ತ್ಯಾಜ್ಯ ವಿಂಗಡಣೆ ಪರಿಶೀಲನೆ: ಹೊಟೇಲ್‌ಗಳಿಗೆ ದಾಳಿ

KannadaprabhaNewsNetwork |  
Published : Apr 23, 2025, 12:33 AM IST
ಪಾಲಿಕೆ ಆಯುಕ್ತರ ನೇತೃತ್ವದ ತಂಡದಿಂದ ಹೊಟೇಲ್‌ಗಳಿಗೆ ದಾಳಿ  | Kannada Prabha

ಸಾರಾಂಶ

ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಸುತ್ತಮುತ್ತಲಿನ ಹೊಟೇಲ್‌ಗಳಿಗೆ ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿ, ಸಿಬ್ಬಂದಿ ತಂಡ, ತ್ಯಾಜ್ಯ ವಿಂಗಡನೆಗೆ ಸಂಬಂಧಿಸಿ ನಿರ್ಲಕ್ಷ ವಹಿಸುತ್ತಿರುವರಿಗೆ ದಂಡ ವಿಧಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಸುತ್ತಮುತ್ತಲಿನ ಹೊಟೇಲ್‌ಗಳಿಗೆ ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿ, ಸಿಬ್ಬಂದಿ ತಂಡ, ತ್ಯಾಜ್ಯ ವಿಂಗಡನೆಗೆ ಸಂಬಂಧಿಸಿ ನಿರ್ಲಕ್ಷ ವಹಿಸುತ್ತಿರುವರಿಗೆ ದಂಡ ವಿಧಿಸಿದೆ.

ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್‌ ನೇತೃತ್ವದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆ ದಿಢೀರ್ ಭೇಟಿ ನೀಡಿ ನಿಯಮ ಪಾಲಿಸದ ಹೊಟೇಲ್‌ಗವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು.ಮನೆಗಳು, ಹೊಟೇಲ್‌ಗಳು, ಅಪಾರ್ಟ್‌ಮೆಂಟ್ ಸೇರಿದಂತೆ ತ್ಯಾಜ್ಯ ಉತ್ಪತ್ತಿಯಾಗುವಲ್ಲಿ ಹಸಿ, ಒಣ ಹಾಗೂ ಸ್ಯಾನಿಟರಿ ಪ್ಯಾಡ್‌ಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡುವಂತೆ ಈಗಾಗಲೇ ಪಾಲಿಕೆಯಿಂದ ಸೂಚನೆ ನೀಡಲಾಗಿದೆ. ಸೂಚನೆ ಪಾಲನೆಯಾಗುತ್ತಿರುವ ಕುರಿತಂತೆ ನಗರದ ಕುಡ್ಲ ಕ್ವಾಲಿಟಿ ರೆಸ್ಟೋರೆಂಟ್, ಫುಡ್ ಜಂಕ್ಷನ್, ಸಮಕ್ ಡೈನ್, ಕೈರಳಿ ಸೇರಿದಂತೆ ಕೆಲ ಹೊಟೇಲ್‌ಗಳಿಗೆ ಭೇಟಿ ನೀಡಿ ತ್ಯಾಜ್ಯ ವಿಂಗಡನೆಯಾಗುತ್ತಿರುವ ಕುರಿತಂತೆ ಪಾಲಿಕೆ ಆಯುಕ್ತರು ಪರಿಶೀಲನೆ ನಡೆಸಿದರು.ನಾಲ್ಕು ಹೊಟೇಲ್‌ಗಳ ಭೇಟಿಯ ವೇಳೆ ತ್ಯಾಜ್ಯ ವಿಂಗಡನೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ತಲಾ ೫,೦೦೦ ರು.ನಂತೆ ದಂಡ ವಿಧಿಸಲಾಗಿದೆ.ಸಾರ್ವಜನಿಕರು ಸೇರಿದಂತೆ ತ್ಯಾಜ್ಯ ಉತ್ಪತ್ತಿಯಾಗುವ ಇತರ ಎಲ್ಲ ಸ್ಥಳಗಳಿಂದ ಹಸಿ, ಒಣ ಹಾಗೂ ಸ್ಯಾನಿಟರಿ ಪ್ಯಾಡ್‌ಗಳನ್ನು ಪ್ರತ್ಯೇಕವಾಗಿ ವಿಂಗಡಿಸಿಯೇ ವಾಹನದಲ್ಲಿ ಬರುವ ಪೌರ ಕಾರ್ಮಿಕರಿಗೆ ಒದಗಿಸಬೇಕು. ಈ ಬಗ್ಗೆ ಈಗಾಗಲೇ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ನಗರದ ಅಂಬೇಡ್ಕರ್ ವೃತ್ತ ಸಮೀಪದ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿದ್ದು, ತ್ಯಾಜ್ಯ ವಿಂಗಡನೆಯಲ್ಲಿ ಸೂಚನೆ ಪಾಲಿಸದವರಿಗೆ ತಲಾ ೫ ಸಾವಿರ ರು. ದಂಡ ವಿಧಿಸಲಾಗಿದೆ. ಒಟ್ಟು ೨೦,೦೦೦ ರು. ದಂಡ ಸಂಗ್ರಹಿಸಲಾಗಿದೆ. ತ್ಯಾಜ್ಯ ವಿಂಗಡನೆಯ ಅಗತ್ಯತೆ ಬಗ್ಗೆಯೂ ಈ ಸಂದರ್ಭ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್‌ ಅವರು ಜಾಗೃತಿಯನ್ನು ಮೂಡಿಸಿದರು.ದಂಡ ಮೊತ್ತ ಹೆಚ್ಚಳ ಎಚ್ಚರಿಕೆ:

