ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಸೋಮವಾರ ಇಲ್ಲಿನ ತಾಲೂಕು ಕಚೇರಿ ಮುಂಭಾಗ ಹಕ್ಕೊತ್ತಾಯ ಮಂಡಿಸಿದ ಕನ್ನಡ ಪಕ್ಷದ ಮುಖಂಡರು, ತಹಸೀಲ್ದಾರ್ ವಿಭಾ ವಿದ್ಯಾರಾಥೋಡ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಬಳಿಕ ಮಾತನಾಡಿದ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ ನಾಯಕ್, ಮಂಡ್ಯ ಜಿಲ್ಲೆ ವಿಶೇಷವಾಗಿ ನಾಟಿ ಕೋಳಿ ಸಾರು ಮತ್ತು ರಾಗಿ ಮುದ್ದೆಗೆ ಹೆಸರಾಗಿದೆ. ಸಮ್ಮೇಳನಗಳಲ್ಲಿ ಸ್ಥಳೀಯ ತಿಂಡಿ ವಿಶೇಷಗಳನ್ನು ಆದರಿಸುವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ. ಹೀಗಾಗಿ ಈ ಬಾರಿ ಮಾಂಸಾಹಾರವನ್ನೂ ಬಡಿಸುವ ವ್ಯವಸ್ಥೆಯಾಗಬೇಕು. ಆಹಾರ ವಿಚಾರದಲ್ಲಿ ಮಡಿವಂತಿಕೆ ಅನಗತ್ಯ ಎಂದು ಆಗ್ರಹಿಸಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಜಿಲ್ಲಾಧ್ಯಕ್ಷ ಮುನಿಪಾಪಯ್ಯ, ಪ್ರಧಾನ ಕಾರ್ಯದರ್ಶಿ ಬೋರೇಗೌಡ, ಖಜಾಂಚಿ ಕೆ.ಎನ್.ಕುಮಾರ್, ಸಂಚಾಲಕ ಮೂರ್ತಿ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಹನುಮೇಗೌಡ, ನರಸಿಂಹಮೂರ್ತಿ, ಛಲವಾದಿ ಮಹಾಸಭಾದ ಗುರುರಾಜಪ್ಪ, ದೊಡ್ಡತುಮಕೂರು ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.