ ಸನ್ಮಾನಿಸಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕಗಿರಿಯಲ್ಲಿ ಮಧ್ಯರಾತ್ರಿ ದಾಳಿಂಬೆ ಕಳ್ಳತನ
ಕನಕಗಿರಿ ಜನತೆಯಲ್ಲಿ 5ನೇ ಉತ್ಸವದ ಸಂಭ್ರಮ