ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಪಟ್ಟಣದ ಪ್ರಮುಖ ರಸ್ತೆ, ಬಸ್ ನಿಲ್ದಾಣದ ಸುತ್ತಮುತ್ತ ಹಾಗೂ ವಿವಿಧ ಬಡಾವಣೆಗಳಲ್ಲಿ ತಳ್ಳುಗಾಡಿ ಮೂಲಕ ವ್ಯಾಪಾರ ಭರದಿಂದ ನಡೆಯುತ್ತಿದೆ.
ಹಸಿದಾಗ ಹಲಸು, ಉಂಡಾಗ ಮಾವು ಎಂಬ ಗಾದೆ ಮಾತಿನಂತೆ ಹೊಟ್ಟೆ ತುಂಬಿಸುವ ಗುಣದ ಜತೆಗೆ ಸಾಕಷ್ಟು ಪೌಷ್ಟಿಕಾಂಶ ಹೊಂದಿರುವ ಹಲಸು ಗ್ರಾಮೀಣ ಹಾಗೂ ನಗರ ಪ್ರದೇಶದ ಜನರ ನೆಚ್ಚಿನ ಹಣ್ಣಾಗಿದೆ. ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವ ಈ ಹಣ್ಣಿನ ಸಿಹಿ ರುಚಿ ಹಾಗೂ ಪರಿಮಳ ಗ್ರಾಹಕರನ್ನು ಸೆಳೆಯುತ್ತಿದೆ.ಮಲೆನಾಡಿನಿಂದ ಕುಷ್ಟಗಿಗೆ: ಶಿವಮೊಗ್ಗ, ಸಾಗರ, ಶಿಕಾರಿಪುರ, ಶಿರಸಿ ಸೇರಿದಂತೆ ಮಲೆನಾಡಿನ ವಿವಿಧ ಭಾಗಗಳಲ್ಲಿ ಬೆಳೆಯುವ ಹಲಸಿನ ಹಣ್ಣುಗಳನ್ನು ಹೊಸಪೇಟೆ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಿಂದ ಖರೀದಿಸಿ ಕುಷ್ಟಗಿಗೆ ತರಲಾಗುತ್ತಿದೆ. ಕೆಲವರು ಸಂಪೂರ್ಣ ಹಣ್ಣನ್ನು ಮಾರಾಟ ಮಾಡುತ್ತಿದ್ದರೆ, ಇನ್ನೂ ಕೆಲವರು ಕೆಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ವ್ಯಾಪಾರದಿಂದ ಹಲವಾರು ಕುಟುಂಬಗಳು ಜೀವನೋಪಾಯ ಕಂಡುಕೊಂಡಿವೆ.
ಆರೋಗ್ಯದ ಕಣಜ: ಹಲಸಿನ ಹಣ್ಣು ವಿಟಮಿನ್–ಎ, ವಿಟಮಿನ್–ಸಿ, ಪೊಟ್ಯಾಶಿಯಂ, ಕ್ಯಾಲ್ಸಿಯಂ ಹಾಗೂ ನಾರಿನಾಂಶ ಸಮೃದ್ಧವಾಗಿ ಹೊಂದಿದೆ. ಇದು ಜೀರ್ಣಕ್ರಿಯೆ ಸುಧಾರಿಸಲು, ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು,ಹೃದಯದ ಆರೋಗ್ಯ ಕಾಪಾಡಲು ಮತ್ತು ಮೂಳೆ ಬಲಪಡಿಸಲು ಸಹಕಾರಿ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ. ಹಲಸಿನ ಬೀಜಗಳಲ್ಲಿಯೂ ಪ್ರೋಟೀನ್ ಮತ್ತು ಪೌಷ್ಟಿಕಾಂಶ ಅಧಿಕವಾಗಿದ್ದು, ಅವುಗಳಿಂದಲೂ ಹಲವು ಬಗೆಯ ತಿನಿಸು ತಯಾರಿಸಲಾಗುತ್ತದೆ.
ತುಮಕೂರ, ಹೊಸಪೇಟೆಯಿಂದ ಗುಣಮಟ್ಟದ ಹಲಸಿನ ಹಣ್ಣು ತಂದು ಕುಷ್ಟಗಿಯಲ್ಲಿ ಮಾರಾಟ ಮಾಡುತ್ತಿದ್ದೇವೆ. ಸೀಸನ್ ಆರಂಭವಾಗಿರುವುದರಿಂದ ಪ್ರತಿದಿನ ಉತ್ತಮ ವ್ಯಾಪಾರವಾಗುತ್ತಿದೆ. ತೊಳೆ ತೆಗೆದು ಕೆಜಿಗೆ 200ಕ್ಕೆ ಮಾರಾಟ ಮಾಡುತ್ತಿದ್ದೇವೆ. ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಕುಷ್ಟಗಿ ಹಲಸು ಹಣ್ಣಿನ ವ್ಯಾಪಾರಿ ಅಯ್ಯನಗೌಡ ಕಟ್ಟಿಗೌಡ್ರ ತಿಳಿಸಿದ್ದಾರೆ.