ತ್ಯಾಜ್ಯ ವಿಂಗಡನೆಯಲ್ಲಿ ಮುಂದೆಯೂ ಈಗಾಗಲೇ ದಂಡ ವಿಧಿಸಿರುವ ಸಂಸ್ಥೆಗಳವರು ನಿರ್ಲಕ್ಷ ವಹಿಸಿದರೆ ದಂಡದ ಮೊತ್ತವನ್ನು ಹೆಚ್ಚಿಸಲಾಗುವುದು. ಈ ದಿಢೀರ್ ಭೇಟಿ ಪಾಲಿಕೆಯ ಇತರ ವಾರ್ಡ್‌ಗಳಲ್ಲಿಯೂ ನಿರಂತರವಾಗಿ ಮುಂದುವರಿಯಲಿದೆ. ಸಾರ್ವಜನಿಕರು ಹಾಗೂ ಸಂಬಂಧಪಟ್ಟವರು ಈ ಬಗ್ಗೆ ಸಹಕರಿಸಬೇಕು. ತ್ಯಾಜ್ಯ ವಿಂಗಡನೆ ಮಾಡಿಯೇ ವಿಲೇವಾರಿಗೆ ನೀಡಬೇಕು ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್‌ ತಿಳಿಸಿದ್ದಾರೆ.ದಿಢೀರ್ ಕಾರ್ಯಾಚರಣೆಯಲ್ಲಿ ಪಾಲಿಕೆ ಆಯುಕ್ತರ ಜತೆಯಲ್ಲಿ ಆರೋಗ್ಯ ನಿರೀಕ್ಷಕ ಭಾಸ್ಕರ ಸಿ., ಸಾನಿಟರಿ ಸೂಪರ್‌ವೈಸರ್ ಲಕ್ಷ್ಮಣ ನಾವೂರ, ಸ್ವಚ್ಛತಾ ಸೂಪರ್‌ವೈಸರ್ ವಸಂತ ಕುಮಾರ್ ಎಚ್, ಕಂದಾಯ ಅಧಿಕಾರಿ ಮತ್ತು ವಲಯ ಆಯುಕ್ತ ವಿಜಯ ಕುಮಾರ್ ಹಾಗೂ ವಾರ್ಡ್ ನಂ. ೩೮ರ ಮನೆ ಕಸ ವಿಲೇವಾರಿ ವಾಹನದ ಚಾಲಕ ಹಾಗೂ ಸಿಬ್ಬಂದಿ ಇದ್ದರು.ನಿಷೇಧಿತ ಪ್ಲಾಸ್ಟಿಕ್ ಬಳಕೆಗೂ ದಂಡಸುರತ್ಕಲ್ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಕುರಿತಂತೆಯೂ ವಲಯ ಆಯುಕ್ತರು ಭೇಟಿ ನೀಡಿ ಪರಿಶೀಲಿಸಿ ದಂಡ ವಿಧಿಸಿದರು. ಮಂಗಳವಾರ ಈ ಸಂಬಂಧ ನಡೆಸಲಾದ ದಾಳಿಯಲ್ಲಿ ಒಟ್ಟು ೩,೫೦೦ ರು. ದಂಡ ಸಂಗ್ರಹಿಸಲಾಗಿದೆ ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