ಹೂವಿನಹಡಗಲಿ: ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆ ಬ್ಯಾರೇಜ್ಗೆ ಒಳಹರಿವು ಹೆಚ್ಚಿದ್ದು, ಕಾಲುವೆ, ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಮಳೆ ಇಲ್ಲದೇ ಒಣಗುತ್ತಿದ್ದ ಬೆಳೆಗಳಿಗೆ ಆಸರೆಯಾಗಿದೆ.
ಮಳೆ ಇಲ್ಲದೇ ಬತ್ತಿ ಹೋಗಿರುವ ಕೆರೆಗಳಿಗೆ ಬ್ಯಾರೇಜ್ ಹಿನ್ನೀರಿನ ಮಾಗಳ ಬಳಿಯ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಜಾಕ್ವೆಲ್ಗಳಿಂದ ತಾಲೂಕಿನ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಜನ ಜಾನುವಾರುಗಳಿಗೆ ನೀರಿನ ದಾಹ ನೀಗಿದಂತಾಗಿದೆ. ಜತೆಗೆ ರೈತರ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟವೂ ಅಭಿವೃದ್ಧಿಯಾಗುತ್ತದೆ.
ರೈತರು ಮಳೆ ಹಾಗೂ ಕಾಲುವೆ ನೀರು ನಂಬಿಕೊಂಡು ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಸಕಾಲದಲ್ಲಿ ಮಳೆ ಇಲ್ಲದೇ ಬೆಳೆಗಳು ಒಣಗುತ್ತಿದ್ದವು. ಕಾಲುವೆಗಳಿಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.ಚಾಲನೆ ನೀಡಿದ ಶಾಸಕ:
ತಾಲೂಕಿನ ಎಲ್ಲ ಕೆರೆಗಳು ಮಳೆ ಇಲ್ಲದೇ ಒಣಗಿ ಹೋಗಿವೆ. ಮಾಗಳ ಬಳಿಯ ಜಾಕ್ವೆಲ್ನಿಂದ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮೂಲಕ ನೀರು ಹರಿಸಲಾಗುತ್ತಿದೆ. ಶಾಕಾರ ಬಳಿಯ ಜಾಕ್ವೆಲ್ನಿಂದ ಹ್ಯಾರಡ ಹೊಸ ಮಲಿಯಮ್ಮ, ಹಳೆ ಮಲಿಯಮ್ಮ ಮತ್ತು ದಾಸನಹಳ್ಳಿ ಕೆರೆಗಳಿಗೂ ನೀರು ಹರಿಸಲಾಗುತ್ತಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯುವ ಜತೆಗೆ, ಅಂತರ್ಜಲ ಮಟ್ಟವೂ ಹೆಚ್ಚಳವಾಗಿ ರೈತರ ಕೊಳವೆ ಬಾವಿಗಳ ಮೂಲಕ ಬೆಳೆಗಳನ್ನು ಬೆಳೆಯಲು ಅನುಕೂಲವಾಗಿದೆ ಎಂದರು. ಈ ವೇಳೆ ಯೋಜನೆಯ ಎಇಇ ರಾಘವೇಂದ್ರ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.