ಜನರ ಸಮಸ್ಯೆಗೆ ಸ್ಪಂದನೆ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕೊಳ್ಳೇಗಾಲ ಪಟ್ಟಣದ 31ವಾರ್ಡಗಳಲ್ಲೂ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಅಗತ್ಯ ಪರಿಹಾರಕ್ಕಾಗಿ ಹಾಗೂ ತುರ್ತು ಸ್ಪಂದನೆ, ಮೂಲ ಸೌಲಭ್ಯ ಇನ್ನಿತರ ಸಮಸ್ಯೆ ನಿವಾರಣೆ ಹಿನ್ನೆಲೆ ನ.12ರಿಂದ ವಾಕ್ಟು ವಾರ್ಡ್ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೇಖಾ ರಮೇಶ್ ತಿಳಿಸಿದರು.ಈ ಸಂಬಂಧ ನಗರಸಭೆಯಲ್ಲಿ ಸದಸ್ಯರ ಸಭೆ ನಡೆಸಿದ ಅವರು ಪಟ್ಟಣದ ಲಿಂಗಣಾಪುರ ಬಡಾವಣೆಯಿಂದ ವಾಕ್ಟು ವಾರ್ಡ್ ಭೇಟಿ ಕಾರ್ಯಕ್ರಮವನ್ನು ಆರಂಭಿಸುವ ಕುರಿತು ಆಯುಕ್ತ ರಾಜಣ್ಣ ಜೊತೆ ಚರ್ಚಿಸಿ ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಮಾರ್ಗದರ್ಶನದ ಹಿನ್ನೆಲೆ ಈ ಕಾರ್ಯಮ ಆಯೋಜಿಸಿದ್ದು 12ರ ಬೆಳಿಗ್ಗೆ 6ಕ್ಕೆ ಲಿಂಗಣಾಪುರದಿಂದ ಪ್ರಾರಂಭವಾಗಲಿದ್ದು 31ವಾರ್ಡ್ಗಳಲ್ಲೂ ಜರುಗಲಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಇಂತಹ ಜನಸ್ಪಂದನಾ ಕಾರ್ಯಕ್ರಮಕ್ಕೆ ಅಧಿಕಾರಿಗಳು ಹೆಚ್ಚಿನ ರೀತಿ ಸಹಕರಿಸಬೇಕು. ಕೇಂದ್ರ ಸ್ಥಾನದಲ್ಲುಳಿದು ಸಹಕರಿಸಬೇಕು, ಈ ಕಾರ್ಯಕ್ರಮದಿಂದ ಸಾಕಷ್ಟು ಸಮಸ್ಯೆ ನಿವಾರಣೆಯಾಗಲಿದೆ ಎಂಬ ವಿಶ್ವಾಸ ಹೊಂದಲಾಗಿದೆ ಎಂದರು.ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್, ನಗರಸಭಾ ಮಾಜಿ ಅಧ್ಯಕ್ಷ ಬಸ್ತಿಪುರ ಶಾಂತರಾಜು, ರಮೇಶ್, ಸದಸ್ಯ ಎಸ್. ರಾಘವೇಂದ್ರ, ಎಲ್.ನಾಗೇಂದ್ರ, ಸುಮಾ ಸುಬ್ಬಣ್ಣ, ಎಸ್.ಮಂಜುನಾಥ್, ಮಾಜಿ ಸದಸ್ಯೆ ಕೃಷ್ಣವೇಣಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಬಸ್ತಿಪುರ ರವಿ ಇತರರು ಇದ್ದರು.