ಗಾಂಧಿ ಮಾರ್ಗ ಬಿಟ್ಟು, ಭಗತ್ ಮಾದರಿ ಹೋರಾಟದ ಎಚ್ಚರಿಕೆ

KannadaprabhaNewsNetwork |  
Published : Aug 28, 2026, 03:30 AM IST
ಫೋಟೋ- ಗೊಬ್ಬೂರ ಟ್ಯಾಂಕ್‌ಮಳೆ ಇಲ್ಲದೆ ಸಂಪೂರ್ಣ ಬರಿದಾಗಿರುವ ಗೊಬ್ಬೂರ ಕರೆಯ ನೋಟ. ಜಿಲ್ಲೆಯ 170 ಕೆರೆಗಳಲ್ಲಿ 150 ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ. | Kannada Prabha

ಸಾರಾಂಶ

ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕ ಚಾಲನೆಗೆ 3 ಟಿಎಂಸಿ ನೀರು ಬಿಡುವ ರೈತವಿರೋಧಿ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣ ಹಿಂಪಡೆಯದಿದ್ದರೆ, ಗಾಂಧಿ ದಾರಿಯ ಹೋರಾಟ ನಡೆಸಿಕೊಂಡು ಬಂದ ರೈತರು ಮುಂದೆ ಭಗತ್ ಸಿಂಗ್ ರೀತಿಯ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಭಾರತೀಯ ರೈತ ಒಕ್ಕೂಟವು ಎಚ್ಚರಿಸಿದೆ.

- ಭದ್ರಾ ಮೇಲ್ದಂಡೆಗೆ 3 ಟಿಎಂಸಿ ನೀರು ಹರಿಸುವ ಆದೇಶ ಹಿಂಪಡೆಯಲು ತಾಕೀತು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕ ಚಾಲನೆಗೆ 3 ಟಿಎಂಸಿ ನೀರು ಬಿಡುವ ರೈತವಿರೋಧಿ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣ ಹಿಂಪಡೆಯದಿದ್ದರೆ, ಗಾಂಧಿ ದಾರಿಯ ಹೋರಾಟ ನಡೆಸಿಕೊಂಡು ಬಂದ ರೈತರು ಮುಂದೆ ಭಗತ್ ಸಿಂಗ್ ರೀತಿಯ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಭಾರತೀಯ ರೈತ ಒಕ್ಕೂಟವು ಎಚ್ಚರಿಸಿದೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಗುರುವಾರ ಭಾರತೀಯ ರೈತ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ರೈತರು, ಮುಖಂಡರು, ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆಗೆ ನೀರು ಕೊಡುವ ಸರ್ಕಾರದ ಆದೇಶವು ಅಚ್ಚುಕಟ್ಟು ರೈತರಿಗೆ ಮರಣಶಾಸನವಾಗಿದೆ. ಸರ್ಕಾರ ಇನ್ನೆರಡು ದಿನಗಳಲ್ಲೇ ತನ್ನ ಆದೇಶ ಹಿಂಪಡೆಯದಿದ್ದರೆ ದಾವಣಗೆರೆ ಅಚ್ಚುಕಟ್ಟು ರೈತರು ತೀವ್ರ ಸ್ವರೂಪದ ಹೋರಾಟ ನಡೆಸುವುದು ನಿಶ್ಚಿತ ಎಂದರು.

ಭಾರತೀಯ ರೈತ ಒಕ್ಕೂಟದ ಗೌರವಾಧ್ಯಕ್ಷ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ರಾಜ್ಯ ಸರ್ಕಾರವು ಭದ್ರಾ ಮೇಲ್ದಂಡೆಗೆ 3 ಟಿಎಂಸಿ ನೀರು ಹರಿಸಲು ಆದೇಶಿಸಿದ್ದು, ಹೀಗೆ ಆದೇಶ ಹೊರಡಿಸುವುದರ ಹಿಂದೆ ರಾಜಕೀಯವಿದೆ. ನೀರಿನ ವಿಚಾರದಲ್ಲಿ ರಾಜಕಾರಣ ಸಲ್ಲದು. ರೈತರು ಉಗ್ರ ಹೋರಾಟ ನಡೆಸಲು ಸರ್ಕಾರವೇ ಅವಕಾಶ ಮಾಡಿಕೊಟ್ಟು, ವೇದಿಕೆ ಮಾಡಿಕೊಡುತ್ತಿರುವುದು ಕೆಟ್ಟ ಸಂಸ್ಕೃತಿಯಾಗಿದೆ ಎಂದು ಎಚ್ಚರಿಸಿದರು.

ಒಕ್ಕೂಟದ ಅಧ್ಯಕ್ಷ ಶಾಮನೂರು ಎಚ್.ಆರ್. ಲಿಂಗರಾಜ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯಡಿ ವಾಣಿವಿಲಾಸಸಾಗರ, ಕಡೂರು- ತರೀಕೆರೆ ಭಾಗದ ಕೆರೆಗಳನ್ನು ತುಂಬಿಸಲು 5.97 ಟಿಎಂಸಿ ನೀರನ್ನು ಬಿಡಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಮೊದಲ ಹಂತವಾಗಿ ಮೇಲ್ದಂಡೆಗೆ 3 ಟಿಎಂಸಿ ನೀರು ಹರಿಸಲು ಆದೇಶ ಹೊರಡಿಸಿದೆ. ಇದರಿಂದ ಭದ್ರಾ ಡ್ಯಾಂ ವ್ಯಾಪ್ತಿಯ ಅಚ್ಚುಕಟ್ಟು ರೈತರಿಗೆ ಅನ್ಯಾಯವಾಗಲಿದೆ. ಚಿಕ್ಕಮಗಳೂರು ಜಿಲ್ಲೆ ಮುತ್ತಿನಕೊಪ್ಪ ಬಳಿ ತುಂಗಾ ನದಿಯಿಂದ 17.41 ಟಿಎಂಸಿ ನೀರನ್ನು ಭದ್ರಾ ಡ್ಯಾಂಗೆ ಲಿಫ್ಟ್ ಮಾಡಿದ ನಂತರೇ ಮೇಲ್ದಂಡೆಗೆ ನೀರು ಹರಿಸಲು ಸರ್ಕಾರ ನಿರ್ಣಯ ಕೈಗೊಳ್ಳಲಿ ಎಂದು ತಾಕೀತು ಮಾಡಿದರು.

ಭಾರತೀಯ ರೈತ ಒಕ್ಕೂಟದ ಮುಖಂಡ ಬೆಳವನೂರು ಬಿ.ನಾಗೇಶ್ವರ ರಾವ್ ಮಾತನಾಡಿ, ಭದ್ರಾ ಮೇಲ್ದಂಡೆಗೆ ಸದ್ಯ ನೀರು ಹರಿಸುವುದು ಬೇಡ. ತುಂಗಾ ನದಿಯಿಂದ ನೀರು ಎತ್ತಿಕೊಟ್ಟರೆ ನಮಗೆ ಅಭ್ಯಂತರವಿಲ್ಲ. ಭದ್ರಾ ಅಚ್ಚುಕಟ್ಟು ಕಾಲುವೆ ವ್ಯಾಪ್ತಿಯ ಅಕ್ರಮ ಪಂಪ್‌ಸೆಟ್‌ಗಳ ಸಂಖ್ಯೆ ಹೆಚ್ಚಾಗಿದೆ. ಇದನ್ನು ತಡೆಯುವಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲಾ ಆಡಳಿತಗಳು ವಿಫಲವಾಗಿವೆ. ಅಧಿಕಾರಿಗಳು ಬರೀ ಲೇಔಟ್ ಅನುಮೋದನೆ, ನವೀಕರಣಕ್ಕೆ ಸೀಮಿತವಾಗುತ್ತಿದ್ದಾರೆ. ಭದ್ರಾ ಅಚ್ಚುಕಟ್ಟು ಪ್ರದೇಶದ ಸಂಸದರು, ಶಾಸಕರು ಅಕ್ರಮ ಪಂಪ್ ಸೆಟ್‌ಗಳ ತೆರವಿಗೆ ಸಂಬಂಧಿಸಿದ ಸುಪ್ರೀಂ ಮತ್ತು ಹೈಕೋರ್ಟ್ ಆದೇಶ ಪಾಲಿಸದಿದ್ದರೆ, ಆ ಎಲ್ಲರ ವಿರುದ್ಧ ರೈತರು ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡರಾದ ಮಹೇಶ್ವರಪ್ಪ, ಮಾಜಿ ಮೇಯರ್ ಎಚ್.ಎನ್. ಗುರುನಾಥ, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡ ಎಚ್.ಜಿ.ಗಣೇಶಪ್ಪ, ಜಿಮ್ಮಿ ಹನುಮಂತಪ್ಪ, ಆವರಗೊಳ್ಳ ಬಿ.ಎಂ. ಷಣ್ಮುಖಯ್ಯ, ಮಲ್ಲಿಕಾರ್ಜುನ ಕೆ.ಕಾಶೀಪುರ, ಕುಂದುವಾಡ ಹನುಮಂತಪ್ಪ, ಎ.ಎಂ. ಮಂಜುನಾಥ, ಬೇತೂರು ಉಜ್ಜಣ್ಣ, ಅತ್ತಿಗೆರೆ ರವಿ, ಕುಂದುವಾಡ ಅಣ್ಣಪ್ಪ ಇತರರು ಇದ್ದರು.

- - -

-27ಕೆಡಿವಿಜಿ2, 3:

ದಾವಣಗೆರೆ ಸರ್ಕ್ಯೂಟ್ ಹೌಸ್‌ನಲ್ಲಿ ಗುರುವಾರ ಭಾರತೀಯ ರೈತ ಒಕ್ಕೂಟದ ಧುರೀಣ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನೇತೃತ್ವದಲ್ಲಿ ಭದ್ರಾ ಅಚ್ಚುಕಟ್ಟು ರೈತರ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭದ್ರಾ ಮೇಲ್ದಂಡೆ ನೀರು ಆದೇಶ ಹಿಂಪಡೆಗೆ ತಾಕೀತು
355ನೇ ಆರಾಧನಾ ಮಹೋತ್ಸವ ಆರಂಭ